ಕಪ್ಪಗಿದ್ದಾಳೆಂದು ಗಂಡನಿಂದ ಅವಮಾನ; ನೇಣು ಬಿಗಿದುಕೊಂಡು ಚಿಂತಾಮಣಿಯ ನವವಿವಾಹಿತೆ ಆತ್ಮಹತ್ಯೆ

ಮದುವೆಯಾಗಿ 7 ತಿಂಗಳಲ್ಲೇ ಚಿಕ್ಕಬಳ್ಳಾಪುರದ ಚಿಂತಾಮಣಿಯ ನವವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳವೇ ಈ ದುರಂತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಆ ಮಹಿಳೆಗೆ ಆಕೆಯ ಗಂಡ ಆಕೆಯ ರೂಪದ ಬಗ್ಗೆ ಅವಮಾನ ಮಾಡುತ್ತಿದ್ದ ಎನ್ನಲಾಗಿದೆ.

ಕಪ್ಪಗಿದ್ದಾಳೆಂದು ಗಂಡನಿಂದ ಅವಮಾನ; ನೇಣು ಬಿಗಿದುಕೊಂಡು ಚಿಂತಾಮಣಿಯ ನವವಿವಾಹಿತೆ ಆತ್ಮಹತ್ಯೆ
ಆತ್ಮಹತ್ಯೆ
Follow us
| Updated By: ಸುಷ್ಮಾ ಚಕ್ರೆ

Updated on: Sep 16, 2024 | 4:15 PM

ಚಿಕ್ಕಬಳ್ಳಾಪುರ: ಹೆಂಡತಿ ಕಪ್ಪಾಗಿದ್ದಾಳೆಂದು ಮದುವೆಯಾದಾಗಿನಿಂದಲೂ ಗಂಡ ಅವಮಾನ ಮಾಡುತ್ತಿದ್ದ ಕಾರಣದಿಂದ ಚಿಕ್ಕಬಳ್ಳಾಪುರದ ಚಿಂತಾಮಣಿಯ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾದ 7 ತಿಂಗಳಲ್ಲೇ ಆ ಮಹಿಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಆಕೆಯ ಅತ್ತೆ, ಮಾವ, ಮೈದುನ, ಗಂಡ ವರದಕ್ಷಿಣೆಗಾಗಿ ತಮ್ಮ ಮಗಳನ್ನು ಪೀಡಿಸುತ್ತಿದ್ದರು ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

ಬಿಂದುಶ್ರೀ ಎಂಬ 22 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಆಕೆಯ ಗಂಡ ರಾಘವೇಂದ್ರ ಹೆಚ್.ಎಂ., ಮಾವ ಎನ್.ಮುನಿರಾಜ, ಅತ್ತೆ ಲತಾ ಹಾಗೂ ನರಸಿಂಹಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಂದುಶ್ರೀ ಅವರ ಗಂಡ ರಾಘವೇಂದ್ರ ಸರ್ಕಾರಿ ಸೌಮ್ಯದ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಿಷ್ಟೇ ಅಲ್ಲದೆ, ಮಗಳ ಆತ್ಮಹತ್ಯೆಯಿಂದ ಆಘಾತಗೊಂಡ ಮೃತ ಮಹಿಳೆಯ ತಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಜನರಿಗಾಗಿ ರಾಜೀನಾಮೆ ನೀಡಲು ಮುಂದಾದ ಮಮತಾ ಬ್ಯಾನರ್ಜಿ

ಬಿಂದುಶ್ರೀ ಕಪ್ಪಗಿದ್ದಾರೆ ಎಂದು ಆಕೆಯನ್ನು ಅವಮಾನಿಸಿ ವರದಕ್ಷಿಣಿ ಕಿರುಕುಳ ನೀಡಿರುವ ಆರೋಪ ಆಕೆಯ ಗಂಡನ ಮನೆಯವರ ಮೇಲೆ ಕೇಳಿಬಂದಿದೆ. 20 ಲಕ್ಷ ರೂಪಾಯಿ ಹಣ ಕೊಡುವಂತೆ ಕಿರುಕುಳ ಆರೋಪ ಕೇಳಿಬಂದಿದೆ. ಬಿಂದುಶ್ರೀ ಮದುವೆಯಾಗಿ 7 ತಿಂಗಳಾಗಿತ್ತು. ಮದುವೆ ವೇಳೆ 60 ಗ್ರಾಂ ತೂಕದ ಚಿನ್ನದ ಆಭರಣವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮೊದಲ 2 ತಿಂಗಳು ಆಕೆಯ ಗಂಡನ ಮನೆಯಲ್ಲಿ ಚೆನ್ನಾಗಿ ನೋಡಿಕೊಂಡಿದ್ದರು. ನಂತರ ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆಯಲು ಮಗಳ ನಮ್ಮ ಮನೆಗೆ ಬಂದಾಗ ವಾಪಾಸ್ ತಮ್ಮ ಮನೆಗೆ ಬರುವಾಗ 20 ಲಕ್ಷ ರೂ. ಹಣ ತರುವಂತೆ ಆಕೆಯ ಮಾವ ಹೇಳಿ ಕಳುಹಿಸಿದ್ದರು. ಆಕೆ ಮನೆಗೆ ಹೋದಾಗ ವರದಕ್ಷಿಣೆ ತರಲಿಲ್ಲವೆಂದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಬಿಂದುಶ್ರೀ ತವರು ಮನೆಯವರು ದೂರು ನೀಡಿದ್ದಾರೆ.

ಇದನ್ನೂ ಓದಿ: ಮನೆಗೆ ಓಡೋಡಿ ಬಂದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸರು

ಬಿಂದುಶ್ರೀಯ ಗಂಡ ರಾಘವೇಂದ್ರಗೆ ಮದುವೆ ಸಂದರ್ಭದಲ್ಲಿ 60 ಗ್ರಾಂ ಬಂಗಾರದ ಚಿನ್ನಾಭರಣಗಳನ್ನು ನೀಡಲಾಗಿತ್ತು. 60 ಗ್ರಾಂ ಬದಲು 100 ಗ್ರಾಂ. ಚಿನ್ನಾಭರಣ ಕೊಡಬೇಕಿತ್ತೆಂದು ಪದೇಪದೇ ಗಲಾಟೆ ಮಾಡುತ್ತಿದ್ದ. ಚಿಂತಾಮಣಿಯಿಂದ ಹೊಸಕೋಟೆ ತಾಲ್ಲೂಕಿನ ಹಿರಂಡಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ನಗರಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.

ತಂದೆ-ಮಗ ಇಬ್ಬರೂ ಕೇಂದ್ರ ಸರ್ಕಾರಿ ಸೌಮ್ಯದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ, ವರದಕ್ಷಿಣೆ ಎಂಬ ದನದಾನಕ್ಕೆ ಸೊಸೆಯನ್ನು ಬಲಿ ತೆಗೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ