ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಯತ್ನ: ಮಾವನ ಆಸ್ತಿ, ಹಣದಾಸೆಗೆ ಅಳಿಯ ಬಲಿ

ಜಮೀನು, ವಿಮೆ ಹಣದ ಆಸೆಗೆ ಸಹಚರರ ಜೊತೆ ಸೇರಿ ಮಾವನೊಬ್ಬ ಅಳಿಯನನ್ನೇ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮರ್ಡರ್​ ಮಾಡಿ ಅದನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಗ್ಯಾಂಗ್​ ಅಂದರ್​ ಆಗಿದ್ದು, ಪೊಲೀಸರ ತನಿಖೆ ವೇಳೆ ಆರೋಪಿಗಳ ಖತರ್ನಾಕ್​ ಐಡಿಯಾ ಬೆಳಕಿಗೆ ಬಂದಿದೆ.

ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಯತ್ನ: ಮಾವನ ಆಸ್ತಿ, ಹಣದಾಸೆಗೆ ಅಳಿಯ ಬಲಿ
ಮಾವನ ಆಸ್ತಿ, ಹಣದಾಸೆಗೆ ಅಳಿಯ ಬಲಿ

Updated on: Oct 10, 2025 | 3:28 PM

ಹಾವೇರಿ, ಅಕ್ಟೋಬರ್​ 10: ಮನೆ,ಜಮೀನು ಹಾಗೂ ವಿಮೆಯ ಹಣದ ‌ಆಸೆಗಾಗಿ ತನ್ನ ಗ್ಯಾಂಗ್​ ಜೊತೆ ಸೇರಿ ಮಾವನೇ ಅಳಿಯನನ್ನು ಕೊಲೆ ಮಾಡಿರುವ ಘಟನೆ ಹಾವೇರಿ (Haveri) ಜಿಲ್ಲೆ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಸವರಾಜ್ ಪುಟ್ಟಪ್ಪನವರ್ (38) ಎಂದು ಗುರುತಿಸಲಾಗಿದೆ. ತಂದೆ-ತಾಯಿ ಹಾಗೂ ಸಹೋದರರ ನಿಧನದ ಬಳಿಕ ಬಸವರಾಜ್ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದರು. ಕೋಟ್ಯಾಂತರ ರೂಪಾಯಿ ಆಸ್ತಿ ಹಾಗೂ ಅಪಘಾತ ವಿಮೆ ಇವರ ಹೆಸರಿನಲ್ಲಿ ಇತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಬಸವರಾಜ್ ಮದ್ಯ ವ್ಯಸನಿಯಾಗಿದ್ದು, ಇದನ್ನೇ ಮಾವ ಸಿದ್ದನಗೌಡ ಹಲಗೇರಿ ಬಂಡವಾಳ ಮಾಡಿಕೊಂಡಿದ್ದ. ಈತನ ಬಳಿಯಿದ್ದ 8 ಎಕರೆ ಜಮೀನು, ಮನೆ ಮೇಲೆ ಕಣ್ಣುಹಾಕಿದ್ದ. ಆದರೆ ಬಸವರಾಜ್ ಸಹೋದರ ಸಂಬಂಧಿಕರು ಯಾವುದೇ ಆಸ್ತಿ ಮಾರಾಟ ಮಾಡದಂತೆ ಕೋರ್ಟ್​ ನಿಂದ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಆಸ್ತಿ ಸಿಗಲ್ಲ‌ ಎಂದು ತಿಳಿದಿದ್ದ ಸಿದ್ದನಗೌಡ, ತನ್ನ ಸಹಚರರ ಜೊತೆ ಸೇರಿ ರಾಘವೇಂದ್ರ ಎಂಬವರ ಬಳಿ ಬಸವರಾಜ್ ಹೆಸರಲ್ಲಿ 50 ಸಾವಿರ ರೂಪಾಯಿ ಅಪಘಾತ ವಿಮೆ ಮಾಡಿಸಿದ್ದ. ಆ ಬಳಿಕ ಬಸವರಾಜ್​ ರನ್ನು ಮನೆಯಿಂದ ಕರೆದುಕೊಂಡು ಹೋಗಿ ಕಂಟಪೂರ್ತಿ ಕುಡಿಸಿರುವ ಗ್ಯಾಂಗ್​, ಬೈಕ್​ ನಲ್ಲಿ ಊರಿಗೆ ಹೋಗು ಎಂದು ಕಳುಹಿಸಿತ್ತು. ಆತ ಹೊರಡುತ್ತಿದ್ದಂತೆ ಹಿಂದೆ ಕಾರಿನಲ್ಲಿ ಹೋಗಿ ಬೈಕ್​ ಗೆ ಡಿಕ್ಕಿ ಹೊಡೆದಿದ್ದು, ಘಟನೆಯನ್ನ ಅಪಘಾತವೆಂದು ಬಿಂಬಿಸಿತ್ತು.

ಇದನ್ನೂ ಓದಿ: 5 ಕೋಟಿ ವಿಮೆ ಹಣಕ್ಕಾಗಿ ಓರ್ವನ ಮರ್ಡರ್​, ಖತರ್ನಾಕ್​ ಜಾಲ ಭೇದಿಸಿದ ಖಾಕಿ

ಸೆಪ್ಟೆಂಬರ್ 27ರಂದು ರಟ್ಟಿಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಘಟನೆ ನಡೆದಿದ್ದು, ಅಪಘಾತ ನೋಡಿದವರು ಇದು ಕೊಲೆ ಆಗಿರಬಹುದು ಎಂದು ಅನುಮಾನಿಸಿದ್ದರು. ಘಟನೆ ಬಗ್ಗೆ ತನಿಖೆಗೆ ಇಳಿದ ಪೊಲೀಸರಿಗೆ ಶಾಕ್​ ಆಗಿದ್ದು, ಆಸ್ತಿ ಮತ್ತು ಹಣದ ಆಸೆಗಾಗಿ ಮಾವನೇ ಮಾಡಿರುವ ಕೊಲೆ ಇದು ಎಂಬುದು ಗೊತ್ತಾಗಿದೆ. ಘಟನೆ ಸಂಬಂಧ ಸಿದ್ದನಗೌಡ ಹಲಗೇರಿ ಸೇರಿ ರಾಘವೇಂದ್ರ ಮಾಳಗೊಂಡರ, ಪ್ರವೀಣ ಮತ್ತು ಲೋಕೇಶ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.