ಪತಿ ಜತೆ ಸಂಸಾರ ಮಾಡಲೊಪ್ಪದ ಮಗಳನ್ನೇ ಸುಟ್ಟುಹಾಕಿ ಕಾಣೆಯಾಗಿದ್ದಾಳೆಂದ ತಂದೆ

| Updated By: ರಮೇಶ್ ಬಿ. ಜವಳಗೇರಾ

Updated on: Dec 26, 2023 | 4:55 PM

ಮದುವೆಯಾದ ಮೇಲೆ ಗಂಡನೊಂದಿಗೆ ಸಂಸಾರ ಮಾಡಲೊಪ್ಪದ ಮಗಳನ್ನು ತಂದೆಯೇ ಬೆಂಕಿ ಹಚ್ಚಿ ಸುಟ್ಟಾಕಿರುವ ಅಮಾನವೀಯ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೊಲೆ ಮಾಡಿ ಬಳಿ ಕಾಣೆಯಾಗಿದ್ದಾಳೆಂದು ದೂರು ನೀಡಿದ್ದ ತಂದೆಯ ಕೃತ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಪತಿ ಜತೆ ಸಂಸಾರ ಮಾಡಲೊಪ್ಪದ ಮಗಳನ್ನೇ ಸುಟ್ಟುಹಾಕಿ ಕಾಣೆಯಾಗಿದ್ದಾಳೆಂದ ತಂದೆ
Follow us on

ಕೋಲಾರ, (ಡಿಸೆಂಬರ್, 26): ಮದುವೆಯಾದ ಮೇಲೆ ಗಂಡನೊಂದಿಗೆ ಸಂಸಾರ ಮಾಡಲೊಪ್ಪದ ಮಗಳನ್ನು(daughter) ತಂದೆಯೇ (father)ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ತಾಲೂಕು ಮುಸ್ಟೂರು ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ನಂತರ ಮಗಳು ಕಾಣೆಯಾಗಿದ್ದಾಳೆಂದು ತಂದೆಯೇ ಪೊಲೀಸರಿಗೆ ದೂರು ನೀಡಿದ್ದ. ಆದರೆ, ತನಿಖೆ ವೇಳೆ ತಂದೆಯೇ ಮಗಳನ್ನು ಕೊಲೆ ಮಾಡಿ ಸುಟ್ಟುಹಾಕಿರುವುದು ಬೆಳಕಿಗೆ ಬಂದಿದೆ. ಅರ್ಚಿತಾ ಕೊಲೆಯಾದ ಯುವತಿ. ರವಿ ಕೊಲೆ ಮಾಡಿದ ಆರೋಪಿ ತಂದೆ.

ಅರ್ಚಿತಾ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ತಂದೆ, ಬೇರೊಬ್ಬ ವ್ಯಕ್ತಿಯ ಜತೆ ಮದುವೆ ಮಾಡಿದ್ದ. ಆದರೆ, ಪತಿಯೊಂದಿಗೆ ಸಂಸಾರ ಮಾಡಲು ಮಗಳು ನಿರಾಕರಿಸಿದ್ದರಿಂದ ಆಕೆಯನ್ನು ಮೇ 21ರಂದು ಕೊಂದು ಸುಟ್ಟುಹಾಕಿದ್ದ. ಬಳಿಕ ಆತನೇ ಅಕ್ಟೋಬರ್‌ 17 ರಂದು ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ತಂದೆ ರವಿಯೇ ಅರ್ಚಿತಾಳನ್ನು ಕೊಂದು ಬಳಿಕ ಸುಟ್ಟುಹಾಕಿರುವುದು ಬಟಾಬಯಲಾಗಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಯುವಕನನ್ನು ಬರ್ಬರವಾಗಿ ಕೊಲೆಗೈದು, ಶವ ಸುಟ್ಟ ಆರೋಪಿಗಳ ಬಂಧನ

ಅರ್ಚಿತಾ ಅಪ್ರಾಪ್ತ ವಯಸ್ಸಿನ ಬಾಲಕಿಯಾಗಿದ್ದರೂ ಆಕೆಯ ತಂದೆ ದುಡ್ಡಿನ ಆಸೆಗೆ ಬಿದ್ದು 40 ವರ್ಷದ ವ್ಯಕ್ತಿ ಜತೆ ಮದುವೆ ಮಾಡಿದ್ದ ಎನ್ನಲಾಗಿದೆ. ವರನಿಂದ ಸುಮಾರು 13 ಲಕ್ಷ ರೂ. ಪಡೆದು ಮಗಳಿಗೆ ವಿವಾಹ ಮಾಡಿದ್ದ. ಆದರೆ, ಇನ್ನೂ ಚಿಕ್ಕ ವಯಸ್ಸು ಆಗಿದ್ದರಿಂದ ಮಗಳು ಇನ್ನೂ ಓದಬೇಕು, ಗಂಡನ ಜತೆ ಸಂಸಾರ ಮಾಡಲಾರೆ ಎಂದು ಖಡಾಖಂಡಿತವಾಗಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ತಂದೆ ರವಿ, ಆಕೆಯನ್ನು ಗಂಡನ ಮನೆಯಿಂದ ಕರೆದುಕೊಂಡು ಬಂದು ಆತ ಕೆಲಸ ಮಾಡುತ್ತಿದ್ದ ಶೆಡ್‌ನಲ್ಲಿ ಕೂಡಿಹಾಕಿದ್ದ. ನಂತರ ಅಳಿಯ ಮಣಿ ಜತೆ ಸೇರಿ ಬಾಲಕಿಯನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ನಂಗಲಿ ಪೊಲೀಸರು ಆರೋಪಿ ರವಿಯನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಎಫ್ಎಸ್ಎಲ್ ತಂಡ ಮುಸ್ಟೂರು ಗ್ರಾಮದಲ್ಲಿ ಕೊಲೆಯಾದ ಸ್ಥಳದಲ್ಲಿ ಮೃತಳ ಅವಶೇಷಗಳಿಗಾಗಿ ಹುಡುಕಾಟ ನಡೆಸಿದೆ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ