
ಕೊಡಗು, ಮೇ 06: ಮಡಿಕೇರಿ (Madikeri) ತಾಲೂಕಿನ ಅಭ್ಯತ್ ಮಂಗಲ ಗ್ರಾಮದ ಬಳಿಯ ಕಾಫಿ ತೋಟದಲ್ಲಿ ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಕೊಳಂಬೆ ವಿನು ಬೆಳ್ಯಪ್ಪ (47) ಮೃತ ದುರ್ದೈವಿ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಳಂಬೆ ವಿನು ಬೆಳ್ಯಪ್ಪ ತಮ್ಮ ತೋಟದಲ್ಲಿ ಕೆಲಸಮಾಡುತ್ತಿದ್ದ ವೇಳೆ ಗುಂಡಿನ ದಾಳಿ ಮಾಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕಲಬುರಗಿ: ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಿಳೆಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಲಕ್ಕಮ್ಮ ದೊಡ್ಡಮನಿ (40) ಕೊಲೆಯಾದವರು. ಲಕ್ಕಮ್ಮ ದೊಡ್ಡಮನಿ ಮದುವೆಯಾಗದೆ ಒಂಟಿಯಾಗಿ ವಾಸ ಮಾಡುತ್ತಿದ್ದರು. ಮನೆ ಕಟ್ಟುವ ವಿಚಾರಕ್ಕೆ ಸಂಬಂಧಿಕರೇ ಲಕ್ಕಮ್ಮ ದೊಡ್ಡಮನಿ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಉಸಿರುಗಟ್ಟಿಸಿ ಪತಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ವಾಬಸಂದ್ರ ಬಳಿಯ ನಂಜಾರೆಡ್ಡಿ ಲೇಔಟ್ನಲ್ಲಿ ನಡೆದಿದೆ. ಪತ್ನಿ ಬರ್ಸಾ ಪ್ರಿಯದರ್ಶಿನಿ (21) ಮೃತ ದುರ್ದೈವಿ. ಸೋಹನ್ ಕುಮಾರ್ ಕೊಲೆ ಮಾಡಿದ ಆರೋಪಿ.
ದಂಪತಿ ಒಂದು ವಾರದ ಹಿಂದೆಯಷ್ಟೇ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಸೋಮವಾರ ಮಧ್ಯರಾತ್ರಿ ಮಗು ಅಳುತ್ತಿರುವ ಶಬ್ದ ಕೇಳುತ್ತಿತ್ತು. ಮಗುವಿನ ಅಳು ಶಬ್ದ ಕೇಳಿ ಮನೆ ಮಾಲೀಕನ ಪತ್ನಿ ಮನೆಯಿಂದ ಹೊರಬಂದಿದ್ದಾರೆ. ಮನೆ ಮಾಲೀಕನ ಪತ್ನಿಯನ್ನು ಕಂಡು ಆರೋಪಿ ಸೋಹನ್ ಕುಮಾರ್ ಪರಾರಿಯಾಗಿದ್ದಾನೆ. ಬಳಿಕ ಮನೆಯ ಕೊಠಡಿಗೆ ತೆರಳಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಾಮರಾಜನಗರ: 1 ಎಕರೆ 5 ಗುಂಟೆ ಜಮೀನಿನ ವಿಚಾರಕ್ಕೆ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ವಡ್ಗಲ್ಪುರ ಗ್ರಾಮದಲ್ಲಿ ನಡೆದಿದೆ. ಜಮೀನು ವಿಚಾರವಾಗಿ ನಾಗರಾಜ್ ಹಾಗೂ ಮಲ್ಲೇಶ್ ನಡುವೆ ವ್ಯಾಜ್ಯವಿತ್ತು. ವಿವಾದ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಸೋಮವಾರ ಗ್ರಾಮದಲ್ಲಿ ಬಸವ ಜಯಂತಿ ಆಚರಿಸುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರು ದೇವಾಲಯಕ್ಕೆ ತೆರಳಿದ್ದರು. ಈ ವೇಳೆ ಜಮೀನಿನಿಂದ ಮಲ್ಲೇಶ್ ಬರುವಾಗ ಆರೋಪಿಗಳು ಅಟ್ಯಾಕ್ ಮಾಡಿದ್ದಾರೆ. ಕ್ರಿಕೆಟ್ ಬ್ಯಾಟ್ನಿಂದ ಭೀಕರವಾಗಿ ಹೊಡೆದು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಆಡುವಾಗ ಸ್ನೇಹಿತರ ನಡುವೆ ಜಗಳ, ಓರ್ವನ ಕೊಲೆ
ಪ್ರಕರಣ ದಾಖಲಿಸಿಕೊಂಡ ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ನಾಗರಾಜ್, ದೊರೆಸ್ವಾಮಿ, ಮೀನಾಳ ಬಂಧಿತರು. ಆರೋಪಿಗಳನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:02 pm, Tue, 6 May 25