ಕಾಲೇಜಿನೊಳಗೇ ಯುವತಿಯನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ಪಂಜಾಬ್​​ನ ಕಾನೂನು ವಿದ್ಯಾರ್ಥಿ

ಪಂಜಾಬ್​​ನಲ್ಲೊಂದು ಶಾಕಿಂಗ್ ಘಟನೆ ನಡೆದಿದೆ. ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಯುವತಿಯೊಬ್ಬಳ ಮೇಲೆ ಗುಂಡು ಹಾರಿಸಿದ ಅದೇ ಕಾಲೇಜಿನ ಕಾನೂನು ವಿದ್ಯಾರ್ಥಿ ಆಕೆ ಸತ್ತ ಬಳಿಕ ತನಗೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಲೇಜಿನ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಆ ಹುಡುಗ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ, ಒಂದೆರಡು ಬಾರಿ ಆತ ಮನೆಗೆ ಕೂಡ ಬಂದು ಬೆದರಿಕೆ ಹಾಕಿದ್ದ ಎಂದು ಮೃತ ಯುವತಿಯ ಪೋಷಕರು ಆರೋಪಿಸಿದ್ದಾರೆ.

ಕಾಲೇಜಿನೊಳಗೇ ಯುವತಿಯನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ಪಂಜಾಬ್​​ನ ಕಾನೂನು ವಿದ್ಯಾರ್ಥಿ
Sandeep Kaur
Image Credit source: TV9

Updated on: Feb 09, 2026 | 3:14 PM

ನವದೆಹಲಿ, ಫೆಬ್ರವರಿ 9: ಪಂಜಾಬ್​​ನ ತರಣ್ ತರಣ್ ಕಾನೂನು ಕಾಲೇಜಿನ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನಲ್ಲಿ ಗುಂಡಿಕ್ಕಿ (Shoot) ಕೊಲ್ಲಲಾಗಿದೆ. ಆಕೆಗೆ ಗುಂಡು ಹಾರಿಸಿದ ಹುಡುಗ ನಂತರ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವತಿಯನ್ನು 20 ವರ್ಷದ ಸಂದೀಪ್ ಕೌರ್ ಎಂದು ಗುರುತಿಸಲಾಗಿದೆ. ಶೂಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಹುಡುಗನನ್ನು ಪ್ರಿನ್ಸ್ ರಾಜ್ ಎಂದು ಗುರುತಿಸಲಾಗಿದೆ. ಈ ಘಟನೆ ಉಸ್ಮಾನ್ ಕಾನೂನು ಕಾಲೇಜಿನಲ್ಲಿ ನಡೆದಿದೆ.

ಈ ಘಟನೆಯ ನಂತರ ಪೊಲೀಸರು ಇಡೀ ಕಾಲೇಜನ್ನು ಸೀಲ್ ಮಾಡಿದ್ದಾರೆ. ಪೊಲೀಸರು ಕಾಲೇಜಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಸಂದೀಪ್ ಕೌರ್ ತನ್ನ ಗೆಳತಿಯೊಂದಿಗೆ ಬೆಂಚ್ ಮೇಲೆ ಕುಳಿತಿರುವುದು ಕಂಡುಬರುತ್ತದೆ. ಆಗ ಅಲ್ಲಿಗೆ ಬಂದ ಹುಡುಗ ಮೊದಲು ಆಕೆಗೆ ಗುಂಡು ಹಾರಿಸುತ್ತಾನೆ. ಇದರಿಂದ ಆಕೆ ಕಿರುಚುತ್ತಾ ಬೆಂಚ್ ಮೇಲೆ ಬೀಳುತ್ತಾಳೆ. ಇದಾದ ನಂತರ, ಆ ಹುಡುಗ ಸ್ಥಳದಲ್ಲೇ ತನಗೆ ತಾನು ಗುಂಡು ಹಾರಿಸಿಕೊಂಡು ನೆಲಕ್ಕೆ ಬೀಳುತ್ತಾನೆ.

ಇದನ್ನೂ ಓದಿ: ಹಸಿವಿನಿಂದ ಅಳುತ್ತಿದ್ದ 5 ವರ್ಷದ ಮಗಳಿಗೆ ಹೆಂಡ ಕುಡಿಸಿ, ಕತ್ತು ಹಿಸುಕಿ ಕೊಂದ ಕುಡುಕ!

ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಮೃತ ಯುವತಿಯ ಪೋಷಕರು, ನಮ್ಮ ಮಗಳು ಇಂದು ಎಂದಿನಂತೆ ಕಾಲೇಜಿಗೆ ಬಂದಿದ್ದಳು. ಇಂದು, ಒಬ್ಬ ಹುಡುಗ ತರಗತಿಯಲ್ಲಿ ಅವಳಿಗೆ ಗುಂಡು ಹಾರಿಸಿದ. ನಂತರ ಹುಡುಗ ತನಗೆ ತಾನೇ ಗುಂಡು ಹಾರಿಸಿಕೊಂಡ. ಆ ಹುಡುಗ ನಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ. ಅವನು ನಮ್ಮ ಮನೆಗೆ ಕೂಡ ಬಂದಿದ್ದ. ಆತ ಮನೆಗೆ ಬಂದು ನಮ್ಮ ಮಗಳನ್ನು ಬೆದರಿಸಿದ್ದ ಎಂದು ಆರೋಪಿಸಿದ್ದಾರೆ.

ಮೃತ ಯುವತಿಯ ಕುಟುಂಬದ ಸದಸ್ಯರು ಕಾಲೇಜಿನ ಭದ್ರತೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗನ್ ತೆಗೆದುಕೊಂಡು ಬರುತ್ತಿದ್ದರೂ ಯಾಕೆ ಯಾರೂ ಅದನ್ನು ಪರಿಶೀಲಿಸಿಲ್ಲ ಎಂದು ಅವರು ಕೇಳಿದ್ದಾರೆ. ಅವರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್

ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಡಿಎಸ್ಪಿ ಜಗ್ಬೀರ್ ಸಿಂಗ್, ಯುವಕ ಮತ್ತು ಯುವತಿ ಇಬ್ಬರೂ ಮೊದಲ ವರ್ಷದ ಕಾನೂನು ವಿದ್ಯಾರ್ಥಿಗಳಾಗಿದ್ದರು. ಇಂದು ತರಗತಿ ಪ್ರಾರಂಭವಾದಾಗ ಯುವಕ ಪಿಸ್ತೂಲು ತೆಗೆದು ಸಂದೀಪ್ ಕೌರ್ ಮೇಲೆ ಗುಂಡು ಹಾರಿಸಿದ್ದಾನೆ. ಇದಾದ ನಂತರ, ಆತ ಕೂಡ ಗುಂಡು ಹಾರಿಸಿಕೊಂಡಿದ್ದಾನೆ. ಈ ಘಟನೆಯ ಹಿಂದಿನ ಕಾರಣಗಳನ್ನು ತನಿಖೆ ಮಾಡಲಾಗುತ್ತಿದೆ. ಆ ಹುಡುಗ ಪಿಸ್ತೂಲ್ ಅನ್ನು ಎಲ್ಲಿಂದ ತಂದಿದ್ದಾನೆಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ