ಗ್ರೇಟರ್ ನೋಯ್ಡಾ; ಸ್ನೇಹಿತೆಯ ತಬ್ಬಿಕೊಂಡೇ ಗುಂಡಿಕ್ಕಿದ ವಿದ್ಯಾರ್ಥಿ, ವಿವಿ ಡೈನಿಂಗ್ ಹಾಲ್​ನಲ್ಲಿ ಭೀಕರ ಕೊಲೆ

ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ನಂತರ ಗುಂಡಿಕ್ಕಿ ಹತ್ಯೆ ಮಾಡಿದ ದಾರುಣ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಪಕ್ಕದಲ್ಲಿರುವ ಗ್ರೇಟರ್ ನೋಯ್ಡಾದ (Greater Noida) ಶಿವ ನಾಡರ್ ವಿಶ್ವವಿದ್ಯಾಲಯದಲ್ಲಿ (Shiv Nadar University) ಗುರುವಾರ ನಡೆದಿದೆ.

ಗ್ರೇಟರ್ ನೋಯ್ಡಾ; ಸ್ನೇಹಿತೆಯ ತಬ್ಬಿಕೊಂಡೇ ಗುಂಡಿಕ್ಕಿದ ವಿದ್ಯಾರ್ಥಿ, ವಿವಿ ಡೈನಿಂಗ್ ಹಾಲ್​ನಲ್ಲಿ ಭೀಕರ ಕೊಲೆ
ಸಾಂದರ್ಭಿಕ ಚಿತ್ರ

Updated on: May 18, 2023 | 6:46 PM

ನವದೆಹಲಿ: ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ನಂತರ ಗುಂಡಿಕ್ಕಿ ಹತ್ಯೆ ಮಾಡಿದ ದಾರುಣ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಪಕ್ಕದಲ್ಲಿರುವ ಗ್ರೇಟರ್ ನೋಯ್ಡಾದ (Greater Noida) ಶಿವ ನಾಡರ್ ವಿಶ್ವವಿದ್ಯಾಲಯದಲ್ಲಿ (Shiv Nadar University) ಗುರುವಾರ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ವಿದ್ಯಾರ್ಥಿನಿಯು ಕಾನ್ಪುರದ ನಿವಾಸಿ ಎಂದು ಹೇಳಲಾಗಿದೆ. ಹತ್ಯೆ ಮಾಡಿದ ವಿದ್ಯಾರ್ಥಿಯನ್ನು ಅಮ್ರೋಹಾ ಮೂಲದವನು ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯ ಕೊಲೆಗೆ ಕಾರಣ ಏನೆಂಬ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಪ್ರಕಟವಾಗಿಲ್ಲ. ಪ್ರೇಮ ಪ್ರಕರಣದಿಂದ ಈ ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ವಿಶ್ವವಿದ್ಯಾಲಯದಲ್ಲಿ ನಡೆದಿದ್ದೇನು?

ಆರೋಪಿ ವಿದ್ಯಾರ್ಥಿ ಮತ್ತು ಮೃತ ವಿದ್ಯಾರ್ಥಿನಿ ಗ್ರೇಟರ್ ನೋಯ್ಡಾದಲ್ಲಿರುವ ಶಿವ ನಾಡರ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. ಇಬ್ಬರೂ ವಿಶ್ವವಿದ್ಯಾಲಯದಲ್ಲಿ ಬಿಎ ಸಮಾಜಶಾಸ್ತ್ರದಲ್ಲಿ ಮೂರನೇ ವರ್ಷ ಓದುತ್ತಿದ್ದರು. ಇಬ್ಬರ ನಡುವೆ ಕೆಲ ಕಾಲ ವಾಗ್ವಾದ ನಡೆದಿತ್ತು. ಇದಾದ ನಂತರ ವಿಶ್ವವಿದ್ಯಾಲಯದ ಡೈನಿಂಗ್‌ ಹಾಲ್‌ನಲ್ಲಿ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದ ವಿದ್ಯಾರ್ಥಿ ಅಲ್ಲಿಂದ ಬಾಲಕರ ವಸತಿ ನಿಲಯಕ್ಕೆ ಓಡಿಹೋಗಿದ್ದಾನೆ. ಅಲ್ಲಿ ಆತ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ದಾದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊದಲು ತಬ್ಬಿಕೊಂಡ, ನಂತರ ಗುಂಡು ಹಾರಿಸಿದ!

ಪ್ರಾಥಮಿಕ ಮಾಹಿತಿ ಪ್ರಕಾರ, ಕೊಲೆ ಮಾಡಿದ ವಿದ್ಯಾರ್ಥಿಯ ಹೆಸರು ಅನುಜ್. ಆತ ಹಾಗೂ ವಿದ್ಯಾರ್ಥಿನಿ ವಿಶ್ವವಿದ್ಯಾಲಯದ ಅದೇ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅನುಜ್ ಮತ್ತು ವಿದ್ಯಾರ್ಥಿನಿ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಕೆಲವು ಸಮಯ ಹಿಂದೆ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳ ನಡೆದಿತ್ತು. ಗುರುವಾರ ಇಬ್ಬರ ಸಾವಿನೊಂದಿಗೆ ಕೊನೆಗೊಂಡಿತು.

ಇದನ್ನೂ ಓದಿ: ಬೆಂಗಳೂರು: ನಡು ರಸ್ತೆಯಲ್ಲಿ ಹತ್ಯೆಗೈದು ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ ಹಂತಕರು

ಗುರುವಾರ, ಅನುಜ್ ವಿಶ್ವವಿದ್ಯಾಲಯದ ಡೈನಿಂಗ್ ಹಾಲ್‌ನಲ್ಲಿ ಸ್ನೇಹಿತೆಯನ್ನು ಭೇಟಿಯಾದ. ಇಬ್ಬರೂ ಸ್ವಲ್ಪ ಸಮಯ ಮಾತನಾಡಿದರು ಮತ್ತು ನಂತರ ಅನುಜ್ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಪಿಸ್ತೂಲ್ ತೆಗೆದುಕೊಂಡು ಆಕೆಯ ಮೇಲೆ ಗುಂಡು ಹಾರಿಸಿದ. ಬಾಲಕಿಯನ್ನು ಕೊಂದ ನಂತರ ಅನುಜ್ ಬಾಲಕರ ಹಾಸ್ಟೆಲ್‌ನ ಕೊಠಡಿ ಸಂಖ್ಯೆ 328ಕ್ಕೆ ಓಡಿ ಅದೇ ಪಿಸ್ತೂಲ್‌ನಿಂದ ತನ್ನ ಮೇಲೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಇಬ್ಬರ ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಇಬ್ಬರ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us