AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Escape Karthik: ಸೆಂಚುರಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಹೆಣ್ಣೂರು ಪೊಲೀಸರಿಗೆ ಮತ್ತೆ ಲಾಕ್!

House Break: 2005 ರಲ್ಲಿ ಮೊದಲಿಗೆ, ತನ್ನ 16 ವಯಸ್ಸಿನಲ್ಲೇ ಮನೆಗಳ್ಳತನ ಶುರು ಮಾಡಿದ್ದ ಎಸ್ಕೇಪ್ ಕಾರ್ತೀಕ್ ಬೆಂಗಳೂರಿನ ಹೆಣ್ಣೂರು ನಿವಾಸಿ. ಇದುವರೆಗೆ 100 ಮನೆಗಳ್ಳತನಗಳನ್ನು ಮಾಡಿ, ಸೆಂಚುರಿ ಮನೆಗಳ್ಳ ಎನಿಸಿಕೊಂಡಿದ್ದಾನೆ. ಕಾರ್ತೀಕ ಸಾರಾಯಿ ಪಾಳ್ಯದ ಯುವತಿಯನ್ನ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ.

Escape Karthik: ಸೆಂಚುರಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಹೆಣ್ಣೂರು ಪೊಲೀಸರಿಗೆ ಮತ್ತೆ ಲಾಕ್!
ಸೆಂಚುರಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್
TV9 Web
| Updated By: ಸಾಧು ಶ್ರೀನಾಥ್​|

Updated on: Nov 04, 2022 | 7:49 PM

Share

ಬೆಂಗಳೂರಿನ ಹೆಣ್ಣೂರು ಪೊಲೀಸರು (Bangalore Police) ಮನೆಗಳ್ಳತನದಲ್ಲಿ ಪಳಗಿರುವ ಎಸ್ಕೇಪ್ ಕಾರ್ತೀಕನನ್ನು (Escape Karthik) ಮತ್ತೆ ಅರೆಸ್ಟ್ (Arrest) ಮಾಡಿದ್ದಾರೆ. ಎಸ್ಕೇಪ್ ಕಾರ್ತೀಕ್ ಮತ್ತೆ ಪೊಲೀಸರಿಗೆ ಲಾಕ್ ಆಗಿರೋದು ಮತ್ತದೇ ಮನೆಗಳ್ಳತನ ಕೇಸ್ ನಲ್ಲಿ ಎಂಬುದು ಗಮನಾರ್ಹ. ಮನೆಗಳ್ಳತನವನ್ನೇ ಫುಲ್ ಟೈಮ್ ಪ್ರೊಫೆಷನ್ ಮಾಡ್ಕೊಂಡಿರುವ ಈ ಖತರ್ನಾಕ್ ಮನೆಗಳ್ಳ (Notorious burglar) ಎಸ್ಕೇಪ್ ಕಾರ್ತಿಕ್ ಇನ್ ಸೈಡ್ ಕಹಾನಿ ರೋಚಕವಾಗಿದೆ, ಓದಿ.

ಬರೋಬ್ಬರಿ 17 ವರ್ಷಗಳಿಂದ ಮನೆಗಳ್ಳತನ ಮಾಡ್ತಾ ಎಕ್ಸ್ ಪರ್ಟ್ ಅದಾನ ಈ ಎಸ್ಕೇಪ್ ಕಾರ್ತೀಕ!

2005 ರಲ್ಲಿ ಮೊದಲಿಗೆ, ತನ್ನ 16 ವಯಸ್ಸಿನಲ್ಲೇ ಮನೆಗಳ್ಳತನ ಶುರುಮಾಡಿದ್ದ ಎಸ್ಕೇಪ್ ಕಾರ್ತೀಕ್ ಬೆಂಗಳೂರಿನ ಹೆಣ್ಣೂರು ನಿವಾಸಿ. ಒಮ್ಮೆ ಎಸ್ಕೇಪ್ ಕಾರ್ತೀಕ್ ಯಾವುದಾದರೂ ಮನೆಯನ್ನು ಟಾರ್ಗೆಟ್ ಮಾಡಿದರೆ ಆ ಮನೆಯ ಬಾಲ್ಕನಿ, ಕಿಟಕಿ ಮೂಲಕ ನುಗ್ಗಿ ಕೆ.ಜಿ. ಗಟ್ಟಲೇ ಚಿನ್ನಾಭರಣ, ನಗದು ಹಣ ಎಗರಿಸಿ ಎಸ್ಕೇಪ್ ಆಗಿಬಿಡುತ್ತಾನೆ.

ಸಂಜೆ ವೇಳೆ ಏರಿಯಾ ರೌಂಡ್ಸ್ ಮಾಡೋದು, ಬೀಗ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡೋದು, ಪಕ್ಕಾ ಸ್ಕೆಚ್ ಹಾಕಿ ಕತ್ತಲಾಗ್ತಿದ್ದಂತೆ ವಾಚ್ ಮಾಡೋಕೆ ಅಂತಾ ಒಂದಿಬ್ಬರು ಹುಡುಗರನ್ನ ಕರೆದುಕೊಂಡು ಹೋಗಿ ರಾಡ್ ನಿಂದ ಮನೆ ಬೀಗ ಹೊಡೆದು, ಸೀದಾ ಮನೆಗೆ ನುಗ್ಗಿ ಚಿನ್ನಾಭರಣಗಳನ್ನ ಲೂಟಿ‌ ಮಾಡ್ತಾನೆ. ಒಮ್ಮೆ ಕಳವು ಮಾಡಲು ಕರೆದೊಯ್ದ ಹುಡುಗರನ್ನ ಮತ್ತೆ ಕಳ್ಳತನ‌ ಮಾಡಲು ಕರದುಕೊಂಡು ಹೋಗಲ್ಲ. ಯಾಕಂದ್ರೆ, ಮತ್ತೆ ಇವ್ರು ಮಾಹಿತಿ ಲೀಕ್ ಮಾಡ್ತಾರೆ ಅಂತಾ ಪದೇ ಪದೇ ತನ್ನ ಪಟಾಲಂನ ಹುಡುಗರನ್ನ ಬದಲಾಯಿಸ್ತಾ ಇರ್ತಾನೆ ಈ ಎಸ್ಕೇಪ್ ಕಾರ್ತಿಕ! ಇವ್ನು ಸಲೀಸಾಗಿ ಪೊಲೀಸರಿಂದ, ಜೈಲಿಂದ ಎಸ್ಕೇಪ್ ಆಗೋದ್ರಲ್ಲೂ ನಿಸ್ಸೀಮ.

ಎಸ್ಕೇಪ್ ಕಾರ್ತೀಕ 6 ನೇ ಕ್ಲಾಸ್ ನವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ. ಮನೆಗಳ್ಳತನ ಮಾಡೋದು, ಕೆ.ಜಿ. ಗಟ್ಟಲೇ ಬಂಗಾರ ಎಗರಿಸಿ ಚಿನ್ನಾಭರಣ ಕೊಳ್ಳುವ ಫೈನಾನ್ಸ್ ಗಳಿಗೆ ಮಾರಾಟ ಮಾಡೋದು, ನೆರೆ ರಾಜ್ಯಗಳಲ್ಲಿ ಚಿನ್ನಾಭರಣ ಮಾರಾಟ ಮಾಡಿ ಹಣ ಸಂಗ್ರಹಿಸಿ ಕ್ಲಬ್ – ಪಬ್ ಸುತ್ತಿ ವಿಲಾಸಿ ಜೀವನ ನಡೆಸುವುದು ಇವನ ವೃತ್ತಿ-ಪ್ರವೃತ್ತಿ.‌ (ವಿಶೇಷ ವರದಿ: ಶಿವಪ್ರಸಾದ್ ಬಿ, ಟಿವಿ 9, ಬೆಂಗಳೂರು)

2005 ರಲ್ಲಿ ಕಳ್ಳತನ ಆರಂಭಿಸದವ್ನು ಇದುವರೆಗೆ ಬರೋಬ್ಬರಿ 100 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಆದರೂ ಇನ್ನೂ ಕೂಡ ಮನೆಗಳ್ಳತನ‌ ಮಾಡೋದನ್ನ ಮುಂದುವರೆಸಿದ್ದಾನೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ, ಹೆಣ್ಣೂರು, ಕೊತ್ತನೂರು ಸೇರಿದಂತೆ ಮೈಸೂರು, ಹಾಸನದಲ್ಲೂ ತನ್ನ ಕೈಚಳಕ ತೋರಿಸಿರುವ ಖತರ್ನಾಕ್ ಅಸಾಮಿ ಈ ಎಸ್ಕೇಪ್ ಕಾರ್ತೀಕ್.

ಪರಪ್ಪನ ಅಗ್ರಹಾರ ದಿಂದ ಪೊಲೀಸರ ವಿಚಾರಣೆ ವೇಳೆಯೂ ಎಸ್ಕೇಪ್ ಆಗಿದ್ದ ಎಸ್ಕೇಪ್ ಕಾರ್ತೀಕ್:

ಕುಖ್ಯಾತ ಕಳ್ಳ ಕಾರ್ತೀಕ್ ಎಸ್ಕೇಪ್ ಕಾರ್ತಿಕ್ ಅನ್ನೋ ಹೆಸರು ಬಂದಿದ್ದು ಅವನು ಪದೇ ಪದೇ ಎಸ್ಕೇಪ್ ಆಗ್ತಿದ್ದರಿಂದ! 20 ಕ್ಕೂ ಹೆಚ್ಚು ಬಾರಿ ಬೆಂಗಳೂರು ಪೊಲೀಸರಿಂದ ಬಂಧನವಾಗಿದ್ದಾನೆ. ಬೆಂಗಳೂರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ, 2008 ಹಾಗೂ 2010 ರಲ್ಲಿ ಪೊಲೀಸರ ಕಸ್ಟಡಿಯಿಂದ ಎಸ್ಕೇಪ್ ಆಗಿದ್ದ ಆರೋಪಿ ಇವ.

ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣ ಸಂಬಂಧ ಎಸ್ಕೇಪ್ ಕಾರ್ತಿಕನನ್ನು ಬಂಧನ ಮಾಡಿದ್ದರು. ಈ ವೇಳೆ ಆರೋಪಿಯಿಂದ 11 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದರು. ಹೆಣ್ಣೂರು ಮನೆಯೊಂದರಲ್ಲಿ ಬರೋಬ್ಬರಿ 10 ಲಕ್ಷ ರೂ ನಗದು ಹಣ ಎಗರಿಸಿ ಎಸ್ಕೇಪ್ ಆಗಿದ್ದ ಈ ಎಸ್ಕೇಪ್ ಕಾರ್ತೀಕ್‌. ರಾಮು, ಕುಮಾರ, ಜಗನ್‌, ನೇಪಾಳಿ ಕೃಷ್ಣ ಎಸ್ಕೇಪ್ ಕಾರ್ತೀಕನ ಸಹಚರರಾಗಿದ್ದವರು. ಕದ್ದ ಚಿನ್ನಾಭರಣಗಳನ್ನ ಗಿರವಿ ಇಡಲು, ಫೈನಾನ್ಸ್ ಗಳು, ಜುವೆಲ್ಲರಿ ಶಾಪ್ ಗಳಿಗೆ ಮಾರಾಟ ಮಾಡಲು ಇವನ ಸಹಚರರು ಇವನಿಗೆ ಸಾಥ್​ ನೀಡ್ತಿದ್ದರು.

ಪರಪ್ಪನ ಅಗ್ರಹಾರ ಜೈಲಿಂದಲೇ ಊಟದ ವ್ಯಾನ್ ಮೂಲಕ ಛಾಸೀಸ್ ಹಿಡಿದು ಎಸ್ಕೇಪ್!

2007 ರಲ್ಲಿ ಸಿಸಿಬಿ ಪೊಲೀಸರಿಗೆ ಲಾಕ್ ಆಗಿ ಪರಪ್ಪನ ಅಗ್ರಹಾರ ಸೇರಿದ್ದ ಕಾರ್ತೀಕ್, ಜೈಲಿನಲ್ಲಿ ಇರುವಾಗಲೇ ಇಸ್ಕಾನ್ ಊಟ ಸಪ್ಲೈ ಮಾಡ್ತಿದ್ದ ವ್ಯಾನಿನ ಛಾಸೀಸ್ ಹಿಡಿದು ಮೊದಲ ಬಾರಿ ಎಸ್ಕೇಪ್ ಆಗಿದ್ದ! 2010 ರಲ್ಲಿ ಜೀವನ್ ಭೀಮಾ ನಗರ ಪೊಲೀಸರಿಗೆ ಮನೆಗಳ್ಳತನ ಪ್ರಕರದಲ್ಲಿ ಬಂಧನವಾಗಿದ್ದು, ಪೊಲೀಸರ ವಿಚಾರಣೆ ವೇಳೆ ಬಾತರೂಮ್ ನಿಂದ ಎಸ್ಕೇಪ್ ಆಗಿದ್ದ. ಮಾರನೇ ದಿನವೇ ಪತ್ತೆ ಹಚ್ಚಿದ್ದ ಪೊಲೀಸರು ಲಾಕ್ ಮಾಡಿದ್ದರು. ಆದ್ರೆ ಮನೆಗಳ್ಳತನ ವೇಳೆ ಆಗಲಿ ಎಸ್ಕೇಪ್ ಆಗೋ ವೇಳೆಯಲ್ಲಿ ಯಾವುದೇ ಹಲ್ಲೆ, ಪ್ರಾಣ ಹಾನಿ ಮಾಡದೆ, ಕಳವು ಮಾಡೋದನ್ನೇ ಇವ ಖಯಾಲಿ ಮಾಡ್ಕೊಂಡಿದ್ದಾನೆ.

2012 ರಲ್ಲಿ ಕೆ.ಜಿ. ಹಳ್ಳಿ‌ ಪೊಲೀಸರು ಅರೆಸ್ಟ್ ಮಾಡಿದಾಗ 1 ತಿಂಗಳು ಜೈಲಿನಲ್ಲಿದ್ದ. ಬಳಿಕ ಜಾಮೀನಿನ ಮೇಲೆ ಹೊರಬಂದು ಮತ್ತೆ ಕಳ್ಳತನ ಶುರುಮಾಡಿದ್ದ. 2013 ರಲ್ಲಿ 14 ಕೇಸ್ ಗಳಲ್ಲಿ ಬೇಕಾಗಿದ್ದ ಆರೋಪಿ ಕಾರ್ತೀಕನನ್ನು ಬಾಣಸವಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾಗ‌ ಜೈಲಿಂದ ಮತ್ತೆ ಎಸ್ಕೇಪ್ ಆಗಿದ್ದ. ಕೊತ್ತನೂರು ಪೊಲೀಸರು ಬಂಧಿಸಿದ್ದ ವೇಳೆ 2018 ರಲ್ಲಿ 1 ಕೆ.ಜಿ. ಚಿನ್ನಾಭರಣ ರಿಕವರಿ ಮಾಡಿದ್ದರು. 16 ನೇ ವಯಸ್ಸಿಗೆ ಕಳ್ಳತನ ಶುರು ಮಾಡಿದ್ದ ಕಾರ್ತೀಕ್ ಸಾರಾಯಿ ಪಾಳ್ಯದ ಯುವತಿಯನ್ನ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ.