AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಕೊಲೆಗೈದು, ಕಾಣೆಯಾದ ಕಥೆ ಕಟ್ಟಿದವರು 3 ವರ್ಷದ ಬಳಿಕ ಅರೆಸ್ಟ್​​; ಮೂಡಲಗಿ ಪೊಲೀಸರ ಕಾರ್ಯಕ್ಕೆ ಶ್ಲಾಘನೆ

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ 3 ವರ್ಷಗಳ ಹಿಂದೆ ಶಿವಲೀಲಾ ಎಂಬುವರ ಕೊಲೆಯಾಗಿತ್ತು. ಈ ಪ್ರಕರಣವನ್ನು ಚಾಣಾಕ್ಷತನದಿಂದ ಭೇದಿಸಿದ ಮೂಡಲಗಿ ಪೊಲೀಸರಿಗೆ ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಬಹುಮಾನ ಘೋಷಣೆ ಮಾಡಿದ್ದಾರೆ.

ಬೆಳಗಾವಿ: ಕೊಲೆಗೈದು, ಕಾಣೆಯಾದ ಕಥೆ ಕಟ್ಟಿದವರು 3 ವರ್ಷದ ಬಳಿಕ ಅರೆಸ್ಟ್​​; ಮೂಡಲಗಿ ಪೊಲೀಸರ ಕಾರ್ಯಕ್ಕೆ ಶ್ಲಾಘನೆ
ಆರೋಪಿ ವಿಠ್ಠಲ್ ಲಕ್ಷಣ ಬಂಗಿ, ಕೊಲೆಯಾದ ಶಿವಲೀಲಾ
Sahadev Mane
| Updated By: ವಿವೇಕ ಬಿರಾದಾರ|

Updated on: Oct 22, 2023 | 12:10 PM

Share

ಬೆಳಗಾವಿ ಅ.22: ಸವದತ್ತಿ (Savadatti) ತಾಲೂಕಿನ ಹಿರೇಬುದುನೂರು ಗ್ರಾಮದಲ್ಲಿ ನಡೆದಂತಹ ಮಹಿಳೆಯೊಬ್ಬರ ಕೊಲೆ ಪ್ರಕರಣ 3 ವರ್ಷ 9 ತಿಂಗಳ ನಂತರ ಬೆಳಕಿಗೆ ಬಂದಿದೆ. ಶಿವಲೀಲಾ ವಿಠ್ಠಲ್ ಬಂಗಿ (32) ಕೊಲೆಯಾದ ದುರ್ದೈವಿ. ವಿಠ್ಠಲ್ ಲಕ್ಷಣ ಬಂಗಿ, ಸಿದಗೊಂಡ ಕಂಬಳಿ, ಲಕ್ಕಪ್ಪ ಕಂಬಳಿ, ಬಸವರಾಜ್ ಕಬ್ಬೂರೆ, ಅಶೋಕ್ ಮೊಕಾಶಿ ಕೊಲೆ ಆರೋಪಿಗಳು. ಶಿವಲೀಲಾ ಬ್ಯಾಲ್ಯವಿದ್ದಾಗಲೇ ವಿಠ್ಠಲ ಬಂಗಿ ಮದುವೆಯಾಗಿತ್ತು. ಮದುವೆ ನಂತರವೂ ಶಿವಲೀಲಾ ವಿದ್ಯಾಭ್ಯಾಸ ಮುಂದುವರೆಸಿದ್ದೂ, ಪ್ಯಾರಾಮೆಡಿಕಲ್​ ಓದುತ್ತಿದ್ದಳು.

ಪತಿ ವಿಠ್ಠಲ್ ಲಕ್ಷಣ ಬಂಗಿ ಶಿವಲೀಲಾ ನಡೆತೆ ಸರಿಯಿಲ್ಲ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದನು. ಹೀಗಾಗಿ ಆರೋಪಿಗಳು 2020ರ ಜನವರಿಯಲ್ಲಿ ಶಿವಲೀಲಾರನ್ನು ಕೊಲೆ ಮಾಡಿ, ಸವದತ್ತಿ ತಾಲೂಕಿನ ಹಿರೇಬುದುನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವ ಬಿಸಾಕಿದ್ದರು. ಕೊಲೆ ಮಾಡಿದ ಬಳಿಕ ಏನೂ ಅರಿಯದಂತೆ ತಮ್ಮ ತಮ್ಮ ಮನೆಗೆ ಹೋಗಿದ್ದರು. ವಿಪರ್ಯಾಸವೆಂದರೇ ಕೊಲೆ ಮಾಡಿದ ಲಕ್ಕಪ್ಪ ಕಂಬಳಿ, ಸಿದಗೊಂಡ ಕಂಬಳಿ ಶಿವಲೀಲಾ ಸಹೋದರರು.

ಇದನ್ನೂ ಓದಿ: ತುಮಕೂರಿನಲ್ಲಿ ರೌಡಿಶೀಟರ್ ಬರ್ಬರ ಹತ್ಯೆ; ಸ್ನೇಹಿತರಿಂದಲೇ ಕೊಲೆ ಶಂಕೆ

ಶಿವಲೀಲಾ ಓಡಿ ಹೋಗಿದ್ದಾಳೆ ಅಂತ ಆರೋಪಿಗಳು ಗ್ರಾಮದಲ್ಲಿ ವಂದತಿ ಸೃಷ್ಟಿಸಿದ್ದರು. ವರ್ಷಗಳೇ ಕಳೆದರೂ ಶಿವಲೀಲಾ ಗ್ರಾಮಕ್ಕೆ ಮರಳದಿದ್ದಕ್ಕೆ, ಗ್ರಾಮಸ್ಥರು ಕುಟುಂಬಸ್ಥರ ಮೇಲೆ ಅನುಮಾನ ವ್ಯಕ್ತಪಡಿಸುತ್ತಾ ಮಾತನಾಡುಲು ಶರು ಮಾಡಿದ್ದರು. ಇದರಿಂದ ಶಿವಲೀಲಾ ಕುಟುಂಬಸ್ಥರು ಗಾಭರಿಯಾಗಿ ಕೊಲೆ ಮಾಡಿರುವ ಸಂಶಯ ಬರಬಾರದು ಅಂತ 15 ದಿನದ ಹಿಂದೆ ಮೂಡಲಗಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಶಿವಲೀಲಾ ನಾಪತ್ತೆ ಪ್ರಕರಣ ಬೆನ್ನು ಬಿದ್ದಾಗ ಕೊಲೆ ಪ್ರಕರಣ ಬೆಳಕಿಗೆ

ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಇಳಿದಿದ್ದರು. ಬೀಟ್​ ಪೊಲೀಸರು ಗ್ರಾಮಕ್ಕೆ ಆಗಮಿಸಿ ಶಿವಲೀಲಾಳ ಬಗ್ಗೆ ವಿಚಾರಿಸಿದಾಗ 3 ವರ್ಷದ ಹಿಂದೆಯೇ ಕಾಣೆಯಾಗಿದ್ದಾಳೆ ಎಂದು ಹೇಳಿದ್ದಾರೆ. ಅಲ್ಲದೆ ಆರೋಪಿಗಳು ಸೃಷ್ಟಿಸಿದ ಕಟ್ಟು ಕಥೆಯ ಬಗ್ಗೆಯೂ ಹೇಳಿದ್ದಾರೆ. ಬಳಿಕ ಪೊಲೀಸರು ಶಿವಲೀಲಾ ಸಹೋದರರನ್ನು ವಿಚಾರಿಸಿದಾಗ 3 ವರ್ಷಗಳ ಹಿಂದೆ ಕಾಲೇಜಿಗೆ ಹೋದವಳು ಮರಳಿ ಬಂದಿಲ್ಲ ಎಂದಿದ್ದಾರೆ.

ಸರಿ ಎಂದು ಪೊಲೀಸರು ವಿಚಾರಿಸಲು ಕಾಲೇಜಿನ ಬಳಿ ಹೋದಾಗ, ಅಚ್ಚರಿಯೊಂದು ಕಾದಿತ್ತು. ಅದು ಕಾಲೇಜು 4 ವರ್ಷದ ಹಿಂದೆಯೇ ಬಂದಾಗಿದೆ. ಅಂದರೇ ಶಿವಲೀಲಾ ಕೊಲೆಯಾಗುವ 1 ಒಂದು ವರ್ಷದ ಮುಂಚೆಯೇ 2019ರಲ್ಲಿ ಬಂದಾಗಿದೆ. ಸುಳ್ಳು ಮಾಹಿತಿ ನೀಡಿದ ಸಹೋದರರ ಮೇಲೆ ಪೊಲೀಸರು ಅನುಮಾನಗೊಂಡಿದ್ದಾರೆ.

ಮತ್ತೆ ಪೊಲೀಸರು ಸಹೋದರರ ಬಳಿ ಬಂದು “ಏನು ಆಯ್ತು ಅಂತ ನಿಜ ಹೇಳಿ, ಈ ಪ್ರಕರಣವನ್ನು ಇಲ್ಲೇ ಮುಚ್ಚಿ ಹಾಕೋಣ. ನಾವು ಸಾಹೇಬರಿಗೆ ಹೇಳುತ್ತೇವೆ” ಎಂದು ನಾಟಕವಾಡಿದ್ದಾರೆ. ಇದನ್ನು ನಂಬಿದ ಆರೋಪಿಗಳು “2 ಲಕ್ಷ ರೂ. ನೀಡುತ್ತೇವೆ ಈ ಪ್ರಕರಣವನ್ನು ಇಲ್ಲೆ ಮುಚ್ಚಿಹಾಕಿ” ಎಂದು ಸತ್ಯ ಬಾಯಿಬಿಟ್ಟಿದ್ದಾರೆ. ಸತ್ಯ ಹೊರಬರುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದಾಗ ಸಂಪೂರ್ಣ ಬಾಯಿಬಿಟ್ಟಿದ್ದಾರೆ.

3 ವರ್ಷ 9ತಿಂಗಳ ಬಳಿಕ ಶಿವಲೀಲಾ ತಲೆ ಬುರುಡೆ ಮಾತ್ರ ಪತ್ತೆಯಾಗಿದ್ದು, ಪೊಲೀಸರು ಎಫ್​ಎಸ್ಎಲ್​ಗೆ ಕಳಿಸಿದ್ದಾರೆ. ಇನ್ನು ಚಾಣಾಕ್ಷತನದಿಂದ ಪ್ರಕರಣವನ್ನು ಭೇದಿಸಿದ ಮೂಡಲಗಿ ಪೊಲೀಸರಿಗೆ ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಬಹುಮಾನ ಘೋಷಣೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ