ಸೋಷಿಯಲಿಸ್ಟ್ ಮನೋಭಾವವಾ? ಶ್ರೀಮಂತರನ್ನು ಕಂಡರೆ ಭಾರತೀಯರಿಗೆ ಯಾಕೆ ಕೋಪ? ನಿತಿನ್ ಕಾಮತ್ ನೇರಾನೇರ ಅನಿಸಿಕೆ ಕೇಳಿ

|

Updated on: Sep 30, 2024 | 5:16 PM

Will Indian hate rich people?: ಶ್ರೀಮಂತರಾಗಬೇಕೆನ್ನುವುದು ಎಲ್ಲರ ಕನಸು. ಆದರೆ, ಬೇರೆಯವರು ಶ್ರೀಮಂತರಾದರೆ ಸಹಿಸಿಕೊಳ್ಳುವುದಿಲ್ಲ ಎನ್ನುತ್ತಾರೆ. ಭಾರತೀಯರ ಮಟ್ಟಿಗೆ ಇದು ಹೌದಾ? ಭಾರತೀಯರಿಗೆ ಶ್ರೀಮಂತರನ್ನು ಕಂಡರೆ ತಿರಸ್ಕಾರ ಭಾವ ಇರಲು ಅವರ ಆಂತರ್ಯದಲ್ಲಿರುವ ಸೋಷಿಯಲಿಸ್ಟ್ ಮನೋಭಾವ ಎನ್ನುತ್ತಾರೆ ಝಿರೋಧ ಮುಖ್ಯಸ್ಥ ನಿತಿನ್ ಕಾಮತ್.

ಸೋಷಿಯಲಿಸ್ಟ್ ಮನೋಭಾವವಾ? ಶ್ರೀಮಂತರನ್ನು ಕಂಡರೆ ಭಾರತೀಯರಿಗೆ ಯಾಕೆ ಕೋಪ? ನಿತಿನ್ ಕಾಮತ್ ನೇರಾನೇರ ಅನಿಸಿಕೆ ಕೇಳಿ
ನಿತಿನ್ ಕಾಮತ್
Follow us on

ಬೆಂಗಳೂರು, ಸೆಪ್ಟೆಂಬರ್ 30: ಶ್ರೀಮಂತರಾಗಬೇಕು, ಐಷಾರಾಮಿ ಜೀವನ ನಡೆಸಬೇಕು ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಆದರೆ, ನನಸಾಗುವುದು ಮಾತ್ರ ತೀರಾ ಅತ್ಯಲ್ಪ ಸಂಖ್ಯೆಯ ಮಂದಿಗೆ ಮಾತ್ರ. ನಾನಾ ಕಾರಣಗಳಿಂದ ಬಹುತೇಕ ಜನರ ಕನಸುಗಳು ಕನಸಾಗೇ ಉಳಿದುಬಿಡುತ್ತವೆ. ಆದರೆ, ಬೇರೆಯವರು ಶ್ರೀಮಂತರಾದರೆ ಭಾರತೀಯರು ಸಹಿಸಿಕೊಳ್ಳುತ್ತಾರೆಯೇ? ಶ್ರೀಮಂತರು ಬಡಜನರನ್ನು ಲೂಟಿ ಮಾಡಿ ಹಣ ಮಾಡಿ ಮೆರೆಯುತ್ತಾರೆ ಎಂದು ಸಾಕಷ್ಟು ಜನರು ಮಾತನಾಡಿಕೊಳ್ಳುವುದುಂಟು. ಸತ್ಯಾಂಶ ಯಾವುದೇ ಇರಲಿ, ಭಾರತದಲ್ಲಿ ಶ್ರೀಮಂತರ ಬಗ್ಗೆ ಗೌರವ, ಆದರ, ಮನ್ನಣೆ ಎಷ್ಟಿದೆಯೋ ಹಾಗೆಯೇ ತಿರಸ್ಕಾರವೂ ಇದೆ ಎನ್ನುವುದು ನಿಜ. ಝಿರೋಧ ಸಹ-ಸಂಸ್ಥಾಪಕ ನಿತಿನ್ ಕಾಮತ್ ಈ ವಿಚಾರದ ಬಗ್ಗೆ ಮಾತನಾಡುತ್ತಾ, ಶ್ರೀಮಂತರನ್ನು ಕಂಡರೆ ಭಾರತೀಯರಿಗೆ ತಿರಸ್ಕಾರ ಮನೋಭಾವ ಯಾಕಿದೆ ಎನ್ನುವುದಕ್ಕೆ ಉತ್ತರ ಕೊಟ್ಟಿದ್ದಾರೆ. ಅವರ ಪ್ರಕಾರ ಸಮಾಜವಾದಿ ಮನೋಭಾವ ಇದಕ್ಕೆ ಕಾರಣವಂತೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಟೆಕ್​ಸ್ಪಾರ್ಕ್ಸ್ 2024 ಕಾರ್ಯಕ್ರಮದಲ್ಲಿ ಯುವರ್​ಸ್ಟೋರಿ ಸ್ಥಾಪಕಿ ಶ್ರದ್ಧಾ ಶರ್ಮಾ ಮತ್ತು ನಿತಿನ್ ಕಾಮತ್ ನಡುವೆ ನಡೆದ ಸಂವಾದದಲ್ಲಿ ಈ ವಿಚಾರದ ಬಗ್ಗೆ ಚರ್ಚೆಗಳಾದವು.

‘ಅಮೆರಿಕದಲ್ಲಿ ಯಾರಾದರೂ ಸಖತ್ತಾಗಿ ಹಣ ಮಾಡಿದರೆ, ಅಥವಾ ಯಶಸ್ಸು ಗಳಿಸಿದರೆ ಅದನ್ನು ಸಹಜವಾಗಿ ಕಾಣಲಾಗುತ್ತದೆ. ಶ್ರೀಮಂತಿಕೆ ಪಡೆದವರನ್ನು ಸಮಾಜ ತಿರಸ್ಕಾರದಿಂದ ಕಾಣುವುದಿಲ್ಲ. ಆದರೆ, ಭಾರತದಲ್ಲಿ ಯಾರಾದರೂ ಹಣ ಮಾಡಿದರೆ, ಅವರು ಏನೋ ತಲೆ ಹೊಡೆದು ಸಂಪಾದನೆ ಮಾಡಿರಬೇಕೆಂದು ಭಾವಿಸುತ್ತಾರೆ,’ ಎಂದು ಶ್ರದ್ಧಾ ಶರ್ಮಾ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಭಾರತ್​ಪೇ, ಅಶ್ನೀರ್ ಗ್ರೋವರ್ ತಿಕ್ಕಾಟಕ್ಕೆ ಸಿಕ್ತು ಪೂರ್ಣವಿರಾಮ; ಎಲ್ಲಾ ಷೇರುಗಳನ್ನೂ ಬಿಟ್ಟುಕೊಡಲಿದ್ದಾರೆ ಸಹ-ಸಂಸ್ಥಾಪಕರು

ಇದಕ್ಕೆ ಸ್ಪಂದಿಸಿದ ನಿತಿನ್ ಕಾಮತ್, ಭಾರತೀಯರ ಸೋಷಿಯಲಿಸ್ಟ್ ಮನಃಸ್ಥಿತಿ ಮತ್ತು ಸಂಪತ್ತಿನ ದೊಡ್ಡ ಅಸಮಾನತೆ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

‘ಅಮೆರಿಕ ಅಪ್ಪಟ ಬಂಡವಾಳಶಾಹಿ ಸಮಾಜ. ನಮ್ಮದು ಬಂಡವಾಳಶಾಹಿ ಸಮಾಜದಂತೆ ವರ್ತಿಸುವ ಸೋಷಿಯಲಿಸ್ಟ್ ಸಮಾಜ. ನಮ್ಮ ಹೃದಯದಲ್ಲಿ ನಾವೆಲ್ಲರೂ ಸಮಾಜವಾದಿಗಳು’ ಎಂದು ಝೀರೋಧ ಮುಖ್ಯಸ್ಥರು ಅಭಿಪ್ರಾಯಪಟ್ಟರು.

ಭಾರತದಲ್ಲಿ ಈಗ ಈ ಮನೋಭಾವದಲ್ಲಿ ಬದಲಾವಣೆ ಆಗುತ್ತಿರಬಹುದಾ ಎನ್ನುವ ಪ್ರಶ್ನೆಯನ್ನು 44 ವರ್ಷದ ನಿತಿನ್ ತಳ್ಳಿಹಾಕಿದರು. ‘ಸಂಪತ್ತಿನಲ್ಲಿ ಇಷ್ಟೊಂದು ಅಸಮಾನತೆ ಇರುವವರೆಗೂ ಈ ಮನೋಭಾವದಲ್ಲಿ ಯಾವ ಬದಲಾವಣೆ ಕಾಣಲಾಗುವುದಿಲ್ಲ’ ಎಂದು ಅವರು ವಿವರಣೆ ನೀಡಿದರು.

ಇದನ್ನೂ ಓದಿ: ಪಿಪಿಎಫ್, ಸುಕನ್ಯ ಸಮೃದ್ದಿ, ಎನ್​ಎಸ್​ಎಸ್ ಯೋಜನೆಗಳಲ್ಲಿ ಅ. 1ರಿಂದ ಹೊಸ ನಿಯಮಗಳು; ತಪ್ಪದೇ ತಿಳಿದಿರಿ

ಶ್ರದ್ಧಾ ಶರ್ಮಾ ಈ ಸಂವಾದದ ವಿಡಿಯೋ ತುಣಕನ್ನು ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಹನ್ನೆರಡು ಸಾವಿರಕ್ಕೂ ಹೆಚ್ಚು ಜನರು ವಿಡಿಯೋ ಲೈಕ್ ಮಾಡಿದ್ದಾರೆ. ಹಾಗೆಯೇ, ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್​​ಗಳೂ ಸಲ್ಲಿಕೆ ಆಗಿವೆ. ಮಿಶ್ರ ಅಭಿಪ್ರಾಯಗಳನ್ನು ಈ ಕಾಮೆಂಟ್​ಗಳಲ್ಲಿ ಕಾಣಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Mon, 30 September 24