ಗಂಡನ ಸಾಲಕ್ಕೆ ಹೆಂಡತಿಯ ಅಡ ಇಟ್ಟುಕೊಂಡ ಬ್ಯಾಂಕ್; ಹಣ ಕೊಟ್ಟ ಬಳಿಕ ಮಹಿಳೆ ಬಿಡುಗಡೆ; ಇದೆಂಥ ಮನೆಮುರುಕ ಕಥೆ

Crime in Tamil Nadu: ತಮಿಳುನಾಡಿನ ಸೇಲಂ ನಗರದಲ್ಲಿರುವ ಬ್ಯಾಂಕ್​ವೊಂದು ಸಾಲ ಪಡೆದ ಗ್ರಾಹಕ ಕಂತು ಕಟ್ಟಲಿಲ್ಲವೆಂದು ಆತನ ಹೆಂಡತಿಯನ್ನು ಕಚೇರಿಯಲ್ಲಿ ಇರಿಸಿಕೊಂಡ ಘಟನೆ ನಡೆದಿದೆ. ಸಂಜೆ 7:30ರವರೆಗೂ ಬ್ಯಾಂಕ್ ಕಚೇರಿಯಲ್ಲಿ ಮಹಿಳೆಯನ್ನು ಬಲವಂತವಾಗಿ ಇರಲಿಸಲಾಗಿತ್ತು ಎನ್ನಲಾಗಿದೆ. ಗಂಡ ಬಂದು ಸಾಲದ ಕಂತು ಕಟ್ಟಿದ ಬಳಿಕವಷ್ಟೇ ಮಹಿಳೆಯನ್ನು ಬಿಡುಗಡೆ ಮಾಡಲಾಗಿದೆ.

ಗಂಡನ ಸಾಲಕ್ಕೆ ಹೆಂಡತಿಯ ಅಡ ಇಟ್ಟುಕೊಂಡ ಬ್ಯಾಂಕ್; ಹಣ ಕೊಟ್ಟ ಬಳಿಕ ಮಹಿಳೆ ಬಿಡುಗಡೆ; ಇದೆಂಥ ಮನೆಮುರುಕ ಕಥೆ
ಸಾಂದರ್ಭಿಕ ಚಿತ್ರ

Updated on: May 03, 2024 | 4:54 PM

ಸೇಲಂ, ಮೇ 3: ಗ್ರಾಹಕರು ಸಾಲ ವಾಪಸ್ ಮಾಡದಿದ್ದರೆ ಅವರು ಅಡ ಇಟ್ಟ ವಸ್ತುವನ್ನು ಬ್ಯಾಂಕ್ ಹರಾಜಿಗೆ ಹಾಕುವುದು ಸಾಮಾನ್ಯವಾಗಿ ಇರುವ ಪ್ರಕ್ರಿಯೆ. ಆದರೆ, ತಮಿಳುನಾಡಿನ ಖಾಸಗಿ ಬ್ಯಾಂಕ್​ನಲ್ಲಿ ಬೇರೆಯೇ ಘಟನೆ ನಡೆದಿದೆ. ಗ್ರಾಹಕನೊಬ್ಬ ಸಾಲ ವಾಪಸ್ ಮಾಡಲಿಲ್ಲವೆಂದು ಬ್ಯಾಂಕ್ ಉದ್ಯೋಗಿ ಆತನ ಹೆಂಡತಿಯನ್ನೇ ಅಡವಾಗಿ ಇಟ್ಟುಕೊಂಡ ಘಟನೆ ಬೆಳಕಿಗೆ ಬಂದಿದೆ. ಸೇಲಂನ ವಳಪ್ಪಾಡಿ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ದಿ ಕಮ್ಯೂನ್ ಮ್ಯಾಗಝಿನ್​ನಲ್ಲಿ ವರದಿಯಾಗಿದೆ. ಖಾಸಗಿ ಬ್ಯಾಂಕ್​ನಲ್ಲಿ ಸಾಲ ಪಡೆದಿದ್ದ ಕೂಲಿ ಕಾರ್ಮಿಕ ಸಾಲದ ಕಂತು ಕಟ್ಟಿರಲಿಲ್ಲ. ಈ ಸಂದರ್ಭದಲ್ಲಿ ಬ್ಯಾಂಕ್​ನ ಉದ್ಯೋಗಿ ಆ ಕೂಲಿಯ ಮನೆಗೆ ಹೋಗಿ ಆತನ ಹೆಂಡತಿಯನ್ನು ಬ್ಯಾಂಕ್​ಗೆ ಕರೆದೊಯ್ಯುತ್ತಾನೆ. ಸಾಲದ ಕಂತು ಕಟ್ಟಿದ ಬಳಿಕವಷ್ಟೇ ಹೆಂಡತಿಯನ್ನು ಬ್ಯಾಂಕ್​ನಿಂದ ಆಚೆಗೆ ಕಳುಹಿಸಲಾಗಿದೆ. ವಳಪ್ಪಾಡಿಯಲ್ಲಿರುವ ಐಡಿಎಫ್​ಸಿ ಫಸ್ಟ್ ಭಾರತ್ ಬ್ಯಾಂಕ್​ನಲ್ಲಿ ಈ ಘಟನೆ ಆಗಿರುವುದು ಗೊತ್ತಾಗಿದೆ.

ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ ಸಂಜೆ 7:30ರವರೆಗೂ ಆ ಮಹಿಳೆಯನ್ನು ಬ್ಯಾಂಕ್​ನಲ್ಲಿ ಇರಿಸಲಾಗಿತ್ತು. ಸಾಲ ಪಡೆದ ವ್ಯಕ್ತಿ 27 ವರ್ಷದ ಪ್ರಶಾಂತ್ ಎನ್ನಲಾಗಿದ್ದು, ಈತ ವಳಪ್ಪಾಡಿ ಬಳಿಯ ತುಕ್ಕಿಯಂಪಾಳಯಂ ನಿವಾಸಿ. ಪ್ರಶಾಂತ್ ನಾಲ್ಕು ತಿಂಗಳ ಹಿಂದೆ ಈ ಬ್ಯಾಂಕ್​ನಿಂದ 35,000 ರೂ ಸಾಲ ಪಡೆದುಕೊಂಡಿರುತ್ತಾನೆ. ವಾರಕ್ಕೆ 770 ರೂನಂತೆ 52 ಕಂತುಗಳಲ್ಲಿ ಸಾಲ ಮರುಪಾವತಿಗೆ ಒಪ್ಪಂದ ಆಗಿರುತ್ತದೆ. ಇನ್ನು ಕೇವಲ 10 ವಾರದ ಕಂತು ಮಾತ್ರವೇ ಬಾಕಿ ಇತ್ತು ಎನ್ನಲಾಗಿದೆ.

ವರದಿ ಪ್ರಕಾರ ಶುಭಾ ಎನ್ನುವ ಬ್ಯಾಂಕ್ ಉದ್ಯೋಗಿ ಏಪ್ರಿಲ್ 30ರಂದು ಸಾಲದ ವಿಚಾರವಾಗಿ ಪ್ರಶಾಂತ್​ಗೆ ಫೋನ್ ಮಾಡಿದ್ದಾಳೆ. ಫೋನ್ ಎತ್ತದಾಗ ಆತನ ಮನೆಗೆ ಹೋಗಿದ್ದಾಳೆ. ಇಲ್ಲಿ ಪ್ರಶಾಂತ್ ಇರಲಿಲ್ಲ. ಆತನ ಹೆಂಡತಿ ಗೌರಿ ಶಂಕರಿಯನ್ನು ಬ್ಯಾಂಕ್ ಕಚೇರಿಗೆ ಕರೆ ತರುತ್ತಾಳೆ. ಪ್ರಶಾಂತ್ ಬಂದು ಸಾಲದ ಕಂತು ಕಟ್ಟುವವರೆಗೂ ಆಕೆಯನ್ನು ಕಚೇರಿಯಲ್ಲೇ ಇರಿಸಲಾಗುತ್ತದೆ.

ಇದನ್ನೂ ಓದಿ: Chikkamagaluru: ಗಂಡನೊಂದಿಗೆ ಮನಸ್ತಾಪ: ಬಟ್ಟೆ ತೊಳೆಯಲು ಹೋಗಿದ್ದ ಪತ್ನಿಯನ್ನು ಹತ್ಯೆಗೈದ ಪತಿ

ಹೆಂಡತಿಯನ್ನು ಬ್ಯಾಂಕ್ ಕಚೇರಿಯಲ್ಲಿ ಬಲವಂತವಾಗಿ ಕೂಡಿಡಲಾಗಿರುವ ವಿಚಾರ ತಿಳಿದ ಬಳಿಕ ಪ್ರಶಾಂತ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಆರ್​ಬಿಐ ನಿಯಮದ ಪ್ರಕಾರ ಸಂಜೆ 6 ಗಂಟೆಯ ಬಳಿಕ ಗ್ರಾಹಕರಿಗೆ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡಬಾರದು. ಐಡಿಎಫ್​ಸಿ ಫಸ್ಟ್​ನ ಆ ಕಚೇರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಕೇಳಿರುವುದು ವರದಿಯಾಗಿದೆ.

ಇನ್ನಷ್ಟು ಕ್ರೈಂ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Fri, 3 May 24

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us