ಸಹೋದರನ ಪತ್ನಿ ಜೊತೆ ಅಕ್ರಮ‌ ಸಂಬಂಧ: ಕೊನೆಗೆ ತಮ್ಮನಿಂದಲೇ ಹತ್ಯೆಯಾದ ಅಣ್ಣ

ತನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಅಣ್ಣನನ್ನೇ ಸಹೋದರ ಕೊಲೆ ಮಾಡಿದ್ದಾನೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಮಂಕಲಾಳ‌ ಗ್ರಾಮದಲ್ಲಿ ನಡೆದಿದೆ.

ಸಹೋದರನ ಪತ್ನಿ ಜೊತೆ ಅಕ್ರಮ‌ ಸಂಬಂಧ: ಕೊನೆಗೆ ತಮ್ಮನಿಂದಲೇ ಹತ್ಯೆಯಾದ ಅಣ್ಣ
Updated By: ರಮೇಶ್ ಬಿ. ಜವಳಗೇರಾ

Updated on: Oct 24, 2023 | 1:18 PM

ದೊಡ್ಡಬಳ್ಳಾಪುರ, (ಅಕ್ಟೋಬರ್ 24): ಎಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಆದ್ರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಮಂಕಲಾಳ‌ ಗ್ರಾಮದಲ್ಲಿ ನೆತ್ತರು ಹರಿದಿದೆ. ತನ್ನ ಪತ್ನಿ ಜೊತೆ ಅಕ್ರಮ ಸಂಬಂಧ(illicit relationship) ಹೊಂದಿದ್ದ ಅಣ್ಣನನ್ನೇ ತಮ್ಮ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಗಂಗರಾಜು ( 34 ) ಕೊಲೆಯಾದ ಅಣ್ಣ. ಮೃತ ಗಂಗರಾಜು ತನ್ನ ಸಹೋದರನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೋಪಗೊಂಡು ತಮ್ಮನೇ ತನ್ನ ಅಣ್ಣನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ ಎಂದು ತಿಳಿದಬಂದಿದೆ.

ಕಳೆದೊಂದು ವರ್ಷದಿಂದ ಕೊಲೆ ಆರೋಪಿ ಪತ್ನಿ ಮೃತ ಗಂಗರಾಜು ಜೊತೆ ವಾಸವಿದ್ದಳು. ಬಳಿಕ ಕಳೆದೊಂದು ತಿಂಗಳಿಂದ ಗಂಗರಾಜುವನ್ನ ಬಿಟ್ಟು ವಾಪಸ್ ಗಂಡನ ಬಳಿಗೆ ಬಂದಿದ್ದಳು. ಹೀಗಾಗಿ ಗಂಗರಾಜು ಸಹ ಊರಿಗೆ ಬಂದ ಕಾರಣ ಸಹೋದರರ ನಡುವೆ ಗಲಾಟೆ ನಡೆದಿದ್ದು, ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಅಣ್ಣನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾನೆ.

ಪುನರ್ವಸತಿ ಕೇಂದ್ರ ಕಟ್ಟಡದ ಮೇಲಿಂದ ಬಿದ್ದು ವ್ಯಕ್ತಿ ಸಾವು

ಬೆಂಗಳೂರು, (ಅಕ್ಟೋಬರ್ 24): ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ಪುನರ್ವಸತಿ ಕೇಂದ್ರ ಕಟ್ಟಡ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ. ಇಂದು (ಅಕ್ಟೋಬರ್ 24)) ಬೆಳಗ್ಗೆ 11:30ರ ಸುಮಾರಿಗೆ ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಕೆಂಚನಪುರದಲ್ಲಿ ಪುನರ್ವಸತಿ ಕೇಂದ್ರ ಕಟ್ಟಡ ಮೇಲಿಂದ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಜ್ಞಾನಭಾರತಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆ ವ್ಯಕ್ತಿ ಯಾರು? ಯಾಕಾಗಿ ಬಿದ್ದು ಸತ್ತ ಎನ್ನುವ ಬಗ್ಗೆ ಮಾಹಿತಿ ತಿಳಿದುಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Tue, 24 October 23