ಕಲಬುರಗಿಯಲ್ಲಿ ಪತ್ನಿಯಿಂದಲೇ ಪತಿಯ ಭೀಕರ ಹತ್ಯೆ; ಕಾರಣವೇನು ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 02, 2024 | 9:45 PM

ಆತ ತನ್ನ ಅತ್ತೆ ಮಗಳನ್ನೆ ಪ್ರೀತಿಸಿ ಮದುವೆ ಆಗಿದ್ದನು. ಆಟೋ ಓಡಿಸಿಕೊಂಡು ಪತ್ನಿ-ತಾಯಿಯೊಂದಿಗೆ ಸುಂದರ ಸಂಸಾರ ನಡೆಸ್ತಿದ್ದ. ಆದ್ರೆ, ಅದೇನಾಯ್ತೋ ಗೊತ್ತಿಲ್ಲ. ಕಳೆದ ಕೆಲದಿನಗಳ ಹಿಂದೆ ಗಂಡನೊಂದಿಗೆ ಜಗಳವಾಡಿ ಪತ್ನಿ ತವರು ಮನೆ ಸೇರಿದ್ದಳು. ಕೆಲ ತಿಂಗಳ ಬಳಿಕ ಪತ್ನಿ ಹಾಗೂ ಮಗನನ್ನ ನೋಡಿಕೊಂಡು ಬರಲು ಅಂತ ಆಕೆಯ ತವರು ಮನೆಗೆ ಹೋಗಿದ್ದಾನೆ. ಅಲ್ಲಿ ಮತ್ತೆ ಇಬ್ಬರ ಮಧ್ಯ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿ ತನ್ನ ಗಂಡನನ್ನೆ ಪತ್ನಿ ತನ್ನ ತಾಯಿಯೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಅಷ್ಟಕ್ಕೂ ಈ ಸುಂದರ ಸಂಸಾರದಲ್ಲಿ ನಡೆದಿದ್ದಾದರೂ ಏನು? ಈ ಸ್ಟೋರಿ ಓದಿ.

ಕಲಬುರಗಿಯಲ್ಲಿ ಪತ್ನಿಯಿಂದಲೇ ಪತಿಯ ಭೀಕರ ಹತ್ಯೆ; ಕಾರಣವೇನು ಗೊತ್ತಾ?
ಕಲಬುರಗಿಯಲ್ಲಿ ಪತ್ನಿಯಿಂದಲೇ ಪತಿಯ ಭೀಕರ ಹತ್ಯೆ
Follow us on

ಕಲಬುರಗಿ, ಆ.02: ಕಲಬುರಗಿ(Kalaburagi)ಯ ಕನಕನಗರದಲ್ಲಿ ವಾಸವಾಗಿದ್ದ 26 ವರ್ಷದ ಈಶ್ವರ್, ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ತನ್ನ ಅತ್ತೆ ಮಗಳಾದ ರಂಜಿತಾಳನ್ನ ಕಳೆದ ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದನು. ಮದ್ವೆಯಾದ ಬಳಿಕ ಸುಂದರ ಸಂಸಾರದಲ್ಲಿ ಮಗು ಕೂಡ ಜನಿಸಿತ್ತು. ಇದಾದ ಬಳಿಕ ಇಬ್ಬರ ಮಧ್ಯೆ ಮೇಲಿಂದ ಮೇಲೆ ಜಗಳ ಶುರುವಾಗಿದೆ‌. ಪದೇ ಪದೇ ಪತ್ನಿ ರಂಜಿತಾಳ ಮೇಲೆ ಅನುಮಾನಪಡುತ್ತಿದ್ದ ಈಶ್ವರ್, ಪತ್ನಿ ಮೇಲೆ ಹಲ್ಲೆ ಸಹ ಮಾಡಿದ್ದನು. ಈ ಮಧ್ಯೆ ಮತ್ತೆ ಗರ್ಭಿಣಿಯಾಗಿದ್ದ ರಂಜಿತಾ ಮೂರು ತಿಂಗಳ ಹಿಂದೆ ಪತಿಯ ಕಾಟಕ್ಕೆ ಬೇಸತ್ತು ತವರು ಮನೆ ಸೇರಿದ್ದಳು. ಪತ್ನಿ ನೋಡಿಕೊಂಡು ಬರಲು ನಗರದ ಗ್ರೀನ್‌ಪಾರ್ಕ್ ಅಪಾರ್ಟ್ಮೆಂಟ್‌ಗೆ ತೆರಳಿದ್ದಾನೆ. ಈ ವೇಳೆ ಮತ್ತೆ ಅದೇ ವಿಚಾರಕ್ಕೆ ಜಗಳ ನಡೆದು ಪತ್ನಿ ಹಾಗೂ ಅತ್ತೆ ಮೇಲೆ ಈಶ್ವರ್ ಹಲ್ಲೆ ನಡೆಸಿದ್ದಾನಂತೆ. ಆಗ ಸಿಟ್ಟಿಗೆದ್ದ ಪತ್ನಿ ರಂಜಿತಾ, ಮತ್ತು ಆಕೆಯ ತಾಯಿ ಜಯಶ್ರೀ ಹಾಗೂ ಸಹೋದರ ಸೇರಿಕೊಂಡು ಆತನ ತಲೆಗೆ ದೋಸೆ ಹೆಂಚಿನಿಂದ ಹೊಡೆದಿದ್ದಾರೆ. ಬಳಿಕ ಆತನ ಕೈಕಾಲು ಕಟ್ಟಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಇನ್ನು ಈಶ್ವರ್‌ನನ್ನ ಗ್ರೀನ್‌ ಪಾರ್ಕ್ ಅಪಾರ್ಟ್ಮೆಂಟ್‌ನಲ್ಲಿ ಭೀಕರವಾಗಿ ಹತ್ಯೆಗೈಯ್ದ ಬಳಿಕ, ಪ್ರಕರಣ ತಮ್ಮ ಮೇಲೆ ಬರಬಾರದೆಂದು ಶವವನ್ನ ಗೋಣಿ ಚೀಲದಲ್ಲಿ ಹಾಕಿಕೊಂಡು ನದಿಗೆ ಎಸೆಯುವ ಖತರ್ನಾಕ್​ ಪ್ಲಾನ್ ಮಾಡಿಕೊಂಡಿದ್ದರು. ಅಷ್ಟರಲ್ಲೆ ಆತನನ್ನ ಕೊಲೆ ಮಾಡುವಾಗ ಕೂಗಾಟ ಕೇಳಿಸಿಕೊಂಡು, ಅಕ್ಕಪಕ್ಕದ ನಿವಾಸಿಗಳು ಈಶ್ವರನ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದು ನೋಡಿದಾಗ ಕೈಕಾಲು ಕಟ್ಟಿ ಮನಸ್ಸೋಇಚ್ಚೇ ಥಳಿಸಿ ಕೊಲೆ ಮಾಡಿದ್ದು ಕಂಡು ಬಂದಿದೆ.

ಇದನ್ನೂ ಓದಿ:ಬೆಂಗಳೂರು ಗ್ರಾಮಾಂತರ: ವ್ಯವಹಾರದಲ್ಲಿ ಬೇಸರ, ಹೋಟೆಲ್ ಮ್ಯಾನೇಜರ್ ಆತ್ಮಹತ್ಯೆ

ಸ್ಥಳಕ್ಕೆ ನ್ಯೂ ರಾಘವೇಂದ್ರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪತ್ನಿ ರಂಜಿತಾ, ಅತ್ತೆ ಹಾಗೂ ರಂಜಿತಾ ಸಹೋದರನ್ನ ಬಂಧಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೂ ತವರಲಿದ್ದ ಪತ್ನಿ ಮನೆಗೆ ತೆರಳಿ ಈಶ್ವರ ಗಲಾಟೆ ಮಾಡಿಕೊಂಡಿದ್ದನು. ಈ ವಿಚಾರ ರಂಜಿತಾಳ ಮನೆಯವರನ್ನ ಕೆರಳಿಸುವಂತೆ ಮಾಡಿತ್ತು. ಹೇಗಾದರೂ ಮಾಡಿ ಮಗಳಿಂದ ಈಶ್ವರನನ್ನ ದೂರ ಮಾಡಬೇಕೆಂದು ರಂಜಿತಾಳ ತಾಯಿ ಪ್ಲಾನ್ ಮಾಡಿಕೊಂಡಿದ್ದಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನು ಕೊಲೆ ಕೇಸ್ ಸಂಬಂಧ ಕಲಬುರಗಿಯ ರಾಘವೇಂದ್ರ ನಗರ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಅದೇನೇ ಇರಲಿ ಮಾತಾಡಿಕೊಂಡು ಬಗೆಹರಿಸಿಕೊಳ್ಳೊದನ್ನ ಬಿಟ್ಟು ಪತ್ನಿ ಜೊತೆ ಜಗಳವಾಡಿಕೊಂಡು ಭೀಕರವಾಗಿ ಪತಿ ಕೊಲೆಯಾದರೇ, ಇತ್ತ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಮೂರು ದಿನದ ಹಸಗೂಸನ್ನ ಅನಾಥ ಮಾಡಿ ತಾಯಿ ಜೊತೆ ರಂಜಿತಾ ಕೃಷ್ಣನ ಜನ್ಮಸ್ಥಾನಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ