ಬೆಳಗಾವಿಯಲ್ಲಿ ರಮೇಶ್​ ಜಾರಕಿಹೊಳಿ ಅತ್ಯಾಪ್ತ ಬಿಜೆಪಿ ಮುಖಂಡನಿಗೆ ಚಾಕು ಇರಿತ; ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಆಪ್ತರಿಂದ ಕೃತ್ಯ

| Updated By: Rakesh Nayak Manchi

Updated on: Dec 04, 2023 | 7:42 PM

ಬೆಳಗಾವಿಯಲ್ಲಿ ಬಿಜೆಪಿ ಮುಖಂಡರೂ ಆಗಿರುವ ರಮೇಶ್ ಜಾರಕಿಹೊಳಿ ಅವರ ಅತ್ಯಾಪ್ತ ಪೃಥ್ವಿ ಸಿಂಗ್ ಅವರಿಗೆ ಕಾಂಗ್ರೆಸ್ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ ಆಪ್ತರು ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯ ವಿಜಯನರಗದಲ್ಲಿ ನಡೆದಿದೆ. ಪೃಥ್ವಿ ಸಿಂಗ್​ ಅವರ ಕೈ ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿಯಲ್ಲಿ ರಮೇಶ್​ ಜಾರಕಿಹೊಳಿ ಅತ್ಯಾಪ್ತ ಬಿಜೆಪಿ ಮುಖಂಡನಿಗೆ ಚಾಕು ಇರಿತ;  ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಆಪ್ತರಿಂದ ಕೃತ್ಯ
ರಮೇಶ್​ ಜಾರಕಿಹೊಳಿ ಅತ್ಯಾಪ್ತ ಬಿಜೆಪಿ ಮುಖಂಡ ಪೃಥ್ವಿ ಸಿಂಗ್​ಗೆ ಚಾಕು ಇರಿತ (ಸಾಂದರ್ಭಿಕ ಚಿತ್ರ)
Follow us on

ಬೆಳಗಾವಿ, ಡಿ.4: ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರೂ ಆಗಿರುವ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಅತ್ಯಾಪ್ತ ಪೃಥ್ವಿ ಸಿಂಗ್ (55) ಅವರಿಗೆ ಕಾಂಗ್ರೆಸ್ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ (Channaraj Hattiholi) ಆಪ್ತರು ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಜಯನಗರದಲ್ಲಿ ನಡೆದಿದೆ. ಪೃಥ್ವಿ ಸಿಂಗ್​ ಅವರ ಕೈ ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನಾಗಿರುವ ಚನ್ನರಾಜ ಹಟ್ಟಿಹೊಳಿ ಅವರು ತಮ್ಮ ಆಪ್ತರಾಗಿರುವ ಸದ್ದಾಂ, ಸುಜಯ್ ಜಾಧವ್, ಚನ್ನರಾಜ ಅವರ ಬಾಡಿಗಾರ್ಡ್ ಅವರಿಂದ ​ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಪೃಥ್ವಿ ಜೊತೆ ಅವರ ಮನೆ ಸಮೀಪ ಚನ್ನರಾಜ್ ಆಪ್ತರು ಚರ್ಚೆ ನಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನ; ಪಿಎಸ್​ಐ ಹಗರಣದಲ್ಲಿ ಭಾಗಿಯಾಗಿರುವವರನ್ನು ಚೆನ್ನಾಗಿ ತದುಕಿ ಜೈಲಿಗೆ ಹಾಕಬೇಕು: ಬಸನಗೌಡ ಪಾಟೀಲ್ ಯತ್ನಾಳ್

ಆಸ್ಪತ್ರೆಗೆ ಬಿಜೆಪಿ ನಾಯಕರು ಭೇಟಿ

ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿದ ಎಂಎಲ್‌ಸಿ ಚುಲುವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಅವರು ಗಾಯಾಳು ಪೃಥ್ವಿ ಸಿಂಗ್ ಅವರ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾತನಾಡಿದ ನಾರಾಯಣಸ್ವಾಮಿ, ಪೃಥ್ವಿ ಸಿಂಗ್ ಹಲ್ಲೆ ಮಾಡಿದ್ದು ಯಾರು ಎಂದು ತನಿಖೆ ಮಾಡಿ. ಈಗಾಗಲೇ ದೂರು ನೀಡಲಾಗಿದೆ, ಡಿಸಿಪಿ, ಎಸಿಪಿ ಸ್ಥಳಕ್ಕೆ ಬಂದಿದ್ದಾರೆ. ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ವಿಚಾರ ತರಲಾಗಿದೆ ಎಂದರು.

ಎಂಎಲ್‌ಸಿ ಕೇಶವ ಪ್ರಸಾದ್ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಹಲ್ಲೆ ಆಗಿದೆ. ರಾಜಕೀಯ ಪಕ್ಷಗಳ ನಡವೆ ಅಭಿಪ್ರಾಯ ಸಹಜ. ರಾಜ್ಯದಲ್ಲಿ ಈಗಿರುವ ಸರ್ಕಾರ ವಿರೋಧಿಗಳನ್ನು ಟಾರ್ಗೆಟ್ ಮಾಡಲಗುತ್ತಿದೆ. ಬಿಜೆಪಿ ವೈಯಕ್ತಿಕವಾಗಿ ತೆಗೆದುಕೊಂಡು ಸದನ ಒಳಗೆ, ಹೊರಗೆ ಹೋರಾಟ ಮಾಡುತ್ತೇವೆ ಎಂದರು.

ಪೃಥ್ವಿ ಸಿಂಗ್ ನಿವಾಸಕ್ಕೆ ಪೊಲೀಸರ ಭೇಟಿ

ಪೃಥ್ವಿ ಸಿಂಗ್ ನಿವಾಸಕ್ಕೆ ಬೆಳಗಾವಿಯ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿದರು. ಆದರೂ ಕುಟುಂಬಸ್ಥರು ಮನೆಯಿಂದ ಹೊರಬಂದಿಲ್ಲ. ಸದ್ಯ ಗಾಯಾಳು ಪೃಥ್ವಿ ಸಿಂಗ್​ ಅವರಿಗೆ ಕೆಎಲ್‌ಇ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Mon, 4 December 23