Dharwad News: ಮನೆಯಿಂದ ಹೊರಹೋದ ಮಹಿಳೆ ಶವವಾಗಿ ಪತ್ತೆ; ಕಣ್ಣೀರಿನಲ್ಲಿ ಕುಟುಂಬ

|

Updated on: Jun 10, 2023 | 7:42 AM

ಆ ಮಹಿಳೆ ನಿನ್ನೆ(ಜೂ.8) ಬೆಳಿಗ್ಗೆ ಮನೆಯಿಂದ ಹೊರಗೆ ಹೋಗಿದ್ದಳು. ನಿತ್ಯವೂ ಹೀಗೆ ಹೊರಗೆ ಹೋಗೋ ಅವರು ದರ್ಗಾವೊಂದಕ್ಕೆ ಹೋಗಿ, ಕೆಲ ಕಾಲ ಕಳೆದು ಬರುತ್ತಿದ್ದಳು. ಗುರುವಾರವೂ ಹೀಗೆಯೇ ಆಗಿದೆ. ಆದರೆ ನಿತ್ಯ ಮನೆಗೆ ಬರುವ ಹಾಗೆ ಬಂದಿಲ್ಲ. ಇದರಿಂದ ಕಂಗೆಟ್ಟ ಮನೆಯವರು ಹುಡುಕಾಡಲಾಗಿ, ಆಕೆ ಸಿಕ್ಕಿದ್ದು ಶವವಾಗಿ, ಅದೂ ನಗರದಿಂದ ದೂರದಲ್ಲಿರೋ ಒಂದು ಹೊಲದಲ್ಲಿ.

Dharwad News: ಮನೆಯಿಂದ ಹೊರಹೋದ ಮಹಿಳೆ ಶವವಾಗಿ ಪತ್ತೆ; ಕಣ್ಣೀರಿನಲ್ಲಿ ಕುಟುಂಬ
ಕೊಲೆಯಾದ ಮಹಿಳೆ
Follow us on

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಮತ್ತೊಮ್ಮೆ ರಕ್ತ ಚೆಲ್ಲಿದೆ. ಇತ್ತೀಚಿಗಷ್ಟೇ ಡಬಲ್ ಮರ್ಡರ್​ನಿಂದ ಕಂಗೆಟ್ಟಿದ್ದ ಧಾರವಾಡ(Dharwad) ಇದೀಗ ಮತ್ತೊಂದು ಕೊಲೆಗೆ ಸಾಕ್ಷಿಯಾಗಿದೆ. ಈ ಚಿತ್ರದಲ್ಲಿ ಕಾಣುವ ಮಹಿಳೆಯ ಹೆಸರು ರೂಪಾ ಸವದತ್ತಿ ಎಂಬುವವರು ಭೀಕರ ಕೊಲೆಯಾಗಿದ್ದಾರೆ. ಇವರು ನಗರದ ಕಿಲ್ಲಾ ಬಡಾವಣೆಯಲ್ಲಿದ್ದು, ಇವರ ಪತಿ ಲಕ್ಷ್ಮಣ ನಗರದ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಾರೆ. ತಾವಾಯಿತು, ತಮ್ಮ ಕುಟುಂಬವಾಯಿತು ಅಂತಾ ಇದ್ದ ಇವರ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ನಿತ್ಯವೂ ರೂಪಾ ಬೆಳಿಗ್ಗೆ ತನ್ನೆಲ್ಲ ಕೆಲಸ ಮುಗಿಸಿಕೊಂಡು ಗಾಂಧಿ ವೃತ್ತದ ಬಳಿಯ ದರ್ಗಾವೊಂದಕ್ಕೆ ಹೋಗುತ್ತಿದ್ದರು. ಅಲ್ಲಿ ಕೆಲ ಕಾಲವಿದ್ದು, ಬಳಿಕ ಅಲ್ಲಿಂದ ಮನೆಗೆ ಬರೋದು ರೂಢಿ. ದರ್ಗಾಕ್ಕೆ ಹೋದರೆ ಅವರಿಗೆ ನೆಮ್ಮದಿ ಸಿಗುತ್ತಿತ್ತು ಅನ್ನೋದನ್ನು ಅರಿತಿದ್ದ ಮನೆಯವರು ಕೂಡ ತಲೆ ಕೆಡಿಸಿಕೊಂಡಿರಲಿಲ್ಲ. ಗುರುವಾರವೂ ಎಂದಿನಂತೆ ರೂಪಾ ಕೆಲಸ ಮುಗಿಸಿಕೊಂಡು 10 ಗಂಟೆಯ ಹೊತ್ತಿಗೆ ದರ್ಗಾಕ್ಕೆ ಹೋಗಿದ್ದಾರೆ. ಆದರೆ, ಮಧ್ಯಾಹ್ನವಾದರೂ ಮನೆಗೆ ಬಾರದೇ ಇದ್ದಾಗ ಮಗ ತಾಯಿಗೆ ಫೋನ್ ಮಾಡಿದ್ದಾನೆ. ಆದರೆ ಮೊಬೈಲ್ ಸ್ವಿಚ್ ಆಫ್ ಎಂದು ಬಂದಿದೆ. ಇದರಿಂದಾಗಿ ತಂದೆಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಧಾರವಾಡ ಉಪನಗರ ಠಾಣೆಗೆ ದೂರು ನೀಡಿದ್ದಾರೆ.

ಈ ಮಧ್ಯೆ ಕುಟುಂಬಸ್ಥರು ಹಾಗೂ ಸ್ಥಳೀಯರು ನಿತ್ಯ ರೂಪಾ ಹೋಗುತ್ತಿದ್ದ ದರ್ಗಾಕ್ಕೆ ಹೋಗಿ ವಿಚಾರಿಸಿದ್ದಾರೆ. ಅವರು ಎಂದಿನಂತೆ 11 ಗಂಟೆಗೆ ಇಲ್ಲಿಂದ ಹೋದರು ಅಂತಾ ಹೇಳಿದ್ದಾರೆ. ಬಳಿಕ ದರ್ಗಾದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗಿ, ಹೊರಗಡೆ ಹೋಗೋ ರೂಪಾ ಮನೆಯ ದಾರಿಯತ್ತಲೇ ಸಾಗಿದ್ದಾರೆ. ಹೀಗಾಗಿ ರೂಪಾ ಎಲ್ಲಿಗೆ ಹೋಗಿರಬಹುದು ಅನ್ನೋ ಪ್ರಶ್ನೆ ಬಂದಿದೆ. ಆದರೂ ಕುಟುಂಬಸ್ಥರು ಹಾಗೂ ಸ್ಥಳೀಯರೆಲ್ಲ ಸೇರಿ ಎಲ್ಲ ಕಡೆ ಹುಡುಕಾಡಿದ್ದಾರೆ. ಆದರೆ, ನಿನ್ನೆ(ಜೂ.9) ಬೆಳಿಗ್ಗೆ ರೂಪಾಳ ಶವ ಧಾರವಾಡ ತಾಲೂಕಿನ ಗೋವನಕೊಪ್ಪ ರಸ್ತೆಯ ಪಕ್ಕದಲ್ಲಿನ ಹೊಲದಲ್ಲಿ ಪತ್ತೆಯಾಗಿದೆ. ಹೊಲದ ಬದುವಿನಲ್ಲಿ ಆಕೆಯ ಭೀಕರ ಕೊಲೆ ಆಗಿದೆ. ಕೂಡಲೇ ಕುಟುಂಬಸ್ಥರು ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲಾಗಿ, ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ಶಾಸಕರ ಅಭಿನಂದನಾ ಸಮಾರಂಭದಲ್ಲೇ ಚಾಕು ಇರಿದು ವ್ಯಕ್ತಿ ಕೊಲೆ; ಕಾರಣ ಇಲ್ಲಿದೆ ನೋಡಿ

ಇನ್ನು ಪತಿ-ಪತ್ನಿ ಯಾವತ್ತೂ ಮನೆಯಲ್ಲಿ ಜಗಳವಾಡಿದವರಲ್ಲವೆಂದು ಎಲ್ಲರೂ ಹೇಳುತ್ತಾರೆ. ಈ ಮುಂಚೆ ಲಕ್ಷ್ಮಣ ಧಾರವಾಡದ ಕೆಸಿಡಿ ವೃತ್ತದ ಬಳಿ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಇತ್ತೀಚಿಗೆ ಅದನ್ನು ಬಿಟ್ಟು ಹೋಟೆಲ್ ವೊಂದರಲ್ಲಿ ಕೆಲಸಕ್ಕೆ ಸೇರಿದ್ದಾರೆ. ಉಳಿದಂತೆ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಇವೆಲ್ಲ ಮಾಹಿತಿಗಳನ್ನು ಪಡೆದಿರೋ ಪೊಲೀಸರು ಇದೀಗ ಕೊಲೆಗಾರನಿಗೆ ಬಲೆ ಬೀಸಿದ್ದಾರೆ. ಯಾವ ಕಾರಣಕ್ಕೆ ಕೊಲೆ ಆಗಿದೆ ಅನ್ನೋದು ಮಾತ್ರ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9 ಧಾರವಾಡ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ