RTI activist: ಆತ ಗ್ರಾಮದ ಅವ್ಯವಹಾರಗಳನ್ನ ಪ್ರಶ್ನೆ ಮಾಡಿದ್ದ, ಸಂಬಂಧಿ ಎಂಬುದನ್ನೂ ನೋಡದೆ ಹತ್ಯೆ ಮಾಡಿದರು -ಪೊಲೀಸರು ಆರೋಪಿಗಳ ಬಂಧಿಸಿದರು

| Updated By: ಸಾಧು ಶ್ರೀನಾಥ್​

Updated on: Dec 27, 2022 | 1:38 PM

RTI activist: ಭೀಕರವಾಗಿ ಹತ್ಯೆಗೀಡಾದ ಮೂರ್ತಿ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ. ಜೊತೆಗೆ ಆರ್ ಟಿ ಐ ಕಾರ್ಯಕರ್ತನಾಗಿದ್ದ. ಆತ ಗ್ರಾಮದಲ್ಲಿ ಹಲವು ಕಳಪೆ ಕಾಮಗಾರಿ, ಅವ್ಯವಹಾರಗಳ ಬಗ್ಗೆ ಪ್ರಶ್ನೆ ಮಾಡಿದ್ದ.

RTI activist: ಆತ ಗ್ರಾಮದ ಅವ್ಯವಹಾರಗಳನ್ನ ಪ್ರಶ್ನೆ ಮಾಡಿದ್ದ, ಸಂಬಂಧಿ ಎಂಬುದನ್ನೂ ನೋಡದೆ ಹತ್ಯೆ ಮಾಡಿದರು -ಪೊಲೀಸರು ಆರೋಪಿಗಳ ಬಂಧಿಸಿದರು
ಆತ ಗ್ರಾಮದ ಅವ್ಯವಹಾರಗಳನ್ನ ಪ್ರಶ್ನೆ ಮಾಡಿದ್ದ, ಸಂಬಂಧಿ ಎಂಬುದನ್ನೂ ನೋಡದೆ ಹತ್ಯೆ ಮಾಡಿದರು
Follow us on

ಆತ ಒಬ್ಬ ರೈತ. ತನಗಿದ್ದ ಅಲ್ಪಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ. ಜೊತೆಗೆ ಆರ್ ಟಿ ಐ ಕಾರ್ಯಕರ್ತನಾಗಿದ್ದ (RTI activist) ಆತ ಗ್ರಾಮದ ಹಲವು ಅವ್ಯವಹಾರಗಳನ್ನ (Corruption) ಪ್ರಶ್ನೆ ಮಾಡಿದ್ದ. ಅಷ್ಟೇ ಅಲ್ಲ, ಹಲವು ಅಕ್ರಮಗಳನ್ನ ಕೂಡ ಬಯಲಿಗೆ ಎಳೆದಿದ್ದ. ಜೊತೆಗೆ ಜಮೀನು ವಿಚಾರವಾಗಿ ಪಕ್ಕದ ಮನೆಯ ಸಂಬಂಧಿ ಜೊತೆಗೆ ಗಲಾಟೆಗಳು ಕೂಡ ನಡೆಯುತ್ತಿತ್ತು. ಇದೇ ವಿಚಾರಗಳು ಆತನ ಬಾಳಿಗೆ ಕೊಳ್ಳಿಯಾಗಿದ್ದು, ಸಂಬಂಧಿಕರಿಂದಲೇ ಆತನ ಬರ್ಬರವಾಗಿ ಹತ್ಯೆಯಾಗಿದೆ (Murder).

ಹಲಸಿನಮರದದೊಡ್ಡಿ (Halasina Marada Doddi) -ರಾಮನಗರ ಜಿಲ್ಲೆ ಕನಕಪುರ (Kanakapur) ತಾಲೂಕಿನ ಗ್ರಾಮ. ಈ ಪುಟ್ಟ ಗ್ರಾಮವು ಸುತ್ತಮುತ್ತ ಹಚ್ಚಹಸಿರು, ಬೆಟ್ಟಗುಡ್ಡಗಳಿಂದ ಆವೃತ್ತವಾಗಿದೆ. ಗ್ರಾಮದ ಬಹುತೇಕರು ವ್ಯವಸಾಯ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಮತ್ತಷ್ಟು ಜನರು ರಾಜಕೀಯವನ್ನೇ ಜೀವಾಳ ಮಾಡಿಕೊಂಡು ಫುಡಾರಿ ರಾಜಕಾರಣ ಸಹಾ ಮಾಡುತ್ತಿದ್ದಾರೆ. ಇಂತಹ ಗ್ರಾಮದ ಜನ ಅವತ್ತು ಅಕ್ಷರಶಹಃ ಬೆಚ್ಚಿ ಬಿದ್ದಿದ್ದರು. ಗ್ರಾಮದ ಹೊರವಲಯದ ಅದೊಂದು ಸ್ಥಳಕ್ಕೆ ಗ್ರಾಮಸ್ಥರು ಓಡೋಡಿ ಬಂದಿದ್ರು. ಕುಟುಂಬಸ್ಥರ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅದೇ ಗ್ರಾಮದ ಮೂರ್ತಿ(31) ಎಂಬ ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಅಂದಹಾಗೆ ಡಿಸೆಂಬರ್ 22ರ ಸಂಜೆ ತನ್ನ ಜಮೀನಿನಲ್ಲಿ ಕುರಿ ಮೇಯಿಸಲು ಹೋಗಿ ವಾಪಾಸ್ ಬರುತ್ತಿದ್ದ ಮೂರ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತಲೆಯ ಮೇಲೆ ದೊಡ್ಡದಾದ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಮೂರ್ತಿಯ ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಓಡೊಡಿ ಬಂದಿದ್ದರು. ಜೊತೆಗೆ ಸಾತನೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅಷ್ಟೇ ಅಲ್ಲದೆ ಪೊಲೀಸ್ ಠಾಣೆಗೆ ಆ ವ್ಯಕ್ತಿ ತಾನೇ ಹತ್ಯೆ ಮಾಡಿ, ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲು ಸಹ ಹೋಗಿದ್ದ.

ಹೌದು ಹಲಸಿನಮರದದೊಡ್ಡಿ ಗ್ರಾಮದಲ್ಲಿನ ಜಮೀನು ವಿವಾದ, ರಾಜಕೀಯ ಪ್ರತಿಷ್ಠೆ, ಕಾಮಗಾರಿ ಗಲಾಟೆ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಅದು ವಿಕೋಪಕ್ಕೆ ತಿರುಗಿ ಮೂರ್ತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಅಂದಹಾಗೆ ಮೂರ್ತಿ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ. ಜೊತೆಗೆ ಆರ್ ಟಿ ಐ ಕಾರ್ಯಕರ್ತನಾಗಿದ್ದ. ಆತ ಗ್ರಾಮದಲ್ಲಿ ಹಲವು ಕಳಪೆ ಕಾಮಗಾರಿ, ಅವ್ಯವಹಾರಗಳ ಬಗ್ಗೆ ಪ್ರಶ್ನೆ ಮಾಡಿದ್ದ.

ಈ ಹಿಂದೆ ನರೇಗಾ ಕಾಮಗಾರಿ ಅವ್ಯವಹಾರದ ಬಗ್ಗೆ ಜಿಲ್ಲಾ ಪಂಚಾಯತ್ ನ ಒಂಬುಡ್ಸ್ ಮನ್ ನಲ್ಲಿ ಕೂಡ ದೂರು ದಾಖಲು ಮಾಡಿದ್ದ. ಇದೇ ವಿಚಾರಕ್ಕೆ ಅಧಿಕಾರಿಗಳು ಪರಿಶೀಲನೆಗೆ ಬಂದಂತಹ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಗೋಪಾಲ್ ಹಾಗೂ ಆತನ ಬೆಂಬಲಿಗರು ಮೂರ್ತಿ ಮೇಲೆ ಹಲ್ಲೆ ಸಹಾ ಮಾಡಿದ್ರು. ಈ ವಿಚಾರವಾಗಿ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ಕೂಡ ದಾಖಲಾಗಿತ್ತು.

Also Read:

ಎಲ್ಲ ಪೋಷಕರು-ಅಧಿಕಾರಿಗಳು ಈ ಲೇಖನ ಓದಬೇಕು: ಇಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಲಿ, ನತದೃಷ್ಟ ಮಾತಾಪಿತೃಗಳ ಸಂಖ್ಯೆ ಕಡಿಮೆಯಾಗಲಿ

ಇನ್ನು ಮೃತ ಮೂರ್ತಿ ಮನೆಯ ಸಮೀಪವೇ, ಶ್ರೀನಿವಾಸ್ ಎಂಬಾತ ವಾಸವಿದ್ದ. ಶ್ರೀನಿವಾಸ್ ಅವರ ಅಕ್ಕನ ಮಗಳನ್ನೇ ಮೂರ್ತಿ ಮದುವೆಯಾಗಿದ್ದಾನೆ. ಆದರೆ ಗ್ರಾಮದಲ್ಲಿನ ಕೆಲ ರಾಜಕೀಯ ವಿಚಾರಗಳು, ಕೆಲ ಕಾಮಗಾರಿಗಳ ಅವ್ಯವಹಾರದ ಬಗ್ಗೆ ಮೂರ್ತಿ ಪ್ರಶ್ನೆ ಮಾಡಿದ್ದ. ಅಲ್ಲದೆ ಕಾಮಗಾರಿಯ ಅವ್ಯಹಾರದ ಬಗ್ಗೆ ಆರ್ ಟಿಐ ಹಾಕಿದವರಿಗೆ ಬೆಂಬಲ ನೀಡುತ್ತಾನೆ ಎಂಬ ವಿಚಾರಕ್ಕೆ ಮೂರ್ತಿ ಹಾಗೂ ಶ್ರೀನಿವಾಸ್ ಎಂಬುವವರಿಗೆ ಕಳೆದ ಹಲವು ವರ್ಷಗಳಿಂದ ಆಗುತ್ತಿರಲಿಲ್ಲ.

ಆರು ತಿಂಗಳಿಂದ ಇಬ್ಬರ ನಡುವೆ ಗಲಾಟೆಗಳು ನಡೆಯುತ್ತಿದ್ದವು. ಈ ಸಂಬಂಧ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿವೆ. ಜೊತೆಗೆ ಶ್ರೀನಿವಾಸ್ ಎಂಬಾತ ತನಗೆ ಇದ್ದ ಜಮೀನನ್ನ ಬೆಂಗಳೂರು ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದ. ಆ ಜಮೀನಿನಲ್ಲಿ ಮೂರ್ತಿ ಕುರಿಗಳನ್ನ ಮೇಯಿಸುತ್ತಿದ್ದ. ಈ ವಿಚಾರಕ್ಕೂ ಕೂಡ ಗಲಾಟೆ ನಡೆದಿತ್ತು. ಅದೇ ರೀತಿ ಡಿಸೆಂಬರ್ 23ರಂದು ಮೂರ್ತಿ ಅವರ ಜಮೀನಿನಲ್ಲಿ ಶ್ರೀನಿವಾಸ್ ಹಾಗೂ ಆತನ ಮಗ ಚಂದನ್ ಟ್ರಾಕ್ಟರ್ ಓಡಿಸಿಕೊಂಡು ಬಂದಿದ್ದರು.

ಈ ವಿಚಾರಕ್ಕೂ ಕೂಡ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ಗ್ರಾಮದ ಹೊರವಲಯದಲ್ಲಿ ಮೂರ್ತಿ ಕುರಿ ಮೇಯಿಸಲು ಹೋಗಿದ್ದ ವೇಳೆ ಮೂರ್ತಿ ಹಾಗೂ ಶ್ರೀನಿವಾಸ್ ನ ಮಗ ಚಂದನ್ ಅಲಿಯಾಸ್ ಕರಿಯಾ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮೂರ್ತಿಯ ತಲೆಗೆ ಚಂದನ್ ಕಲ್ಲಿನಿಂದ ಹೊಡೆದಿದ್ದಾನೆ. ಆತ ಕೆಳಗೆ ಬೀಳುತ್ತಿದ್ದಂತೆ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿ ನಂತರ ತಾನೇ ಠಾಣೆಗೆ ಹೋಗಿ ಮೂರ್ತಿ ಮೇಲೆ ದೂರು ನೀಡಲು ಮುಂದಾಗಿದ್ದ.

ಅಂದಹಾಗೆ ಮೃತ ಮೂರ್ತಿ ತನ್ನ ಪಾಡಿಗೆ ತಾನು ವ್ಯವಸಾಯ ಮಾಡಿಕೊಂಡು ಗ್ರಾಮದಲ್ಲಿ ಇದ್ದ. ಆದರೆ ಗ್ರಾಮದಲ್ಲಿ ಕೆಲವೊಂದು ನರೇಗಾ ಕಾಮಗಾರಿಗಳಲ್ಲಿ ಬಹಳಷ್ಟು ಅವ್ಯವಹಾರ ನಡೆದಿತ್ತು. ಇದನ್ನ ಇದೇ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಗೋಪಾಲ್ ಎಂಬಾತ ಮಾಡಿದ್ದನಂತೆ. ಗೋಪಾಲ್ ಆರೋಪಿ ಶ್ರೀನಿವಾಸ್ ಗೆ ಸಂಬಂಧಿ. ಗೋಪಾಲ್ ಮಾಡಿದ್ದ ಕೆಲವಷ್ಟು ಅವ್ಯವಹಾರಗಳ ಬಗ್ಗೆ ಮೂರ್ತಿ ಪ್ರಶ್ನೆ ಮಾಡಿದ್ದ.

ಅಲ್ಲದೆ ಆರ್ ಟಿಐ ಹಾಕಿದ್ದ ವ್ಯಕ್ತಿಗೆ ಮೂರ್ತಿ ಸಾಕಷ್ಟು ಬೆಂಬಲ ನೀಡುತ್ತಿದ್ದ. ಹೀಗಾಗಿ ಶ್ರೀನಿವಾಸ್ ಗೆ ಮೂರ್ತಿ ಮೇಲೆ ಸಾಕಷ್ಟು ವಿರೋಧವಿತ್ತು. ಗ್ರಾಮದಲ್ಲಿನ ಕೆಲ ಪುಡಿ ರಾಜಕೀಯ ವಿಚಾರಕ್ಕೂ ಆಗಾಗ ಗಲಾಟೆ ನಡೆಯುತ್ತಿತ್ತು. ಅದೇ ರೀತಿ ಮೊನ್ನೆ ತನ್ನ ಜಮೀನಿನ ಮೇಲೆ ಶ್ರೀನಿವಾಸ್ ಚಾಲನೆ ಮಾಡಿಕೊಂಡು ಬಂದಿದ್ದ ಎಂಬ ವಿಚಾರಕ್ಕೂ ಮಾತಿನ ಚಕಮಕಿ ನಡೆದಿತ್ತು. ಅದು ಮೂರ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ.

ಇನ್ನು ಶ್ರೀನಿವಾಸ್ ಗೆ ಗ್ರಾಪಂ ಸದಸ್ಯ ಗೋಪಾಲ್ ಸಾಕಷ್ಟು ಬೆಂಬಲ ನೀಡುತ್ತಿದ್ದ. ಗೋಪಾಲ್ ಕುಮ್ಮಕಿನಿಂದ ಮೂರ್ತಿ ಹತ್ಯೆ ನಡೆದಿದೆ. ಪ್ರಕರಣ ಸಂಬಂಧ ಗ್ರಾಪಂ ಸದಸ್ಯ ಗೋಪಾಲ್, ಚಂದನ್, ಚೇತನ್, ಶ್ರೀನಿವಾಸ್, ಕಿರಣ್, ವೆಂಕಟೇಶ್, ತಿಮ್ಮೇಶ್, ಪ್ರತಾಪ್, ಗುರು ಪ್ರಸಾದ್ ಎಂಬುವವರ ಮೇಲೆ ದೂರು ದಾಖಲಾಗಿದ್ದು, ಕೊಲೆ ಮಾಡಿದ ಚಂದನ್ ಹಾಗೂ ಆತನಿಗೆ ಸಹಕರಿಸಿದ ಚಂದನ್ ತಂದೆ ಶ್ರೀನಿವಾಸ್ ನನ್ನ ಸಾತನೂರು ಠಾಣೆ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಇನ್ನು ಗ್ರಾಪಂ ಸದಸ್ಯ ಗೋಪಾಲ್ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕೊಲೆ ಪ್ರಕರಣದ ಸಂಬಂಧ ಗ್ರಾಮವು ಬೂದಿಮುಚ್ಚಿದ ಕೆಂಡದಂತೆ ಇದೆ. ಒಟ್ಟಾರೆ ಕ್ಷುಲ್ಲಕ ಕಾರಣಗಳಿಗೆ ಆರಂಭವಾದ ವೈಮನಸ್ಸು ಹೆಮ್ಮರವಾಗಿ ಬೆಳೆದು ಎರಡು ಕುಟುಂಬಗಳ ನಡುವೆ ಹಗೆತನಕ್ಕೆ ಕಾರಣವಾಗಿ ಒಬ್ಬ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Tue, 27 December 22