2ನೇ ಹೆಂಡ್ತಿ ಮಾತು ಕೇಳಿ ಮೊದಲ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿರಾಯ

ಅವರದ್ದು ಹತ್ತು ವರ್ಷದ ಸಂಸಾರ. ಮೂರು ಮಕ್ಕಳಿದ್ದೂ ಊರು ಬಿಟ್ಟು ಬೇರೆ ಊರಿಗೆ ಬಂದು ಜೀವನ ನಡೆಸುತ್ತಿದ್ದ. ಹೀಗಿದ್ದಾಗಲೇ ಒಂದೂವರೆ ವರ್ಷದ ಹಿಂದೆ ಈ ಸಂಸಾರದಲ್ಲಿ ಮತ್ತೋರ್ವ ಮಹಿಳೆಯ ಎಂಟ್ರಿಯಾಗಿದೆ. ಎರಡನೇ ಮದುವೆಯಾದ ಬಳಿಕ ಸಂಸದಾರದಲ್ಲಿ ಕಿರಿಕಿರಿ ಶುರುವಾಗಿತ್ತು. ಎರಡನೇವಳನ್ನ ಬಿಟ್ಟು ತನ್ನ ಬಳಿಯೇ ಇರು ಅಂದಿದ್ದಕ್ಕೆ ಪಾಪಿ ಗಂಡ ನೂರಾರು ಜನರ ಮುಂದೆ ಸಪ್ತಪರಿ ತುಳಿದ ಮೊದಲ ಹೆಂಡ್ತಿಯನ್ನೇ ಇಲ್ಲವಾಗಿಸಿದ್ದಾನೆ.

2ನೇ ಹೆಂಡ್ತಿ ಮಾತು ಕೇಳಿ ಮೊದಲ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿರಾಯ
ರಿಯಾಜ್​ ಪಠಾಣ್, ಶಮಾ
Edited By:

Updated on: Jan 16, 2025 | 7:12 PM

ಬೆಳಗಾವಿ, (ಜನವರಿ 16): 2ನೇ ಹೆಂಡತಿಯನ್ನು ಬಿಟ್ಟು ತನ್ನ ಬಳಿಯೇ ಇರುವಂತೆ ಪೀಡಿಸುತ್ತಿದ್ದ ಮೊದಲ ಹೆಂಡ್ತಿಯನ್ನೇ ಪತಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ. ಶಮಾ ರಿಯಾಜ್ ಪಠಾಣ್(25) ಕೊಲೆಯಾದ ಮೊದಲ ಹೆಂಡತಿ. ರಿಯಾಜ್ ಪಠಾಣ್(30) ಕೊಲೆ ಮಾಡಿದ ಪಾಪಿ ಗಂಡ. ಎರಡನೇ ಹೆಂಡತಿ ಫರ್ಜಾನಾ ಪಠಾಣ್ ಮಾತು ಕೇಳಿ ರಿಯಾಜ್, ಮೊದಲ ಪತ್ನಿ ಶಮಾ ಮಲಗಿದ್ದಾಗ ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾನೆ.

ಶಮಾ ಪಠಾಣ್ 27ವರ್ಷದ ಈಕೆ ಧಾರವಾಡದ ನಿವಾಸಿಯಾಗಿದ್ದು ಹತ್ತು ವರ್ಷದ ಹಿಂದೆ ಶಿಗ್ಗಾವಿಯ ರಿಯಾಜ್ ಪಠಾಣ್ ಎಂಬಾತನನ್ನ ಮದುವೆಯಾಗಿದ್ದಳು. ಇದಾದ ಬಳಿಕ ಗಂಡ ಹೆಂಡತಿ ಕೆಲಸಕ್ಕೆಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮಕ್ಕೆ ಬಂದು ನೆಲಸಿದ್ದರು. ರಿಯಾಜ್ ರಸ್ತೆ ಬದಿಯಲ್ಲಿ ಚೆಸ್ಮಾ, ವಾಚ್ ಮಾರುವ ವ್ಯಾಪಾರ ಮಾಡುತ್ತಿದ್ದರೆ, ಶಮಾ ಮಾತ್ರ ಮನೆಯಲ್ಲೇ ಇರುತ್ತಿದ್ದಳು. ಈ ದಂಪತಿಗೆ ಮೂರು ಮಕ್ಕಳು ಸಹ ಇದ್ದು, ಸಂಸಾರ ಸುಂದರವಾಗಿತ್ತು. ಆದ್ರೆ, ಈ ಸಂಸಾರದಲ್ಲಿ ಮತ್ತೋರ್ವ ಮಹಿಳೆ ಎಂಟ್ರಿ ಕೊಟ್ಟಿದ್ದಕ್ಕೆ ಈ ದುರಂತ ಸಂಭಿಸಿದೆ.

ಇದನ್ನೂ ಓದಿ: ಪ್ರೇಯಸಿ ಸಿಟ್ಟುಮಾಡಿಕೊಂಡು ಹೋಗಿದ್ದಕ್ಕೆ ಗೆಳೆಯನ ಮನೆಯಲ್ಲೇ ಪ್ರಿಯಕರ ದುರಂತ ಸಾವು

ಒಂದೂವರೆ ವರ್ಷದ ಹಿಂದೆ ಹೆಂಡತಿ ಇದ್ರೂ ರಿಯಾಜ್ ಮತ್ತೊಬ್ಬಳನ್ನ ಗುಟ್ಟಾಗಿ ಮದುವೆಯಾಗಿದ್ದ. ಎರಡನೇಯ ಮದುವೆಯಾಗಿದ್ದ ರಿಯಾಜ್ ಕೆಲ ತಿಂಗಳಿಂದ ಮನೆಗೆ ಬರುವುದನ್ನ ನಿಲ್ಲಿಸಿದ್ದ. ವಾರದಲ್ಲಿ ಎರಡ್ಮೂರು ದಿನ ಬರುತ್ತಿದ್ದ. ಇದರಿಂದ ಸಂಶಯ ಬಂದು ಕೇಳಿದಾಗ ತನಗೆ ಫರ್ಜಾನಾ ಎಂಬಾಕೆ ಜೊತೆಗೆ ಮತ್ತೊಂದು ಮದುವೆಯಾಗಿರುವುದಾಗಿ ಹೇಳಿದ್ದ. ಇದನ್ನ ಕೇಳಿ ಶಾಕ್ ಆಗಿದ್ದ ಶಮಾ ಮೂರು ಮಕ್ಕಳಿಗಾಗಿ ಅನಿವಾರ್ಯವಾಗಿ ರಿಯಾಜ್ ಜೊತೆಗೆ ಉಳಿದುಕೊಂಡಿದ್ದಳು. ಆದ್ರೆ, ಗಂಡ ರಿಯಾಜ್ ಮಾತ್ರ ಸರಿಯಾಗಿ ಮನೆಗೆ ಬರುವುದನ್ನೇ ನಿಲ್ಲಿಸಿದ್ದ. ಇದರಿಂದ ಕೆರಳಿದ್ದ ಶಮಾ ತನ್ನೊಟ್ಟಿಗೆ ಇರುವಂತೆ ಒತ್ತಾಯಿಸುತ್ತಿದ್ದಳು.

ಕೆಲ ದಿನಗಳ ಹಿಂದೆ ಎರಡನೇವಳನ್ನ ಬಿಟ್ಟು ಬಿಡುವಂತೆ ಹೇಳಿದ್ದಳು. ಇದರಿಂದ ಕೋಪಗೊಂಡು ಈ ವಿಚಾರವನ್ನ ಎರಡನೇ ಹೆಂಡ್ತಿ ಫರ್ಜಾನ ಮುಂದೆ ಹೇಳಿಕೊಂಡಿದ್ದ. ಆಗ 2ನೇ ಪತ್ನಿ, ಶಮಾಳನ್ನು ಸಾಯಿಸಿಬಿಡು ಎಂದು ಸಲಹೆ ಕೊಟ್ಟಿದ್ದಾಳೆ. 2ನೇ ಹೆಂಡ್ತಿ ಕೊಟ್ಟ ಪ್ಲ್ಯಾನ್​ನಂತೆ ರಾತ್ರಿ ಮನೆಗೆ ಬಂದು ಮಲಗಿದ್ದ ಶಮಾಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇನ್ನೂ ಹೆಂಡತಿಯನ್ನ ಕೊಲೆ ಮಾಡಿದ ಬಳಿಕ ಮನೆಯಲ್ಲಿದ್ದ ಮಗನೊಂದಿಗೆ ಎರಡನೇ ಹೆಂಡತಿ ಮನೆಗೆ ಹೋಗಿ ಬಂದಿದ್ದಾನೆ. ಬಳಿಕ ಆಕೆಯನ್ನ ಕರೆದುಕೊಂಡು ಅಲ್ಲಿಂದ ಊರು ಬಿಟ್ಟಿದ್ದಾನೆ.

ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮುರಗೋಡ ಠಾಣೆ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಇತ್ತ ಶವವನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಶಿಪ್ಟ್ ಮಾಡಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನೂ ಗಂಡ ಮಕ್ಕಳು ಇಲ್ಲದ ಕಾರಣ ಶಮಾಳ ಶವವನ್ನ ಊರಿಗೆ ತೆಗೆದುಕೊಂಡು ಹೋಗಲು ಆಗದೇ ಬೆಳಗಾವಿಯ ಸದಾಶಿವನ ನಗರದ ಸ್ಮಶಾನ ಭೂಮಿಯಲ್ಲೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಇತ್ತ ಗಂಡ ರಿಯಾಜ್ ಹಾಗೂ ಎರಡನೇ ಹೆಂಡತಿ ಫರ್ಜಾನಾ ಮೇಲೆ ಕೇಸ್ ದಾಖಲಾಗಿದ್ದು ಪರಾರಿಯಾಗಿರುವ ರಿಯಾಜ್ ಮತ್ತು ಫರ್ಜಾನಾಳಿಗೆ ಬಲೆ ಬೀಸಿದ್ದಾರೆ.

ಇನ್ನೂ ಮುರುಗೋಡ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪರಾರಿಯಾಗಿರುವ ಪಾಪಿ ಗಂಡನ ಹುಡುಕಾಟ ನಡೆಸುತ್ತಿದ್ದಾರೆ. ಗಂಡನ ನಂಬಿಕೊಂಡು ಊರು ಬಿಟ್ಟು ಬಂದು ಬದುಕು ಕಟ್ಟಿಕೊಳ್ತಿದ್ದಾಕೆ ಇದೀಗ ಇನ್ನೊಬ್ಬಳಿಗಾಗಿ ಗಂಡನಿಂದಲೇ ಕೊಲೆಯಾಗಿ ಹೋಗಿದ್ದಾಳೆ. ಮೂರು ಮಕ್ಕಳ ಪೈಕಿ ಆ ದಿನ ಅಜ್ಜಿ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದು ಪಾಪಿ ತಂದೆ ಅವರನ್ನೂ ನೋಡದೇ ಹೆಣ್ಣು ಮಕ್ಕಳು ಅನ್ನೋ ಕಾರಣಕ್ಕೆ ಅವರನ್ನ ಬಿಟ್ಟು ಬರೀ ಗಂಡು ಮಗನನ್ನ ಮಾತ್ರ ತನ್ನೊಟ್ಟಿಗೆ ಕರೆದುಕೊಂಡು ಹೋಗಿದ್ದಾನೆ. ಇದೀಗ ಎರಡು ಹೆಣ್ಣು ಮಕ್ಕಳು ಅನಾಥವಾಗಿವೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:10 pm, Thu, 16 January 25

Loading...
Unable to load recommendations.
Follow Us