ಸರ್ಕಾರಿ ಕೆಲ್ಸದಾಸೆಗೆ ಗಂಡನನ್ನೇ ಕೊಂದಳಾ ಪತ್ನಿ? 4 ತಿಂಗ್ಳು ಬಳಿಕ ಸಮಾಧಿಯಿಂದ ಕಳೆಬರಹ ಹೊರಕ್ಕೆ

ಹಣ ಅಂದ್ರೆ ಹೆಣನೂ ಬಾಯಿ‌ ಬಿಡುತ್ತೆ ಎನ್ನುವ ಮಾತಿದೆ. ಆದ್ರೆ ಇಲ್ಲೊಬ್ಬ ಮಹಿಳೆ ಸರ್ಕಾರಿ ನೌಕರಿ ಆಸೆಗೆ ತಾಳಿ ಕಟ್ಟಿದ ಗಂಡನಿಗೆ ಚಟ್ಟ ಕಟ್ಟಿರುವ ಆರೋಪ ಕೇಳಿ ಬಂದಿದೆ. ಅಂತ್ಯಕ್ರಿಯೆ ನಡೆದ 4 ತಿಂಗಳ ಬಳಿಕ ಹೂತ್ತಿದ್ದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಸರ್ಕಾರಿ ಕೆಲ್ಸದಾಸೆಗೆ ಗಂಡನನ್ನೇ ಕೊಂದಳಾ ಪತ್ನಿ? ಆಗಿದ್ದೇನು? ನಾಲ್ಕು ತಿಂಗಳ ಬಳಿಕ ಯಾಕೆ ಬಂತು ಈ ಕೊಲೆ ಅನುಮಾನ?

ಸರ್ಕಾರಿ ಕೆಲ್ಸದಾಸೆಗೆ ಗಂಡನನ್ನೇ ಕೊಂದಳಾ ಪತ್ನಿ? 4 ತಿಂಗ್ಳು ಬಳಿಕ ಸಮಾಧಿಯಿಂದ ಕಳೆಬರಹ ಹೊರಕ್ಕೆ
Chitradruga Suspected Death
Updated By: ರಮೇಶ್ ಬಿ. ಜವಳಗೇರಾ

Updated on: Feb 04, 2025 | 10:46 PM

ಚಿತ್ರದುರ್ಗ, (ಫೆಬ್ರವರಿ 04): ವಿಚಿತ್ರ. ನಂಬುವುದಕ್ಕೆ ಕಷ್ಟ ಅನಿಸಿದರೂ ನೀವು ನಂಬಲೇಬೇಕು. ಸರ್ಕಾರಿ ಕೆಲಸದ ಆಸೆಗೆ ಪತ್ನಿಯೇ ಗಂಡನನ್ನ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ನಡೆದಿದೆ. ಈತನ ಹೆಸರು ಸುರೇಶ್. ಚಿತ್ರದುರ್ಗದ ನೆಹರು ನಗರ ನಿವಾಸಿ. ಈತನ ತಂದೆ ಸರ್ಕಾರಿ ಕೆಲಸದಲ್ಲಿದ್ದ. ತಂದೆ ಸಾವಿನ ಬಳಿಕ ಅನುಕಂಪದ ಆಧಾರದಲ್ಲಿ ಸುರೇಶ್​ಗೆ ತಂದೆಯ ಕೆಲಸ ಒಲಿದು ಬಂದಿತ್ತು. ಮಗ ನನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ತಾಯಿ ಆಸೆಯಿಂದ ಗಂಡನ ಕೆಲಸವನ್ನ 2ನೇ ಮಗ ಸುರೇಶ್​ಗೆ ಕೊಡಿಸಿದ್ದಳು. ಆದ್ರೆ, ಮೊಳಕಾಲ್ಮೂರು ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ SDA ಆಗಿದ್ದ ಸುರೇಶ್ ಪತ್ನಿಯ ಕಿರುಕುಳ ತಾಳದೆ ತನ್ನ ತಾಯಿ, ಸಹೋದರರ ಜೊತೆ ಮಾತು ಬಿಟ್ಟಿದ್ದೋನು, ಆಕ್ಟೋಬರ್ 8, 2024ರಂದು ಸಾವನ್ನಪ್ಪಿದ್ದಾನೆ.

ಹೇಳಿ ಕೇಳಿ ಸುರೇಶ್​ಗೆ ಜಾಂಡೀಸ್ ಇತ್ತು. ಗಂಡನ ಸಾವಿನ ವಿಷಯವನ್ನ ಆತನ ಮನೆಯವರಿಗೂ ತಿಳಿಸದೇ ಪತ್ನಿ ನಾಗರತ್ನ ಅಂತ್ಯಕ್ರಿಯೆ ಮುಗಿಸಿದ್ದಳು. ಈಗ ಮೃತನ ತಾಯಿ ಸರೋಜಮ್ಮ. ಸೊಸೆ ನಾಗರತ್ನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ನನ್ನ ಮಗನನ್ನ ಉಸಿರು ಗಟ್ಟಿಸಿಕೊಂದಿದ್ದಾಳೆ. ಜಾಂಡೀಸ್​ನಿಂದ ಸತ್ತ ಎಂದು ನಾಟಕವಾಡ್ತಿದ್ದಾಳೆ. ಅವನ ಕೆಲಸ ಇವಳಿಗೆ ಬರುತ್ತೆ ಎಂದು ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸ್ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅಂತ್ಯಕ್ರಿಯೆ ನಡೆದ 4 ತಿಂಗಳ ಬಳಿಕ ಪೊಲೀಸ್ರು ಇದೀಗ ಹೊಳಲ್ಕೆರೆ ರಸ್ತೆಯ‌ ರುದ್ರಭೂಮಿಯಲ್ಲಿ ಸುರೇಶ್ ಕಳೆಬರಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಜೋಡಿ ಬಾಳಲ್ಲಿ ಅನುಮಾನದ ಬಿರುಗಾಳಿ, ಪ್ರಿಯಕರನಿಗೆ ಹೇಳಿ ಗಂಡನ ಕೊಲ್ಲಿಸಿದ ಪತ್ನಿ!

ಇನ್ನು ಸುರೇಶನಿಗೆ ಹುಷಾರಿಲ್ಲ. ಹೀಗಾಗಿ ಆತನನ್ನು ಮಣಿಪಾಲ್ ಗೆ‌ ಆಸ್ಪತ್ರೆಗೆ ಕರೆದುಕೊಂಡು ಹೋಗೋದಾಗಿ ನಂಬಿಸಿ ನಮ್ಮನ್ನೆಲ್ಲ ವಂಚಿಸಿದ್ದಾರೆ. ಕೇವಲ ಸರ್ಕಾರಿ ಕೆಲಸದಾಸೆಗೆ ಅನ್ಯಾಯವಾಗಿ ಸುರೇಶನ ಜೀವ ತೆಗೆದಿದ್ದಾಳೆ. ಹೀಗಾಗಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಆರೋಪಿಗೆ ತಕ್ಕ ಶಿಕ್ಷೆ‌ವಿಧಿಸಬೇಕೆಂದು ಮೃತ ಸುರೇಶನ ಅತ್ತಿಗೆ ಒತ್ತಾಯಿಸಿದ್ದಾರೆ.

ಸದ್ಯ ಸಮಾಧಿಯಲ್ಲಿ ಕೊಳೆತಿದ್ದ ಕಳಬರಹವನ್ನು ಹೊರತೆಗೆದು ಪೋಸ್ಟ್ ಮರ್ಟಮ್ ನಡೆಸಲಾಗಿದ್ದು, ವೈದ್ಯರ ರಿಪೋರ್ಟ್ ಬಳಿಕ ಪ್ರಕರಣದ ಸತ್ಯಾಸತ್ಯ ಬಯಲಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ