ಇವತ್ತು ಏಪ್ರಿಲ್ 1, ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಈ ಮಾದರಿಯ ಹಣ ವರ್ಗಾವಣೆ ಇರೋದಿಲ್ಲ, ಗಮನಿಸಿ

Avoid NEFT transactions on April 1st: ಹೊಸ ಹಣಕಾಸು ವರ್ಷಾರಂಭದ ವಿಧಿವಿಧಾನಗಳಿರುವ ಹಿನ್ನೆಲೆಯಲ್ಲಿ ಏಪ್ರಿಲ್ 1ರಂದು ಎನ್​ಇಎಫ್​ಟಿ ವಹಿವಾಟು ಅಲಭ್ಯ ಇರುತ್ತದೆ ಅಥವಾ ವಹಿವಾಟು ವಿಳಂಬವಾಗಬಹುದು ಎಂದು ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ. ಇದು ಏಪ್ರಿಲ್ 1ರಂದು ಇರುವ ಅಡಚಣೆ ಮಾತ್ರ. ಇಂದು ಬೇರೆ ಪಾವತಿ ವಿಧಾನಗಳಾದ ಐಎಂಪಿಎಸ್, ಆರ್​ಟಿಜಿಎಸ್, ಯುಪಿಐ ಅನ್ನು ಬಳಸಿ ವಹಿವಾಟು ನಡೆಸಲು ತೊಂದರೆ ಇಲ್ಲ ಎಂದು ಹೇಳಿದೆ ಎಚ್​ಡಿಎಫ್​ಸಿ ಬ್ಯಾಂಕ್.

ಇವತ್ತು ಏಪ್ರಿಲ್ 1, ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಈ ಮಾದರಿಯ ಹಣ ವರ್ಗಾವಣೆ ಇರೋದಿಲ್ಲ, ಗಮನಿಸಿ
ಎಚ್​ಡಿಎಫ್​ಸಿ ಬ್ಯಾಂಕ್

Updated on: Apr 01, 2024 | 11:21 AM

ನವದೆಹಲಿ, ಏಪ್ರಿಲ್ 1: ಹೊಸ ಹಣಕಾಸು ವರ್ಷದ ಮೊದಲ ದಿನದಂದು ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್​ಫರ್ ಅಥವಾ ಎನ್​ಇಎಫ್​ಟಿ (NEFT) ಹಣ ವಹಿವಾಟು ಇರುವುದಿಲ್ಲ ಎಂದು ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ತಿಳಿಸಿದೆ. ಹೊಸ ಹಣಕಾಸು ವರ್ಷ ಆರಂಭದ ಹಿನ್ನೆಲೆಯಲ್ಲಿ ಕೆಲ ವಿಧಾನಗಳ (procedures) ಕಾರಣಕ್ಕೆ ಎನ್​ಇಎಫ್​ಟಿ ಟ್ರಾನ್ಸಾಕ್ಷನ್ ಲಭ್ಯ ಇರುವುದಿಲ್ಲ ಎನ್ನಲಾಗಿದೆ. ಕೆಲ ಆಯ್ದ ಗ್ರಾಹಕರಿಗೆ ಎನ್​ಇಎಫ್​ಟಿ ಟ್ರಾನ್ಸಾಕ್ಷನ್ ಸಾಧ್ಯವಾದರೂ ಕೂಡ ಹಣ ವರ್ಗಾವಣೆ ವಿಳಂಬವಾಗುತ್ತದೆ. ಹೀಗಾಗಿ, ಇವತ್ತು ಗ್ರಾಹಕರು ಎನ್​ಇಎಫ್​ಟಿ ಬಳಕೆ ಸಾಧ್ಯವಾದಷ್ಟೂ ಕೈಬಿಡುವುದು ಉತ್ತಮ. ಆದರೆ, ಬೇರೆ ಮಾದರಿಯ ಪಾವತಿ ವ್ಯವಸ್ಥೆಯನ್ನು ಬಳಸಲು ಯಾವ ಅಡ್ಡಿ ಇರುವುದಿಲ್ಲ.

ಎಚ್​ಡಿಎಫ್​ಸಿ ಗ್ರಾಹಕರಿಗೆ ಎನ್​ಇಎಫ್​ಟಿ ಪಾವತಿ ವಿಧಾನ ಏಪ್ರಿಲ್ ಒಂದರಂದು ಅಲಭ್ಯ ಇದ್ದರೂ ಐಎಂಪಿಎಸ್, ಆರ್​ಟಿಜಿಎಸ್ ಪಾವತಿ ವಿಧಾನಗಳು ಲಭ್ಯ ಇರುತ್ತವೆ. ಯುಪಿಐ ಮೂಲಕವೂ ಹಣದ ವಹಿವಾಟು ನಡೆಸಬಹುದು.

‘ಹಣಕಾಸು ವರ್ಷಾಂತ್ಯದ ವಿಧಿವಿಧಾನಗಳ ಕಾರಣಕ್ಕೆ ಎನ್​ಇಎಫ್​ಟಿ ವಹಿವಾಟು ಸಾಧ್ಯವಾಗದೇ ಹೋಗಬಹುದು, ಅಥವಾ ವಿಳಂಬಗೊಳ್ಳಬಹುದು. ಈ ಅವಧಿಯಲ್ಲಿ ಐಎಂಪಿಎಸ್, ಆರ್​ಟಿಜಿಎಸ್ ಅಥವಾ ಯುಪಿಐ ಮೂಲಕ ವಹಿವಾಟು ನಡೆಸಬೇಕೆಂದು ಕೋರುತ್ತೇವೆ. ಈ ವೇಳೆ ನಿಮಗೆ ತೊಂದರೆ ಆಗಿದ್ದರೆ ವಿಷಾದಿಸುತ್ತೇವೆ,’ ಎಂದು ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ಇಮೇಲ್ ಮೂಲಕ ಅಲರ್ಟ್ ಮಾಡಿದೆ.

ಇದನ್ನೂ ಓದಿ: ಏಪ್ರಿಲ್ 1ರಿಂದ ಆದಾಯ ತೆರಿಗೆ ಹಾಗೂ ಹಣಕಾಸು ನಿಯಮಗಳಲ್ಲಿ ಈ ಪ್ರಮುಖ ಬದಲಾವಣೆಗಳಿವೆ, ಗಮನಿಸಿ

ಈ ಸಹಾಯವಾಣಿ ಬಳಸಿ

ಏಪ್ರಿಲ್ 1ರಂದು ಎಚ್​ಡಿಎಫ್​ಸಿ ಬ್ಯಾಂಕ್ ಕಡೆಯಿಂದ ಹಣ ವರ್ಗಾವಣೆ ಮಾಡಲು ಯಾರಿಗಾದರೂ ಸಮಸ್ಯೆ ಎದುರಾದರೆ ಈ ಕೆಳಗಿನ ಸಹಾಯವಾಣಿ ನಂಬರ್ ಡಬಲ್ ಮಾಡಬಹುದು:

  • 18001600
  • 18002600

ಏಪ್ರಿಲ್ 1ರಂದು ಬ್ಯಾಂಕ್​ಗಳು ತೆರೆಯೋಲ್ಲ

ಹಣಕಾಸು ವರ್ಷ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ವಾರ್ಷಿಕ ಲೆಕ್ಕ ಮುಕ್ತಾಯಗೊಳಿಸುವ ಪ್ರಕ್ರಿಯೆ ಇರುವುದರಿಂದ ಏಪ್ರಿಲ್ 1ರಂದು ಬ್ಯಾಂಕುಗಳು ಸಾರ್ವಜನಿಕ ಸೇವೆಗೆ ಲಭ್ಯ ಇರುವುದಿಲ್ಲ. ಹಿಮಾಚಲಪ್ರದೇಶ, ಬಂಗಾಳ ಮೊದಲಾದ ಐದಾರು ರಾಜ್ಯಗಳನ್ನು ಬಿಟ್ಟು ಉಳಿದೆಡೆ ಬ್ಯಾಂಕ್ ಬಂದ್ ಆಗಿರುತ್ತವೆ.

ಇದನ್ನೂ ಓದಿ: ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ

ಇಂದು ಏಪ್ರಿಲ್ 1ರಂದು ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಹಿಂದಿರುಗಿಸಲು ಅಥವಾ ಡೆಪಾಸಿಟ್ ಮಾಡಲು ಅವಕಾಶ ಇರುವುದಿಲ್ಲ ಎಂದು ಆರ್​​ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us