ಕಾರಿನಲ್ಲಿ ಕರೆದೊಯ್ದು ಉಸಿರುಗಟ್ಟಿಸಿ ಅವಳಿ ಮಕ್ಕಳ ಕೊಲೆಗೈದ ತಂದೆ; ಪೊಲೀಸರು ಪ್ರಕರಣ ಬಯಲಿಗೆಳೆದದ್ದು ಹೀಗೆ

ತಂದೆಯೇ ತನ್ನ ಅವಳಿ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದ ಅವರ ಮುಖಕ್ಕೆ ಟೆಕ್ಸೋ ಟೇಪ್ ಅಂಟಿಸಿ ಉಸಿರುಗಟ್ಟಿಸಿ ಹತ್ಯೆ (Murder) ಮಾಡಿದ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು (Ranebennur) ತಾಲೂಕಿನ ಚಳಗೇರಿ ಟೋಲ್ ಗೇಟ್ ಬಳಿ ಬುಧವಾರ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.

ಕಾರಿನಲ್ಲಿ ಕರೆದೊಯ್ದು ಉಸಿರುಗಟ್ಟಿಸಿ ಅವಳಿ ಮಕ್ಕಳ ಕೊಲೆಗೈದ ತಂದೆ; ಪೊಲೀಸರು ಪ್ರಕರಣ ಬಯಲಿಗೆಳೆದದ್ದು ಹೀಗೆ
ಸಾಂದರ್ಭಿಕ ಚಿತ್ರ

Updated on: Jun 01, 2023 | 6:12 PM

ಹಾವೇರಿ: ತಂದೆಯೇ ತನ್ನ ಅವಳಿ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದ ಅವರ ಮುಖಕ್ಕೆ ಟೆಕ್ಸೋ ಟೇಪ್ ಅಂಟಿಸಿ ಉಸಿರುಗಟ್ಟಿಸಿ ಹತ್ಯೆ (Murder) ಮಾಡಿದ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು (Ranebennur) ತಾಲೂಕಿನ ಚಳಗೇರಿ ಟೋಲ್ ಗೇಟ್ ಬಳಿ ಬುಧವಾರ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ. ಮೃತಪಟ್ಟ ಮಕ್ಕಳನ್ನು ಅದ್ವೈತ್ (4), ಅನ್ವೀತ್ (4) ಎಂದು ಗುರುತಿಸಲಾಗಿದೆ. ಇವರ ತಂದೆ ತಂದೆ ಅಮರ್ ಕಿತ್ತೂರು ಪತ್ನಿ ವಿಜಯಪುರದಲ್ಲಿರುವ ತವರಿಗೆ ಹೋಗಿದ್ದ ಸಂದರ್ಭದಲ್ಲಿ ಮಕ್ಕಳನ್ನು ಕರೆದೊಯ್ದು ಕೊಲೆ ಮಾಡಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್ ನಿವಾಸಿಯಾಗಿರುವ ಅಮರ್ ಸದ್ಯ ದಾವಣಗೆರೆಯ ಆಂಜನೇಯ ಮಿಲ್ ಬಡಾವಣೆಯಲ್ಲಿ ವಾಸವಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ಬಳಿ ಇರುವ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿದ್ದಾರೆ. ಕೃತ್ಯ ಎಸಗಲು ಮಕ್ಕಳನ್ನು ಕೊರೆದೊಯ್ಯುವಾಗ ಅವರ ತಾಯಿ ಮನೆಯಲ್ಲೇ ಇದ್ದರು ಎನ್ನಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಅಮರ್ ತನ್ನ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾಗ ಪತ್ನಿ ದೂರವಾಣಿ ಕರೆ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ಅಮರ್, ಮಕ್ಕಳ ಕಥೆ ಮುಗಿದಿದೆ ಎಂದಿದ್ದರು. ಇದರಿಂದ ಗಾಬರಿಗೊಂಡ ಪತ್ನಿ ತಕ್ಷಣವೇ ದಾವಣಗೆರೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿ ಆತಂಕ ವ್ಯಕ್ತಪಡಿಸಿದ್ದರು. ಅಷ್ಟರಲ್ಲಾಗಲೇ ಅಮರ್ ತನ್ನ ಮೊಬೈಲ್ ಫೋನ್​ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು. ಸಿಮ್ ಕಾರ್ಡ್ ಟ್ರೇಸ್ ಮಾಡಿದ ಪೊಲೀಸರಿಗೆ ಅಮರ್ ಚಳಗೇರಿ ಟೋಲ್ ಬಳಿ ಇದ್ದ ಮಾಹಿತಿ ಲಭ್ಯವಾಗಿದೆ. ಅಲ್ಲಿಗೆ ತೆರಳಿದಾಗ ಆರೋಪಿಯು ದಾವಣಗೆರೆಗೆ ವಾಪಸಾಗಿರುವುದು ತಿಳಿಯುತ್ತದೆ. ನಂತರ ದಾವಣಗೆರೆಗೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೊಲೆಯ ನಂತರ ಮಾಡಿದ್ದೇನು?

ಕೊಲೆ ಮಾಡಿದ ನಂತರ ಮಕ್ಕಳ ಶವಗಳನ್ನು ಅಮರ್ ಕಾರಿನಲ್ಲಿಯೇ ತಂದಿದ್ದರು. ಪೊಲೀಸರ ತನಿಖೆ ವೇಳೆ, ತಾನೇ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ. ಘಟನೆ ಸಂಬಂಧ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಶವಗಳನ್ನೂ ಬಿಡುತ್ತಿಲ್ಲ ಕಾಮುಕರು! ಮೃತದೇಹದ ಮೇಲೆ ಅತ್ಯಾಚಾರ ತಡೆಗೆ ಕಾನೂನು ರೂಪಿಸಲು ಕರ್ನಾಟಕ ಹೈಕೋರ್ಟ್ ಶಿಫಾರಸು

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಕ್ಕಳನ್ನು ಹತ್ಯೆಗೈದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದಾಗ್ಯೂ, ಹೆಚ್ಚಿನ ವಿವರ ತನಿಖೆಯ ನಂತರ ತಿಳಿಯಬೇಕಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us