ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರಿಯಕರನ ಸಮಾಧಿ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಕ್ರಿಯೆ

ರಸ್ತೆ ಅಪಘಾತದಲ್ಲಿ ತನ್ನ ಪ್ರಿಯಕರ ಸಾವನ್ನಪ್ಪಿದ ಆಘಾತದಲ್ಲೇ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಸಾವಿನಲ್ಲೂ ಒಂದಾಗಿದ್ದಾಳೆ. ತುಮಕೂರಿನಲ್ಲಿ ಇಂಥ ಮನಕಲಕುವ ಘಟನೆ ನಡೆದಿದೆ.

ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರಿಯಕರನ ಸಮಾಧಿ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಕ್ರಿಯೆ
ಸಾಂದರ್ಭಿಕ ಚಿತ್ರ
Edited By: Rakesh Nayak Manchi

Updated on: May 15, 2022 | 5:22 PM

ತುಮಕೂರು: ಜಗತ್ತಿನಲ್ಲಿ ಎಂಥೆಂಥಾ ಪ್ರೇಮಿಗಳನ್ನು ನೋಡಿದ್ದೇವೆ. ಒಂದಷ್ಟು ಮಂದಿ ಅನ್ಯೋನ್ಯವಾಗಿದ್ದರೆ, ಇನ್ನೊಂದಷ್ಟು ಮಂದಿ ವಿಧಿಯಾಟಕ್ಕೆ ಬೇರಾಗುತ್ತಾರೆ. ಇಂಥ ವಿಧಿಯಾಟಕ್ಕೆ ಬಲಿಯಾಗಿದ್ದ ಪ್ರಿಯಕರನ ನೆನಪಿನಲ್ಲಿದ್ದ ಯುವತಿಯೊಬ್ಬಳು ಆತ್ಮಹತ್ಯೆ(Suicide) ಮಾಡಿಕೊಂಡು ಸಾವಿನಲ್ಲೂ ಒಂದಾಗಿದ್ದಾಳೆ. ಹೌದು, ಈ ಘಟನೆ ತುಮಕೂರು ತಾಲೂಕಿನಲ್ಲಿ ನಡೆದಿದ್ದು, ಸದ್ಯ ಯುವತಿಯ ಮೃತದೇಹ(Dead body)ವನ್ನು ಪ್ರಿಯಕರನ ಸಮಾಧಿ(grave) ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ತುಮಕೂರಿನ ಮಸ್ಕಲ್ ಗ್ರಾಮದ ಧನುಷ್ ಎಂಬ 23 ವರ್ಷದ ಯುವಕ ಮತ್ತು 22 ವರ್ಷದ ಯುವತಿ ಸುಷ್ಮಾ ಪ್ರೀತಿಸುತ್ತಿದ್ದರು. ಈಕೆ ಎಂಕಾಂ ವ್ಯಾಸಾಂಗ ನಡೆಸುತ್ತಿದ್ದಳು. ಈ ಜೋಡಿ ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿತ್ತು. ಅಲ್ಲದೆ, ಇವರಿಬ್ಬರ ಪ್ರೀತಿ ವಿಚಾರ ತಿಳಿದ ಕುಟುಂಬಸ್ಥರು, ಮದುವೆಗೆ ಒಪ್ಪಿಗೆ ಸೂಚಿಸಿದ್ದರು.

ಆದರೆ, ವಿಧಿಯಾಟವೇ ಬೇರೆಯಾಗಿತ್ತು. ತನ್ನೂರಿನ ಜಾತ್ರೆಗೆಂದು ಬೆಂಗಳೂರಿನಿಂದ ಬರುತ್ತಿದ್ದಾಗ ನೆಲಮಂಗಲದ ಕುಲಾನಹಳ್ಳಿ ಬಳಿ ರಸ್ತೆ ಅಪಘಾತದಲ್ಲಿ ಧನುಷ್ ಸಾವನ್ನಪ್ಪಿದ್ದು, ಈ ಘಟನೆಯಿಂದ ಸುಷ್ಮಾ ಆಘಾತಕ್ಕೆ ಒಳಗಾಗಿದ್ದಳು. ಅಲ್ಲದೆ, ಈತನ ಅಂತ್ಯಕ್ರಿಯೆಯನ್ನು ಕಣ್ಣಾರೆ ಕಂಡಿದ್ದಳು. ಅಲ್ಲದೆ, ನಿತ್ಯವೂ ಧನುಷ್ ನೆನಪಲ್ಲೇ ಕಣ್ಣೀರು ಸುರಿಸುತ್ತಿದ್ದ ಸುಷ್ಮಾ, ನಿನ್ನೆ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಕೆಯನ್ನು ಉಳಿಸಿಕೊಳ್ಳಲು ನಾಲ್ಕೈದು ಆಸ್ಪತ್ರೆಗೆ ಅಲೆದಾಡಿದರೂ ರಾತ್ರಿ ಸುಮಾರು 8ಗಂಟೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.

ಯುವತಿಯ ಸ್ವಾಗ್ರಾಮವಾದ ತುಮಕೂರಿನ ಅರೆಹಳ್ಳಿಯಲ್ಲಿ ಆಕೆಯನ್ನು ಸಮಾಧಿ ಮಾಡದ ಪೋಷಕರು, ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಧನುಷ್ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆತ್ಮಹತ್ಯೆ ಪ್ರಕರಣ ಸಂಬಂಧ ಹೆಬ್ಬೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೈರ್​ಗೆ ಸಿಲುಕಿದ ನಾಗನ ರಕ್ಷಣೆ

ಮೈಸೂರು: ಜಿಲ್ಲಾದ್ಯಂತ ಅಲ್ಲಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಹಾವುಗಳ ಹಾವಳಿ ಹೆಚ್ಚಾಗಿ ಕಾಣಿಸುತ್ತಿದೆ. ಇದರಿಂದ ಜನರು ಭಯ ಪಡುವಂತಾಗಿದೆ. ಅದರಂತೆ, ಮೈಸೂರಿನ ರಿಂಗ್ ರಸ್ತೆಯ ಕೋಟೆಹುಂಡಿ ಗ್ರಾಮದಲ್ಲಿ ಮನೆಯಂಗಳಕ್ಕೆ ನುಗ್ಗಿದ ನಾಗರಹಾವೊಂದು ಮನೆಯ ಚಪ್ಪಲಿ ಸ್ಟಾಂಡ್ ಬಳಿ ಬಂದಿದೆ. ಅದರ ಪಕ್ಕದಲ್ಲೇ ಇದ್ದ ಟೈರ್​ಗೆ ನುಗ್ಗಿದ ನಾಗರಹಾವು ನರಳಾಡುವಂತಾಗಿದೆ. ಈ ವಿಷಯವನ್ನು ಉರಗ ರಕ್ಷಕ ರಮೇಶ್ ಅವರಿಗೆ ತಿಳಿಸಿದ್ದು, ಕೂಡಲೇ ಅವರು ಮನೆಗೆ ಭೇಟಿ ನೀಡಿ ಟೈರ್​ಗೆ ಸಿಲುಕಿ ನರಳಾಡುತ್ತಿದ್ದ ನಾಗರಹಾವನ್ನು ರಕ್ಷಿಸಿದ್ದಾರೆ.

Web contact

TV9 Kannada

Read More
Follow Us