ಬಿಹಾರದಲ್ಲಿ ಅರ್ಚಕನ ಭೀಕರ ಕೊಲೆ; ಕಣ್ಣು ಕಿತ್ತು, ಜನನಾಂಗ ಕತ್ತರಿಸಿರುವ ಹಂತಕರು; ಸ್ಥಳೀಯರಿಂದ ತೀವ್ರ ಪ್ರತಿಭಟನೆ

|

Updated on: Dec 17, 2023 | 4:38 PM

Brutal Murder in Bihar: ಬಿಹಾರದ ಗೋಪಾಲ್​ಗಂಜ್​ನ ದಾನಾಪುರ್​ನಲ್ಲಿ ಮನೋಜ್ ಕುಮಾರ್ ಶಾ ಎಂಬ ಅರ್ಚಕನನ್ನು ಭೀಕರವಾಗಿ ಹತ್ಯೆಗೊಳಿಸಲಾಗಿದೆ. ಐದು ದಿನದ ಹಿಂದೆ ನಾಪತ್ತೆಯಾಗಿದ್ದ ಮನೋಜ್ ಕುಮಾರ್ ಅವರು ತಮ್ಮ ಮನೆ ಸಮೀಪದ ಪೊದೆಗಳಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅರ್ಚಕನ ಕುತ್ತಿಗೆಗೆ ಗುಂಡು ಹೊಡೆಯಲಾಗಿದೆ. ಮರ್ಮಾಂಗ ಕತ್ತರಿಸಿ, ಕಣ್ಣು ಕಿತ್ತು ಸಾಯಿಸಲಾಗಿದೆ.

ಬಿಹಾರದಲ್ಲಿ ಅರ್ಚಕನ ಭೀಕರ ಕೊಲೆ; ಕಣ್ಣು ಕಿತ್ತು, ಜನನಾಂಗ ಕತ್ತರಿಸಿರುವ ಹಂತಕರು; ಸ್ಥಳೀಯರಿಂದ ತೀವ್ರ ಪ್ರತಿಭಟನೆ
ಸಾಂದರ್ಭಿಕ ಚಿತ್ರ
Follow us on

ಪಾಟ್ನಾ, ಡಿಸೆಂಬರ್ 17: ಬಿಹಾರದಲ್ಲಿ ಭೀಕರ ಕಗ್ಗೊಲೆಯ ಘಟನೆಯೊಂದು ಸಂಭವಿಸಿದೆ. ಗೋಪಾಲಗಂಜ್ ಜಿಲ್ಲೆಯಲ್ಲಿ ಅರ್ಚಕರೊಬ್ಬರನ್ನು ಭೀಕರವಾಗಿ ಹತ್ಯೆಗೈಯಲಾಗಿದೆ. ಜಿಲ್ಲೆಯ ದಾನಾಪುರ್ ಗ್ರಾಮದಲ್ಲಿರುವ ಶಿವ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಮನೋಜ್ ಕುಮಾರ್ ದಾರುಣವಾಗಿ ಹತ್ಯೆಯಾದ ವ್ಯಕ್ತಿ. ಗುಂಡಿಟ್ಟು ಇವರನ್ನು ಸಾಯಿಸಲಾಗಿದೆ. ಅಷ್ಟೇ ಅಲ್ಲ, ಇವರ ಮರ್ಮಾಂಗವನ್ನು (private organ) ಕತ್ತರಿಸಲಾಗಿದೆ. ಕಣ್ಣುಗಳನ್ನು (eyes gorged out) ಕಿತ್ತುಹಾಕಲಾಗಿದೆ. ಈ ಘಟನೆ ಶನಿವಾರ (ಡಿ. 16) ಸಂಭವಿಸಿರುವುದು ತಿಳಿದುಬಂದಿದೆ.

ಬಿಜೆಪಿ ಸ್ಥಳೀಯ ನಾಯಕ ಅಶೋಕ್ ಕುಮಾರ್ ಶಾ ಅವರ ಸಹೋದರರಾಗಿರುವ ಮನೋಜ್ ಕುಮಾರ್ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ದೇವಸ್ಥಾನಕ್ಕೆ ಹೋಗಲೆಂದು ಮನೆಯಿಂದ ಹೊರಟವರು ಮರಳಿ ಬಂದಿರಲಿಲ್ಲ. ದೇವಸ್ಥಾನಕ್ಕೂ ಹೋಗಿರಲಿಲ್ಲ. ಅವರನ್ನು ಸಾಕಷ್ಟು ಹುಡುಕಿದರೂ ಸಿಕ್ಕಿರಲಿಲ್ಲ. ಶನಿವಾರದಂದು ಅರ್ಚಕರ ಮನೆಯ ಸಮೀಪವೇ ಇರುವ ಹಾಲಿನ ಫ್ಯಾಕ್ಟರಿಯ ಸಮೀಪದ ಪೊದೆಯಲ್ಲಿ ಅವರ ಮೃತದೇಹವನ್ನು ಪೊಲೀಸರು ಕಂಡುಹಿಡಿದಿದ್ದಾರೆ.

ಇದನ್ನೂ ಓದಿ: ನಾಗ್ಪುರದ ಕಾರ್ಖಾನೆಯಲ್ಲಿ ಸ್ಫೋಟ, 9 ಮಂದಿ ಸಾವು

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ, ಸ್ಥಳೀಯ ಜನರು ಆಕ್ರೋಶಗೊಂಡಿದ್ದಾರೆ. ಇದು ಪೊಲೀಸರ ನಿರ್ಲಕ್ಷ್ಯತೆಯಿಂದ ಆಗಿರುವ ಅನಾಹುತ ಎಂದು ಆರೋಪಿಸಿ, ಕಲ್ಲು ತೂರಾಟ ಮಾಡಿ ಪ್ರತಿಭಟಿಸಿದ್ದಾರೆ. ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯ ಆಗಿದೆ. ಪರಿಸ್ಥಿತಿ ವೈಪರೀತ್ಯಕ್ಕೆ ಹೋಗುತ್ತಿರುವಂತೆಯೇ ಪೊಲೀಸರು ಐವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡರು.

ಇನ್ನು ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು ವಿಪಕ್ಷವಾದ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಬಿಹಾರದಲ್ಲಿ ಮತ್ತೊಮ್ಮೆ ಜಂಗಲ್ ರಾಜ್ ಮರಳಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಬಿಜೆಪಿ ನಾಯಕ ಶಹಜಾದ್ ಪೂನಾವಾಲ ಅವರು ಈ ಕೊಲೆಯನ್ನು ಐಸಿಸ್ ಶೈಲಿಯ ಹತ್ಯೆ ಎಂದು ಆತಂಕ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ