ಬೆಳಗಾವಿ: ಗಂಡನನ್ನೇ ಕೊಲೆ ಮಾಡಿ ಸಹಜ ಸಾವೆಂದು ನಾಟಕ; ತನಿಖೆ ಬಳಿಕ ಹೊರಬಿತ್ತು ಹತ್ಯಗೆ ಕಾರಣ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 03, 2023 | 7:46 PM

ಮಲಗಿದ್ದಲ್ಲೇ ಗಂಡ ಶವವಾಗಿ ಹೋಗಿದ್ದ, ಬೆಳಗ್ಗೆ ಎದ್ದು ನೋಡುತ್ತಿದ್ದ ಹೆಂಡತಿ ಗಾಭರಿಯಾಗಿ ಗ್ರಾಮಸ್ಥರಿಗೆ ಕರೆದು ವಿಚಾರ ಹೇಳಿ ಅಂತ್ಯಸಂಸ್ಕಾರಕ್ಕೆ ರೆಡಿ ಮಾಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, ಮಸಣಕ್ಕೆ ಹೋಗಬೇಕಿದ್ದ ಶವವನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಶಿಪ್ಟ್ ಮಾಡಿದ್ದರು. ಸಹಜ ಸಾವು ಅಂತಿದ್ದವರು, ಅಸಹಜ ಸಾವು ಎಂದು ಊಲ್ಟಾ ಹೊಡೆದಿದ್ದರು. ಅಷ್ಟಕ್ಕೂ ಅಲ್ಲಿ ಆಗಿದ್ದೇನೂ ಅಂತೀರಾ? ಇಲ್ಲಿದೆ ನೋಡಿ.

ಬೆಳಗಾವಿ: ಗಂಡನನ್ನೇ ಕೊಲೆ ಮಾಡಿ ಸಹಜ ಸಾವೆಂದು ನಾಟಕ; ತನಿಖೆ ಬಳಿಕ ಹೊರಬಿತ್ತು ಹತ್ಯಗೆ ಕಾರಣ?
ಆರೋಪಿ ಮಹಿಳೆ
Follow us on

ಬೆಳಗಾವಿ, ನ.03: ಜಿಲ್ಲೆಯ ಖಾನಾಪುರ(Khanapur) ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ನಿವಾಸಿಯಾದ ಬಾಬು ಎಂಬಾತ ನಾಲ್ಕು ದಿನದ ಹಿಂದೆ ಮನೆಯಲ್ಲಿ ಮಲಗಿದ್ದಾಗಲೇ ಶವವಾಗಿ ಹೋಗಿದ್ದ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ನಂದಗಡ ಪೊಲೀಸರು ಬಾಬು ಸಹಜ ಸಾವಿನಿಂದ ಸತ್ತಿಲ್ಲ, ಬದಲಿಗೆ ಕೊಲೆ ಮಾಡಲಾಗಿದೆ ಎನ್ನುವ ವಿಚಾರವನ್ನು ಹೊರಗೆಳೆದಿದ್ದರು. ಅಷ್ಟಕ್ಕೂ ಇಲ್ಲಿ ಬಾಬುನನ್ನ ಹತ್ಯೆ ಮಾಡಿದ ಆರೋಪಿಗಳ ಬೆನ್ನು ಬಿದ್ದ ಪೊಲೀಸರಿಗೆ ಗೊತ್ತಾಗಿದ್ದು ಶಾಕಿಂಗ್ ವಿಚಾರ. ಹೌದು, ಬಾಬುನ ಪತ್ನಿ ಮಾದೇವಿಯೇ ಕೊಲೆ ಮಾಡಿದ್ದಳು.

ಪತ್ನಿಯಿಂದಲೇ ಪತಿಯ ಕೊಲೆ

ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ ಬಾಬುಗೆ 16 ವರ್ಷದ ಹಿಂದೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗಿತ್ತು. ಊರಲ್ಲಿ ಯಾರು ವಿರೋಧಿಗಳು ಕೂಡ ಇರಲಿಲ್ಲ. ಈ ವೇಳೆ ಆಕೆಯ ಪತ್ಮಿಯ ಮೇಲೆ ಸಂಶಯಗೊಂಡ ಪೊಲೀಸರು ತನಿಖೆ ನಡೆಸಿದಾಗ ತಾನೇ ಗಂಡನನ್ನು ಕೊಂದಿರುವುದಾಗಿ ಹೆಂಡತಿ ಒಪ್ಪಿಕೊಂಡಿದ್ದು, ಇದೀಗ ಹಿಂಡಲಗಾ ಜೈಲು ಸೇರಿದ್ದಾಳೆ.

ಇದನ್ನೂ ಓದಿ:ಹಾಸನ: ಕೌಟುಂಬಿಕ ಕಲಹ, ಚಾಕುವಿನಿಂದ ಇರಿದು ಸೋದರ ಮಾವನನ್ನೇ ಕೊಲೆಗೈದ ಅಳಿಯ

ಕೊಲೆಗೆ ಕಾರಣವೇನು ಗೊತ್ತಾ?

ಇನ್ನು ಕೊಲೆಗೆ ಕಾರಣವೇನು ಎಂದು ನೋಡುವುದಾದರೆ ‘ ಮೃತ ಗಂಡ ಬಾಬು ನಿತ್ಯ ಕುಡಿದು ಬಂದು ಹೆಂಡತಿಗೆ ಕಿರುಕುಳ ನೀಡುತ್ತಿದ್ದನಂತೆ. ಇದಕ್ಕಿಂತ ಮೇಲಾಗಿ ಮದುವೆಯಾಗಿ ಈವರೆಗೂ 40ಎಕರೆ ಜಮೀನು ಪೈಕಿ ಸುಮಾರು 26 ಎಕರೆ ಜಮೀನು ಮಾರಾಟ ಮಾಡಿ ಕುಡಿದು ಹಾಳು ಮಾಡಿದ್ದನಂತೆ. ಈಗ ಮತ್ತೆ ಜಮೀನು ಮಾರಾಟ ಮಾಡಲು ಮುಂದಾಗಿದ್ದ. ಇದರಿಂದ ಹೆಂಡತಿ, ‘ಹೀಗೆ ಆದ್ರೆ, ಇರುವ ಜಮೀನು ಮಾರಿ ಎರಡು ಮಕ್ಕಳು ಬೀದಿಗೆ ಬರುತ್ತಾರೆ ಎಂದುಕೊಂಡು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾಳೆ. ಅದರಂತೆ ಅಕ್ಟೋಬರ್ 31ರಂದು ರಾತ್ರಿ ಗಂಡನಿಗೆ ಊಟದಲ್ಲಿ ನಿದ್ರೆ ಮಾತ್ರೆ ಬೆರಸಿ ಕೊಟ್ಟಿದ್ದಾಳೆ. ಕುಡಿದ ನಶೆಯಲ್ಲಿದ್ದ ಬಾಬು ಊಟ ಮಾಡಿ ಗಾಡ ನಿದ್ರೆಗೆ ಜಾರಿದ್ದಾನೆ. ಬಳಿಕ ಎಂಟು ವರ್ಷದ ಮಗನನ್ನ ಪಕ್ಕದ ಕೋಣೆಯಲ್ಲಿ ಮಲಗಿಸಿದ್ರೆ, ಇನ್ನೊಬ್ಬ ಮಗಳೂ ಹಾಸ್ಟೇಲ್​ನಲ್ಲಿದ್ದಳು.

ಕೊಲೆ ಡ್ರಾಮಾ ಮಾಡಿದ್ದ ಪತ್ನಿ

ಅಂದು ರಾತ್ರಿಯೇ ಗಂಡ ನಿದ್ರೆಗೆ ಜಾರುತ್ತಿದ್ದಂತೆ ಆತನ ಕತ್ತಿಗೆ ಹಗ್ಗ ಬಿಗಿದು ಉಸಿರು ನಿಲ್ಲಿಸಿದ್ದಾಳೆ. ಹೀಗೆ ಕೊಲೆ ಮಾಡಿ ಬೆಳಗ್ಗೆ ಹಾರ್ಟ್ ಅಟ್ಯಾಕ್ ಆಗಿ ಗಂಡ ಸತ್ತಿದ್ದಾನೆ ಎಂದು ಬಾಯಿ ಬಡೆದುಕೊಂಡು ಅತ್ತಿದ್ದಾಳೆ. ಸಂಬಂಧಿಕರು, ಗ್ರಾಮಸ್ಥರನ್ನು ಕರೆಯಿಸಿ ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಏರ್ಪಾಡು ಮಾಡಿದ್ದಾಳೆ. ಆದರೆ, ಶವ ನೋಡಿದ ಕೆಲವರು ಕುತ್ತಿಗೆಯಲ್ಲಿ ಕಲೆ ಇರುವುದನ್ನ ಕಂಡು ನಂದಗಡ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಶವ ನೋಡಿ ಸಂಶಯ ಪಟ್ಟುಕೊಂಡು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಶವ ರವಾನಿಸಿ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಕಾರ್​ನಿಂದ ಗುದ್ದಿ ವ್ಯಕ್ತಿಯ ಕೊಲೆ, ಅಪಘಾತವೆಂದು ಬಿಂಬಿಸಿ ಎಸ್ಕೆಪ್​ ಆಗಲು ಯತ್ನಿಸಿದ್ದ ಆರೋಪಿಗಳು ಅರೆಸ್ಟ್​

ಹೆಂಡತಿಯನ್ನು ಆರಂಭದಲ್ಲಿ ವಿಚಾರಿಸಿದಾಗ ಸಹಜ ಸಾವು ಎಂದು ಹೇಳಿದ್ದಾಳೆ. ಕಲೆಗಳನ್ನ ನೋಡಿದ ಬಳಿಕ ಮತ್ತೆ ಪೊಲೀಸರು ವಿಚಾರಿಸಿದಾಗ ಅವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೂ ಅಂದಿದ್ದಾಳೆ. ಇದರಿಂದ ಸಂಶಯಗೊಂಡ ಪೊಲೀಸರು ಅಂತ್ಯಸಂಸ್ಕಾರದ ಬಳಿಕ ಹೆಂಡತಿ ಮಾದೇವಿಯನ್ನ ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಒಟ್ಟಿನಲ್ಲಿ ಗಂಡನ ಕುಡಿತದ ಚಟ ಆಸ್ತಿ ಮಾರಾಟಕ್ಕೆ ಮುಂದಾಗಿದ್ದರಿಂದ ಬೇಸತ್ತ ಮಹಾದೇವಿ ಗಂಡನಿಗೆ ಚಟ್ಟ ಕಟ್ಟಿ ಜೈಲು ಸೇರಿದ್ದಾಳೆ. ಆಸ್ತಿ ಇದೆ ಎಲ್ಲವೂ ಇದ್ದೂ ಕುಟುಂಬದ ಜವಾಬ್ದಾರಿ ಹೊತ್ತು ಮನೆ ನಡೆಸಬೇಕಿದ್ದ ಬಾಬು ಮಸಣ ಸೇರಿದ್ದಾನೆ. ಗಂಡ-ಹೆಂಡಿರ ಜಗಳದ ನಡುವೆ ಇದೀಗ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 pm, Fri, 3 November 23