ಬೆಂಗಳೂರು, ಫೆಬ್ರವರಿ 07: ಕಳ್ಳ ಮಗನ ಮೃತದೇಹ ಸ್ವೀಕರಿಸಲು ತಾಯಿ ನಿರಾಕರಿಸಿ, ವಾಪಸ್ ಊರಿಗೆ ಹೋದ ಘಟನೆ ಬೆಂಗಳೂರಿನಲ್ಲಿ (Benagluru) ನಡೆದಿದೆ. ಕುಖ್ಯಾತ ಕಳ್ಳ ವಿಷ್ಣು ಪ್ರಶಾಂತ್ ಮೃತ ಮಗ. 2024ರ ಡಿಸೆಂಬರ್ 24 ರಂದು ಕನಕಪುರ ರಸ್ತೆಯಲ್ಲಿರುವ ಫ್ಯಾಷನ್ ಫ್ಯಾಕ್ಟರಿ ಬೇಸ್ ಮೆಂಟ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಕುಖ್ಯಾತ ಕಳ್ಳ ವಿಷ್ಣು ಪ್ರಶಾಂತ್ ಶವ ಪತ್ತೆಯಾಗಿತ್ತು. ಈ ವಿಚಾರವನ್ನು ಫ್ಯಾಷನ್ ಫ್ಯಾಕ್ಟರಿ ಸಿಬ್ಬಂದಿ ಕೋಣನಕುಂಟೆ ಪೊಲೀಸರಿಗೆ (Police) ತಿಳಿಸಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು.
ವಿಷ್ಣು ಪ್ರಶಾಂತ್ ಶವದ ಬಳಿ ಮೊಬೈಲ್ ಪತ್ತೆಯಾಗಿತ್ತು. ಪೊಲೀಸರು ಮೊಬೈಲ್ ಅನ್ನು ಪರಿಶೀಲನೆಗೆ ಒಳಪಡಿಸಿದಾಗ ಕೇರಳದ ಓರ್ವ ವ್ಯಕ್ತಿಯದ್ದು ಎಂದು ತಿಳಿಯಿತು. ಬಳಿಕ, ಪೊಲೀಸರು ಮೊಬೈಲ್ ಮಾಲೀಕನಿಗೆ ಕರೆ ಮಾಡಿ ವಿಚಾರಿಸಿದಾಗ “ನನ್ನ ಮೊಬೈಲ್ ಕಳ್ಳತನವಾಗಿದೆ” ಎಂದು ಹೇಳಿದ್ದಾರೆ. ನಂತರ, ಕೋಣನಕುಂಟೆ ಪೊಲೀಸರು ಮೃತ ವಿಷ್ಣು ಪ್ರಶಾಂತ್ ಫೋಟೋವನ್ನು ಕೇರಳ ಪೊಲೀಸರಿಗೆ ಕಳುಹಿಸಿದ್ದಾರೆ. ಕೈಮೇಲೆ ಇದ್ದ ಟ್ಯಾಟೂ ಆಧಾರದ ಮೇಲೆ ಸತ್ತವನು ವಿಷ್ಣು ಪ್ರಶಾಂತ್ ಎಂದು ಖಾತ್ರಿಯಾಗಿದೆ.
ಕೇರಳ ಪೊಲೀಸರು ವಿಷ್ಣು ಪ್ರಶಾಂತ್ ತಾಯಿಗೆ ವಿಚಾರ ತಿಳಿಸಿದ್ದಾರೆ. ಆಗ, ತಾಯಿ ಮಗನನ್ನು ನೋಡಲು ಬೆಂಗಳೂರಿಗೆ ಬರಲು ನಿರಾಕರಿಸಿದ್ದಾರೆ. ಆಗ, ಕೋಣನಕುಂಟೆ ಪೊಲೀಸರು ಖಾತರಿಗಾಗಿ ವಿಷ್ಣು ಪ್ರಶಾಂತ್ ತಾಯಿಯನ್ನು ಬಲವಂತವಾಗಿ ಕರೆಸಿಕೊಂಡಿದ್ದಾರೆ. ಬೆಂಗಳೂರಿಗೆ ಬಂದ ವಿಷ್ಣು ಪ್ರಶಾಂತ್ ತಾಯಿ “ಮೃತಪಟ್ಟವನು ನನ್ನ ಮಗ ವಿಷ್ಣು ಪ್ರಶಾಂತ್” ಎಂದು ಗುರುತು ಪತ್ತೆಹಚ್ಚಿದ್ದಾರೆ. ಬಳಿಕ, ಮಗನ ಮೃತದೇಹ ಬೇಡವೆಂದು ಕೇರಳಕ್ಕೆ ವಾಪಸ್ ಹೋಗಿದ್ದಾರೆ.
ಇದನ್ನೂ ಓದಿ: ಜೊತೆಗೆ ಕುಳಿತು ಕುಡಿದು ಚಿತ್ರಾನ್ನ ತಿಂದು ತೇಗಿ ಸ್ನೇಹಿತನನ್ನೇ ಸುಟ್ಟು ಹಾಕಿ ಡ್ರಾಮಾ ಮಾಡಿದ
ಬಳಿಕ ಪೊಲೀಸರೇ ಅಂತ್ಯಕ್ರಿಯೆ ನರವೇರಿಸಿ, ತನಿಖೆ ಮುಂದುವರೆಸಿದರು. ವಿಷ್ಣು ಪ್ರಶಾಂತ್ ಹಿನ್ನೆಲೆಯನ್ನು ಪರಿಶೀಲಿಸಿದಾಗ ಆತನ ಮೇಲೆ ಕೇರಳ, ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವೆಡೆ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ಇರುವುದು ತಿಳಿದಿದೆ.
ವಿಷ್ಣು ಪ್ರಶಾಂತ್ ಕೇರಳದಲ್ಲಿ ಕಳ್ಳತನ ಮಾಡಿ ಬೆಂಗಳೂರಿಗೆ ಬಂದು ತಲೆಮರೆಸಿಕೊಳ್ಳುತ್ತಿದ್ದನು. ಇಲ್ಲಿ, ಕಂಠಪೂರ್ತಿ ಕುಡಿದು, ಮತ್ತಲ್ಲಿ ಪೊಲೀಸರು ಬರುತ್ತಿದ್ದಾರೆ ನನ್ನ ಹಿಡಿಯತ್ತಾರೆ ಎಂದು ಸ್ನೇಹಿತರಗೆ ಕರೆ ಮಾಡಿ ಹೇಳುತ್ತಿದ್ದನು. ಮತ್ತು ವಿಷ್ಣು ಪ್ರಶಾಂತ್ ಮಾನಸಿಕ ಅಸ್ವಸ್ಥನಾಗಿದ್ದನು. ಈ ಹಿನ್ನೆಲೆಯಲ್ಲಿ ಸ್ನೇಹಿತರು ವಿಷ್ಣು ಪ್ರಶಾಂತ್ನನ್ನು ಹಿಂಬಾಲಿಸಿ, ಆತನನ್ನು ಮರಳಿ ಕೇರಳಕ್ಕೆ ಕರೆದುಕೊಂಡು ಹೋಗಬೇಕೆಂದುಕೊಂಡಿದ್ದರು. ಆದರೆ, ಅವರಿಗೆ ವಿಷ್ಣು ಪ್ರಶಾಂತ್ ಸಿಗಲಿಲ್ಲ. ಬಳಿಕ ಸ್ನೇಹಿತರು ತಮಿಳುನಾಡಿಗೆ ಬಸ್ ಹತ್ತಿ ಹೊರಟಿದ್ದರು. ಆ ನಂತರ ವಿಷ್ಣು ಪ್ರಶಾಂತ್ ಪತ್ತೆಯಾಗಿದ್ದು ಶವವಾಗಿ. ಇದು ಕೊಲೆಯೋ? ಅಥವಾ ಆಕಸ್ಮಿಕ ಸಾವೋ ಇನ್ನೂ ನಿಗೂಢವಾಗಿದ್ದು, ಕೋಣನಕುಂಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 am, Fri, 7 February 25