ಉತ್ತರ ಕನ್ನಡ: ಹಣಕ್ಕಾಗಿ ಇಬ್ಬರ ಜಗಳ, ಮೂರನೇ ವ್ಯಕ್ತಿಯ ಕೊಲೆ; ಆರೋಪಿ ಪರಾರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 29, 2023 | 3:19 PM

ನವೆಂಬರ್​ 28 ರಂದು ಹೊನ್ನಾವರ ತಾಲೂಕಿನ ಆರೊಳ್ಳಿಯ ಸೈಕಲ್ ಅಂಗಡಿ ಸಮೀಪ ಆರೋಪಿ ವಿನಾಯಕ ಭಟ್ಟ, ಹೊಸಾಕುಳಿಯ ವಸಂತ ಈಶ್ವರ್​ ನಾಯ್ಕ ಹಾಗೂ ಗೆಳೆಯನಾದ ಸಾಲ್ಕೋಡದ ಜನಾರ್ಧನ ಕೇಶವ ನಾಯ್ಕ್​​ ಜೊತೆಗೆ ಹಣದ ವ್ಯವಹಾರದ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದ. ಇದೀಗ ಈ ಮೂವರ ಜಗಳದ ನಡುವೆ ಅಮಾಯಕನೊಬ್ಬ ಸಾವನ್ನಪ್ಪಿದ್ದಾನೆ.

ಉತ್ತರ ಕನ್ನಡ: ಹಣಕ್ಕಾಗಿ ಇಬ್ಬರ ಜಗಳ, ಮೂರನೇ ವ್ಯಕ್ತಿಯ ಕೊಲೆ; ಆರೋಪಿ ಪರಾರಿ
ಆರೋಪಿ, ಮೃತ ವ್ಯಕ್ತಿ
Follow us on

ಉತ್ತರ ಕನ್ನಡ, ನ.29: ಹಣದ ವಿಚಾರಕ್ಕೆ ವ್ಯಕ್ತಿಯೋರ್ವ, ಆಟೋ ಚಾಲಕನ ಮೇಲೆ ಲಾರಿ ಹರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavar) ತಾಲೂಕಿನ ಅರೇ ಅಂಗಡಿಯ ಜನತಾ ಕಾಲೋನಿ ಸಮೀಪ ಮಂಗಳವಾರ (ನ.28) ತಡರಾತ್ರಿ ನಡೆದಿದೆ. ಓಲ್ವಿನ್ ರವಿ ಲೋಬೋ (31) ಕೊಲೆಯಾದ ದುರ್ಧೈವಿ. ಇನ್ನು ಹೊನ್ನಾವರ ತಾಲೂಕಿನ ಹಡಿನಬಾಳ ಶೇಡಿಕುಳಿಯ ನಿವಾಸಿ ವಿನಾಯಕ ನಾರಾಯಣ ಭಟ್ಟ (40) ಎಂಬಾತ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಘಟನೆ ವಿವರ

ನವೆಂಬರ್​ 28 ರಂದು ಹೊನ್ನಾವರ ತಾಲೂಕಿನ ಆರೊಳ್ಳಿಯ ಸೈಕಲ್ ಅಂಗಡಿ ಸಮೀಪ ಆರೋಪಿ ವಿನಾಯಕ ಭಟ್ಟ, ಹೊಸಾಕುಳಿಯ ವಸಂತ ಈಶ್ವರ್​ ನಾಯ್ಕ ಹಾಗೂ ಗೆಳೆಯನಾದ ಸಾಲ್ಕೋಡದ ಜನಾರ್ಧನ ಕೇಶವ ನಾಯ್ಕ್​​ ಜೊತೆಗೆ ಹಣದ ವ್ಯವಹಾರದ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದ. ಅದೇ ವಿಷಯಕ್ಕೆ ಈ ಇಬ್ಬರನ್ನು ವಿನಾಯಕ ಭಟ್ಟ, ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ.

ಇದನ್ನೂ ಓದಿ:ತರಕಾರಿ ಜೊತೆ ಹೃದಯ ಬೇಯಿಸಿ, ಅಡುಗೆ ಮಾಡಿ ಬಡಿಸಿದ ಕೊಲೆಗಾರ!

ಇಬ್ಬರ ಜಗಳ; ಸಂಬಂಧವಿಲ್ಲದ ವ್ಯಕ್ತಿಯ ಹತ್ಯೆ

ಅದರಂತೆ ಮಂಗಳವಾರ ತಡರಾತ್ರಿ ಅರೇಅಂಗಡಿಯ ಜನತಾ ಕಾಲೋನಿ ಸಮೀಪ ವಸಂತ ನಾಯ್ಕ, ಜನಾರ್ಧನ ನಾಯ್ಕ ಹಾಗೂ ಆಟೋ ಚಾಲಕ ಓಲ್ವಿನ್ ರವಿ ಲೋಬೋ  ಮಾತನಾಡುತ್ತಾ ನಿಂತುಕೊಂಡಿದ್ದರು. ಈ ವೇಳೆ  ಕೊಲೆ ಮಾಡುವ ಉದ್ದೇಶದಿಂದ ಅರೇಅಂಗಡಿ ಕಡೆಯಿಂದ ಕೆಂಪು ಬಣ್ಣದ ಟಿಪ್ಪರ್ ಲಾರಿ ಚಲಾಯಿಸಿಕೊಂಡು ಬಂದಿದ್ದ ಆರೋಪಿ ವಿನಾಯಕ ಭಟ್ಟ, ಮೂವರ ಮೇಲೂ ಟಿಪ್ಪರ್​ ಹಾಯಿಸಿದ್ದಾನೆ. ಈ ವೇಳೆ ಓಲ್ವಿನ್ ರವಿ ಲೋಬೋ ಅವರ ತಲೆಗೆ, ಬಲಗಾಲಿಗೆ ಗಂಭೀರ ಗಾಯವಾಗಿದ್ದು ಕೊನೆಯುಸಿರೆಳೆದಿದ್ದಾರೆ.

ಇನ್ನುಳಿದಂತೆ ವಸಂತ ನಾಯ್ಕ ಹಾಗೂ ಜನಾರ್ಧನ ನಾಯ್ಕ ಅವರಿಗೂ ಗಾಯಗಳಾಗಿದ್ದು, ಪರಾರಿ ಆಗುವ ಮುನ್ನ ಓಲ್ವಿನ್ ಅವರ ಆಟೋರಿಕ್ಷಾವನ್ನು ಸಹ ಜಖಂಗೊಳಿಸಿ, ವಸಂತ ನಾಯ್ಕ ಈತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೀನು ಇಂದು ತಪ್ಪಿಸಿಕೊಂಡಿದ್ದೀಯಾ ಎಂದು ವಿನಾಯಕ ಭಟ್  ಜೀವಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ವಸಂತ ನಾಯ್ಕ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ