ಪಾಂಡವಪುರಕ್ಕೂ ಕಾಲಿಟ್ಟ ಸೈಬರ್ ಚೋರರು: ಕಾರು ಗಿಫ್ಟ್ ಬಂದಿರುವುದಾಗಿ ಬಡ ರೈತನಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ!

| Updated By: ಸಾಧು ಶ್ರೀನಾಥ್​

Updated on: Jan 19, 2023 | 2:53 PM

cyber crime: ವಂಚನೆಗೊಳಗಾದ ಸಂಜೀವ್ ಗೌಡ ಈಗ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅದೇನೆ ಹೇಳಿ ಮೋಸ ಹೋಗುವವರ ಇರುವ ತನಕ... ಮೋಸ ಮಾಡುವವರು ಇದ್ದೆ ಇರ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸೂಕ್ತ ಉದಾಹರಣೆಯಾಗಿದೆ.

ಪಾಂಡವಪುರಕ್ಕೂ ಕಾಲಿಟ್ಟ ಸೈಬರ್ ಚೋರರು: ಕಾರು ಗಿಫ್ಟ್ ಬಂದಿರುವುದಾಗಿ ಬಡ ರೈತನಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ!
ಪಾಂಡವಪುರಕ್ಕೂ ಕಾಲಿಟ್ಟ ಸೈಬರ್ ಚೋರರು
Follow us on

ಆತ ಬಡ ರೈತ, ತಾನಾಯ್ತು ತನ್ನ ಗದ್ದೆ ಆಯ್ತು ಅಂತ ಇದ್ದವ.. ಆದ್ರೆ ಆತನ ಮನೆಗೆ ಬಂದ ಅದೊಂದು ಪೋಸ್ಟ್ ಆತನ ಸುಂದರ ಬಾಳನ್ನು ಕೆಡಿಸಿಟ್ಟಿದೆ. ಸೈಬರ್ ಚೋರರ (cyber crime) ಚಕ್ರವ್ಯೂಹದಲ್ಲಿ ಸಿಲುಕಿದ ರೈತ (farmer) ಈಗ ಲಕ್ಷ ಲಕ್ಷ ಹಣ ಕಳೆದು ಕೊಂಡು ಪರಿತಪಿಸುವಂತಾಗಿದೆ. ಕೈಯಲ್ಲಿ ಮೊಬೈಲ್ ಹಿಡಿದು ನಿಂತಿರುವ ಆ ವ್ಯಕ್ತಿ ಅದೇನನ್ನೊ ತೋರಿಸುತ್ತ ಪರಿತಪಿಸುತ್ತಿದ್ದಾನೆ ಈಗ. ಕಣ್ ಕಣ್ ಬಿಟ್ಕೊಂಡು ಕ್ಯಾಮರಾ ನೋಡ್ತಾ ನಿಂತಿರುವ ಈತನ ಹೆಸರು ಸಂಜೀವ್ ಗೌಡ ಅಂತ, ಬಡ ರೈತನೇ ಸರಿ ಈತ. ಮಂಡ್ಯ (mandya) ಜಿಲ್ಲೆ ಪಾಂಡವಪುರ (pandavapura) ತಾಲೂಕಿನ ಜಕ್ಕನಹಳ್ಳಿ ಗ್ರಾಮದವ. ಗಿಫ್ಟ್ ಕೂಪನ್ ಬಂತು ಅದರಲ್ಲಿ XUV 700 ಕಾರು (car) ಸಿಕ್ತು ಅಂತ ಕನಸು ಕಾಣುತ್ತಿದ್ದವ ಇವತ್ತು ಪೊಲೀಸ್ ಠಾಣೆಯ ಕದ ತಟ್ಟಿದ್ದಾನೆ. ದಿನನಿತ್ಯ ಹೊಲ ಗದ್ದೆ ಅಂತಾ ತಿರುಗಾಡ ಬೇಕಿದ್ದವ ಈಗ ಪೊಲೀಸು, ಕೇಸು ಅಂತಾ ಒದ್ದಾಡುತ್ತಿದ್ದಾನೆ.

ಅಸಲಿಗೆ ಸಂಜೀವ್ ಗೌಡರ ಪತ್ನಿ ನ್ಯೂ ಇಯರ್ ಆಫರ್ ಎಂದು ಮಿಶೋ ಆಪ್ ನಲ್ಲಿ ಕೆಲ ವಸ್ತುಗಳನ್ನ ಖರೀದಿಸಿದ್ದರು. ಆರ್ಡರ್ ಮಾಡಿದ ವಸ್ತುಗಳು ಸಹ ಮನೆಗೆ ಡೆಲಿವರಿ ಬಂದಿತ್ತು. ಆರ್ಡರ್ ಬಂದ ಒಂದು ವಾರದ ಬಳಿಕ ಸಂಜೀವ್ ಗೌಡರ ಮನೆಗೆ ಒಂದು ಪೋಸ್ಟ್ ಬಂದಿತ್ತು. ಅದನ್ನ ಓಪನ್ ಮಾಡಿ ನೋಡಿದಾಗ ಅದರಲ್ಲೊಂದು ಕೂಪನ್ ಇತ್ತು. ಅದನ್ನ ಸ್ಕ್ರಾಚ್​​ ಮಾಡಿ ನೋಡಿದಾಗ XUV 700 ಕಾರನ್ನ ಗೆದ್ದಿರುವುದಾಗಿ ತೋರಿಸಿತ್ತು.

ಬಳಿಕ ಮಿಶೋ ಕಂಪನಿ ವತಿಯಿಂದ ಕರೆ ಮಾಡ್ತಾಯಿದ್ದೇವೆ, ಕಾರನ್ನ ಯಾವಾಗ ಡೆಲವರಿ ಪಡೆಯುತ್ತೀರಾ? ಎಂದು ಕೇಳಿದ್ದಾರೆ. ಆದ್ರೆ ಸಂಜೀವ್ ಗೌಡ ನಮಗೆ ಕಾರು ಬೇಡ ಹಣ ಕೊಡಿ ಎಂದು ಕೇಳಿ ಕೊಂಡಿದ್ದಾನೆ. ಇದಕ್ಕೂ ಸೈಬರ್ ಚೋರರು ತಕ್ಷಣ ಒಪ್ಪಿಕೊಂಡಿದ್ದು, 29 ಲಕ್ಷದ 60 ಸಾವಿರ ಹಣ ನಿಮ್ಮ ಖಾತೆಗೆ ವರ್ಗಾವಣೆ ಮಾಡ್ಬೇಕಿದ್ರೆ ಸರ್ವಿಸ್ ಚಾರ್ಜ್ ಗಾಗಿ ಒಂದಿಷ್ಟು ಹಣ ನೀಡಬೇಕೆಂದು ತಿಳಿಸಿದ್ದಾರೆ.

ಇದನ್ನೂ ಓದಿ

Dr K Sudhakar: ಆರೋಗ್ಯ ಸಚಿವರೇ! 9 ತಿಂಗಳು ತುಂಬಿದೆ, ದಾಬಸ್​​ಪೇಟೆ ಟ್ರಾಮಾ ಸೆಂಟರ್​​ಗೆ ತುರ್ತು ಚಿಕಿತ್ಸೆ ನೀಡಿ ಇನ್ನಾದರೂ ಆಸ್ಪತ್ರೆ ಬಾಗಿಲು ತೆಗೆಯಿರಿ

ಹಂತ ಹಂತವಾಗಿ 7 ಲಕ್ಷದ 23 ಸಾವಿರ ಹಣವನ್ನ ಪೀಕಿದ್ದಾರೆ. ನಿಜವಾಗಿಯೂ ಕಾಸು ಬರುತ್ತದೆಂದು ನಂಬಿದ ಸಂಜೀವ್ ಗೌಡ ತನ್ನ ಹೆಂಡತಿಯ ಚಿನ್ನಾಭರಣಗಳನ್ನ ಒತ್ತೆಯಿಟ್ಟು ಹಣವನ್ನ ವರ್ಗಾವಣೆ ಮಾಡಿದ್ದಾನೆ. ಆದ್ರೆ ಇತ್ತ ಹಣ ಪಡೆದ ಸೈಬರ್ ಚೋರರು ಕೈ ಎತ್ತಿದ್ದಾರೆ ಎಂದು ಮಂಡ್ಯ ಎಸ್ ಪಿ ಎನ್. ಯತೀಶ್ ಸ್ಥೂಲವಾಗಿ ಮಾಹಿತಿ ನೀಡಿದ್ದಾರೆ.

ವಂಚನೆಗೊಳಗಾದ ಸಂಜೀವ್ ಗೌಡ ಈಗ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅದೇನೆ ಹೇಳಿ ಮೋಸ ಹೋಗುವವರ ಇರುವ ತನಕ… ಮೋಸ ಮಾಡುವವರು ಇದ್ದೆ ಇರ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸೂಕ್ತ ಉದಾಹರಣೆಯಾಗಿದೆ.

ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ