ಪತ್ನಿಯನ್ನ ಕೊಂದು ಮಂಚದಿಂದ ಬಿದ್ದು ಸಾವು ಎಂದ ಪತಿ: ತನಿಖೆಯಲ್ಲಿ ಗಂಡನ ಕಹಾನಿ ಬಟಾಬಯಲು

ಅವರಿಬ್ಬರು ದಾವಣಗೆರೆಯಿಂದ ಬಂದು ಬೆಂಗಳೂರಲ್ಲಿ ಜೀವನ‌ ಕಟ್ಟಿಕೊಂಡಿದ್ದರು. ಒಳ್ಳೆ ಸಂಬಂಳದ ಜೊತೆ‌ ಸಂಸಾರ ಸಾಗಿಸುತ್ತಿದ್ದರು. ಆದ್ರೆ ಇಬ್ಬರ ಮಧ್ಯೆ ಇದ್ದ ಮುಸುಕಿನ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಬಳಿಕ ಹೆಂಡ್ತಿ ಕೊಲೆ ವಿಚಾರವನ್ನು ಮುಚ್ಚಿಡಲು ಪತಿ ಬೇರೆಯದ್ದೇ ಕಥೆ ಕಟ್ಟಿದ್ದಾರೆನೆ. ಆದ್ರೆ, ಪೊಲೀಸರ ತನಿಖೆಯನ್ನು ಕಿಲಾಡಿ ಪತಿಯ ನವರಂಗಿ ಆಟ ಬಟಾಬಯಲಾಗಿದೆ.

ಪತ್ನಿಯನ್ನ ಕೊಂದು ಮಂಚದಿಂದ ಬಿದ್ದು ಸಾವು ಎಂದ ಪತಿ: ತನಿಖೆಯಲ್ಲಿ ಗಂಡನ ಕಹಾನಿ ಬಟಾಬಯಲು
Sharath

Updated on: Feb 06, 2025 | 5:02 PM

ಬೆಂಗಳೂರು, (ಫೆಬ್ರವರಿ 06): ಮೊನ್ನೆ ಮಧ್ಯರಾತ್ರಿ ಸುಮಾರು 3 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನ 16ನೇ ಕ್ರಾಸ್ ನಲ್ಲಿರುವ ಈ ಅಪಾರ್ಟ್ಮೆಂಟ್ ನಲ್ಲಿ ಮಹಿಳೆಯನ್ನ ತರಾತುರಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಗೆ ಸೇರಿದ ಮಹಿಳೆಯನ್ನು ಪರಿಶೀಲಿಸಿದ ವೈದ್ಯರು ಅದಾಗಲೇ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಇದೇ ವೇಳೆ ಪತ್ನಿಗೆ ಏನಾಗಿತ್ತು ಎಂದು ಕೇಳಿದವರಿಗೆಲ್ಲ ಪತಿರಾಯ ಕಥೆಯೊಂದನ್ನ ಹೇಳುತ್ತಿದ್ದ. ಆದರೆ, ಪತಿಯ ಕಳ್ಳಾಟ ಹೆಚ್ಚು ಹೊತ್ತು ನಡೆಯಲಿಲ್ಲ. ಮರಣೋತ್ತರ ಪರೀಕ್ಷೆ ಮತ್ತು ಪೊಲೀಸರ ವಿಚಾರಣೆಯಲ್ಲಿ ಮಹಿಳೆ ಕೊಲೆ ರಹಸ್ಯ ಬಯಲಾಗಿದೆ.

ಮೂಲತಃ ದಾವಣಗೆರೆಯವರಾದ ಚೇತನಾ ಮತ್ತು ಶರತ್ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ, ಗಂಡ ಹೆಂಡತಿ ನಡುವೆ ಇದ್ದ ಜಗಳ‌ ಮೊನ್ನೆ ತಾರಕ್ಕೇರಿದ್ದು, ಅದು ಕೊಲೆಯಲ್ಲಿ ಅಂತವಾಗಿದೆ. ಮಧ್ಯರಾತ್ರಿ ತನ್ನ ಪತ್ನಿಯನ್ನ ಶರತ್ ಉಸಿರುಗಟ್ಟಿಸಿ‌ ಕೊಲೆ ಮಾಡಿದ್ದ. ಆದರೆ ಸಾವಿನ ಬಗ್ಗೆ ಕಥೆ ಹೇಳಿದ್ದವನ ಬಂಡವಾಳ ವೈದ್ಯರ ಪರೀಕ್ಷೆ ವೇಳೆ ಬಯಲಾಗಿದೆ.. ಸದ್ಯ ಪೊಲೀಸರು ಆರೋಪಿ ಶರತ್​ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಸ್ನೇಹಿತನೊಂದಿಗೆ ಸರಸ, ಸಂಸಾರದಲ್ಲಿ ವಿರಸ: ಪತ್ನಿಯನ್ನ ಏಳೆಂಟು ಬಾರಿ ಚುಚ್ಚಿ…ಚುಚ್ಚಿ ಕೊಂದ

ಚೇತನಾ ಎಂಬಾಕೆಯನ್ನು ಆಕೆಯ ಪತಿ ಶರತ್ ಉತ್ತಂಗಿ ಎಂಬಾತನೇ ಕೊಲೆ ಮಾಡಿದ್ದ. ಮೂಲತಃ ದಾವಣಗೆರೆಯವರಾದ ಚೇತನಾ ಮತ್ತು ಶರತ್ ಪ್ರೀತಿಸಿ ಮದುವೆಯಾಗಿ 15 ವರ್ಷ ಕಳೆದಿತ್ತು.‌ ದಂಪತಿಗೆ ಮಗಳು ಕೂಡ ಇದ್ದಳು. ಜೀವನಕ್ಕಾಗಿ ಚೇತನಾ ಖಾಸಗಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದರೆ, ಶರತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ಮೊನ್ನೆ ಮಧ್ಯರಾತ್ರಿ ಶರತ್ ತನ್ನ ಪತ್ನಿ ಮಂಚದಿಂದ ಕೆಳಗಡೆ ಬಿದ್ದು ಮೂರ್ಚೆ ತಪ್ಪಿದ್ದಾಳೆ ಎಂದು ಅಕ್ಕಪಕ್ಕದ ಮನೆಯವರ ಜೊತೆ ಆಸ್ಪತ್ರೆಗೆ ಸೇರಿಸಿದ್ದ.

ಬಳಿಕ ಮೊದ ಮೊದಲು ಪತ್ನಿಗೆ ಏನಾಯ್ತು ಎಂದು ಕೇಳಿದವರಿಗೆಲ್ಲ ಮಂಚದಿಂದ ಕೆಳಗಡೆ ಬಿದ್ದು ಅಸ್ವಸ್ಥಳಾಗಿದ್ದಾಳೆ‌ ಅಂತ ಶರತ್ ಕಥೆ ಹೇಳಿದ್ದ. ಆದರೆ ವೈದ್ಯರು ಚೇತನಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಶರತ್ ನನ್ನ ವಿಚಾರಣೆ ನಡೆಸಿದ ವೈಯಾಲಿಕಾವಲ್ ಪೊಲೀಸರಿಗೆ ಅಸಲಿ ವಿಚಾರ ಗೊತ್ತಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ.Tv9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:16 pm, Thu, 6 February 25