Supreme Court: ಕಂಪೆನಿಗಳ ಸಾಲಕ್ಕೆ ವೈಯಕ್ತಿಕವಾಗಿ ಖಾತ್ರಿ ಆದ ಮಲ್ಯ ಟು ಅನಿಲ್ ಅಂಬಾನಿಯ ತನಕ ಹಣ ವಸೂಲಿಗೆ ಬಂತು ಬಲ

ವಿಜಯ್ ಮಲ್ಯರಿಂದ ಮೊದಲುಗೊಂಡು ಅನಿಲ್ ಅಂಬಾನಿ ತನಕ ತಮ್ಮ ಕಂಪೆನಿಗಳ ಸಾಲಕ್ಕೆ ವೈಯಕ್ತಿಕ ಗ್ಯಾರಂಟರ್ ಆಗಿದ್ದಾರೆ. ಆದ್ದರಿಂದ ಸುಪ್ರೀಂ ಕೋರ್ಟ್​ ಇಂದು ನೀಡಿರುವ ತೀರ್ಪು ಮಹತ್ವದ್ದಾಗಿದೆ.

Supreme Court: ಕಂಪೆನಿಗಳ ಸಾಲಕ್ಕೆ ವೈಯಕ್ತಿಕವಾಗಿ ಖಾತ್ರಿ ಆದ ಮಲ್ಯ ಟು ಅನಿಲ್ ಅಂಬಾನಿಯ ತನಕ ಹಣ ವಸೂಲಿಗೆ ಬಂತು ಬಲ
ಸುಪ್ರೀಂಕೋರ್ಟ್​

Updated on: May 21, 2021 | 1:47 PM

ಉದ್ಯಮಿ ವಿಜಯ್ ಮಲ್ಯರಿಂದ ಮೊದಲುಗೊಂಡು ಅನಿಲ್ ಅಂಬಾನಿ ತನಕ ಬಹಳ ಮಹತ್ವದ್ದಾದ ಆದೇಶವೊಂದನ್ನು ಸುಪ್ರೀಂ ಕೋರ್ಟ್ ಶುಕ್ರವಾರದಂದು ನೀಡಿದೆ. ಅದೇನು ಅಂದರೆ, ಕಂಪೆನಿಯ ಸಾಲಕ್ಕೆ ವೈಯಕ್ತಿಕವಾಗಿ ಗ್ಯಾರಂಟರ್​ ಆಗಿದ್ದಲ್ಲಿ, ಕಂಪೆನಿಯಿಂದ ಸಾಲ ಮರುಪಾವತಿ ಆಗದಿದ್ದಾಗ ಬ್ಯಾಂಕ್​ಗಳು ಸಾಲ ವಸೂಲಾತಿಗಾಗಿ ಗ್ಯಾರಂಟರ್ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸಾಲಬಾಧ್ಯತೆ ಹಾಗೂ ದಿವಾಳಿತನ ಸಂಹಿತೆ (IBC) ಅಡಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಭಾರತದ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ನ್ಯಾಯಮೂರ್ತಿಗಳಾದ ಎಲ್​. ನಾಗೇಶ್ವರ್ ರಾವ್, ಎಸ್​. ರವಿಂದ್ರ ಭಟ್ ಅವರನ್ನು ಒಳಗೊಂಡ ಪೀಠವು ತಿಳಿಸಿರುವ ಪ್ರಕಾರ, ಐಬಿಸಿಯ ತೀರುವಳಿ ಯೋಜನೆ ಇದೆ ಎಂದ ಮಾತ್ರಕ್ಕೆ ಬ್ಯಾಂಕ್​ಗಳಿಗೆ ನೀಡಬೇಕಾದ ಸಾಲದ ಜವಾಬ್ದಾರಿಯಿಂದ ವೈಯಕ್ತಿಕ ಗ್ಯಾರಂಟರ್ ಬಿಡುಗಡೆ ಆಗುವುದಕ್ಕೆ ಸಾಧ್ಯವಿಲ್ಲ ಎಂದಿದೆ.

ಈ ತೀರ್ಪಿನಲ್ಲಿ ನಾವು ಅಧಿಸೂಚನೆಯನ್ನು ಎತ್ತಿಹಿಡಿದಿದ್ದೇವೆ ಎಂದು ರವೀಂದ್ರ ಭಟ್ ಹೇಳಿದ್ದಾರೆ. ತೀರ್ಪಿನ ಅಂತಿಮ ಸಾರಾಂಶ ಓದುವಾಗ, ಅಧಿಸೂಚನೆಯ ಸಿಂಧುತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಹಾಕಿಕೊಂಡಿರುವ 75ರಷ್ಟು ಅರ್ಜಿಗಳನ್ನು ಇತ್ಯರ್ಥ ಮಾಡಿದಂತಾಗಿದೆ ಎಂದಿದ್ದಾರೆ. ಈ ತೀರ್ಪಿನ ಮೂಲಕವಾಗಿ ಬ್ಯಾಂಕ್​ಗಳಿಗೆ ಬಲ ಬಂದಂತಾಗಿದೆ. ಏಕೆಂದರೆ, ಕಂಪೆನಿಗಳ ವಿರುದ್ಧವಾಗಿ ದಿವಾಳಿತನದ ಪ್ರಕ್ರಿಯೆ ಬಾಕಿಯಿದ್ದರೂ ಗ್ಯಾರಂಟರ್ ಆಗಿ ಯಾರಿರುತ್ತಾರೋ ಅವರಿಂದ ಸಾಲವನ್ನು ವಸೂಲು ಮಾಢುವುದಕ್ಕೆ ಅವಕಾಶ ಸಿಕ್ಕಂತಾಗಿದೆ. ಈ ಮೂಲಕವಾಗಿ ವಿಶ್ವದಲ್ಲೇ ಅತಿ ಹೆಚ್ಚು ಬ್ಯಾಡ್​ ಲೋನ್​ಗಳಿರುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಸಾಲ ವಸೂಲಾತಿ ಪ್ರಕ್ರಿಯೆ ವೇಗ ಪಡೆದುಕೊಳ್ಳಬಹುದು.

ಭಾರತದ ಋಣಬಾಧ್ಯತೆ ಮತ್ತು ದಿವಾಳಿತನ ಮಂಡಳಿ (IBBI)ಯು ಕೇಳಿಕೊಂಡಿದ್ದ ಪ್ರಕಾರ, ಹೈಕೋರ್ಟ್​ಗಳಲ್ಲಿ ಇರುವ ಪ್ರಕರಣಗಳನ್ನು ಸುಪ್ರೀಂ ಕೋರ್ಟ್​ಗೆ ವರ್ಗಾಯಿಸುವಂತೆ ಮನವಿ ಮಾಡಿತ್ತು. ಆದರೆ ಪರ್ಸನಲ್ ಗ್ಯಾರಂಟರ್ಸ್ ಹಾಗೂ ಕಾರ್ಪೊರೇಟ್ ಸಾಲ ಕೊಟ್ಟವರಿಗೆ ಸಂಬಂಧಿಸಿದ ಸಂಗತಿ ಇದು ಎಂದು ನವೆಂಬರ್ 15, 2019ರಂದು ಹೊರಡಿಸಿದ IBC ಮತ್ತು ಇತರ ವಿಚಾರಗಳನ್ನು ಅರ್ಜಿದಾರರು ಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದರು. ಸರ್ಕಾರದ ಅಧಿಸೂಚನೆಯ ಸಿಂಧುತ್ವವನ್ನು ಎತ್ತಿಹಿಡಿದಿರುವ ಕೋರ್ಟ್, ಒಂದು ಕಂಪೆನಿಯ ಋಣಬಾಧ್ಯತೆ ತೀರುವಳಿ ಯೋಜನೆ ಆರಂಭಿಸಲಾಗಿದೆ ಎಂದ ಮಾತ್ರಕ್ಕೆ ಆ ಕಂಪೆನಿಗೆ ಕಾರ್ಪೊರೇಟ್ ಗ್ಯಾರಂಟಿ ನೀಡಿದವರು ವೈಯಕ್ತಿಕವಾಗಿ ಹಣಕಾಸು ಸಂಸ್ಥೆಗಳಿಗೆ ಬಾಕಿ ಪಾವತಿಸುವ ಜವಾಬ್ದಾರಿಯಿಂದ ಬಿಡುಗಡೆಯಾದರು ಅಂತಲ್ಲ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಅನಿಲ್​ ಅಂಬಾನಿಯ RCom ಸಮೂಹವು ಬ್ಯಾಂಕುಗಳಿಗೆ ಕಟ್ಟಬೇಕಿದೆ 49 ಸಾವಿರ ಕೋಟಿ ರೂ ಸಾಲ! ಆದ್ರೆ..

ಇದನ್ನೂ ಓದಿ: ಭಾರತದ ಬ್ಯಾಂಕ್​ಗಳು ನೀಡಿರುವುದು ಸಾರ್ವಜನಿಕರ ಹಣ, ನನ್ನನ್ನು ದಿವಾಳಿ ಎಂದು ಘೋಷಿಸಲು ಆಗಲ್ಲ ಎಂದ ಮಲ್ಯ

YouTube video player

(Supreme Court on Friday upheld notification validity related to IBC (Insolvency and Bankruptcy Code) of Indian government)

Follow Us