AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡಬಳ್ಳಾಪುರ: ನಗರಸಭೆ ಸದಸ್ಯೆಯ ಪತಿಯಿಂದ ಕಿರುಕುಳ ಆರೋಪ, ರಾಜಕೀಯದಲ್ಲಿ ಬೆಳೆಯುತ್ತಿದ್ದ ಯುವಕ ಸಾವಿನಲ್ಲಿ ಅಂತ್ಯ

ಪತ್ನಿಗೆ ಮಗುವನ್ನು ಚೆನ್ನಾಗಿ ನೋಡಿಕೊ ಎಂದು ಹೇಳಿ ಹೋದವ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ: ನಗರಸಭೆ ಸದಸ್ಯೆಯ ಪತಿಯಿಂದ ಕಿರುಕುಳ ಆರೋಪ, ರಾಜಕೀಯದಲ್ಲಿ ಬೆಳೆಯುತ್ತಿದ್ದ ಯುವಕ ಸಾವಿನಲ್ಲಿ ಅಂತ್ಯ
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 22, 2022 | 1:38 PM

ದೊಡ್ಡಬಳ್ಳಾಪುರ:  ಆತ ಏರಿಯಾದಲ್ಲಿ ಜನರ ಸಮಸ್ಯೆಗೆ ಸ್ವಂದಿಸುತ್ತಾ, ಜನರಿಗೆ ಬಹಷ್ಟು ಬೇಕಾಗಿರುವ ವ್ಯಕ್ತಿ. ಜನರೊಂದಿಗಿನ ಈತನ ಒಡನಾಟ ನೋಡಿ ರಾಜಕೀಯ ನಾಯಕರು ಸಹ ಆತನನ್ನ ತಮ್ಮ ಪಕ್ಷಕ್ಕೆ ಬರಮಾಡಿಕೊಂಡು ಪಕ್ಷಕ್ಕಾಗಿ ದುಡಿಸಿಕೊಳ್ಳುತ್ತಿದ್ದರು. ಹೀಗೆ ಎಲ್ಲರಿಗೂ ಬೇಕಾಗಿದ್ದ ವ್ಯಕ್ತಿ ನಿನ್ನೆ (ನ.20) ಮನೆಯಿಂದ ಹೊರ ಹೋದವ ಮರಳಿ ಜೀವಂತವಾಗಿ ಮನೆಗೆ ಬರಲಿಲ್ಲ.

 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ. ಸುತ್ತಮುತ್ತ ಬೃಹತ್ ಕೈಗಾರಿಕಾ ಪ್ರದೇಶ, ದೇಶದ ವಿವಿಧ ಮೂಲೆಗಳಿಗೆ ಸಂರ್ಪಕ ಕಲ್ಪಿಸುವ ರೈಲು, ನಾಲ್ಕಕ್ಕೂ ಅಧೀಕ ಹೆದ್ದಾರಿಗಳು ಸೇರಿದಂತೆ, ಅಂತರಾಷ್ಟ್ರಿಯ ವಿಮಾನ ನಿಲ್ದಾಣವನ್ನು ತನ್ನ ಮಡಿಲಲ್ಲಿಟ್ಟುಕೊಂಡಿರುವ ಜಿಲ್ಲೆ. ಹೀಗಾಗಿ ಈ ಜಿಲ್ಲೆಯಲ್ಲಿ ತಮ್ಮ ಪಾರುಪತ್ಯ ಸಾಧಿಸಬೇಕು ಅಂತ ಬಿಜೆಪಿ, ಕಾಂಗ್ರೆಸ್​​​ ಮತ್ತು ಜೆಡಿಎಸ್ ಪಕ್ಷಗಳು ತಮ್ಮದೆ ಆದ ತಂತ್ರ ಪ್ರತಿತಂತ್ರಗಳನ್ನು ಹೆಣೆಯುತ್ತಿರುತ್ತವೆ.

ಇನ್ನೂ ಜಿಲ್ಲೆಯಲ್ಲಿನ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ರಾಜಕೀಯದಲ್ಲಿ ಜಿದ್ದಾ ಜಿದ್ದಿನ ಕ್ಷೇತ್ರವಾಗಿದೆ. ಸದ್ಯ ಈ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮೇಲುಗೈ ಸಾಧಿಸಿದ್ದು, ಮುಂಬರುವ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಕಮಲ ಅರಳಿಸಲು ಹಠ ಬದ್ದವಾಗಿ ನಿಂತಿದೆ. ಹೀಗಾಗಿ ಕಾಂಗ್ರೆಸ್​​​​ನಿಂದ ಕಡೆಗಣಿಸಲ್ಪಟ್ಟ ಮುಖಂಡರಿಗೆ ಬಿಜೆಪಿ ಗಾಳ ಹಾಕುತ್ತಿದೆ.

ಇತ್ತಿಚೆಗಷ್ಟೆ ದೊಡ್ಡಬಳ್ಳಾಫುರ ನಗರದಲ್ಲಿ ಇದೀಗ ಬೆಳೆಯುತ್ತಿದ್ದ ಯುವ ಉತ್ಸಾಹಿ ವಿನೋದ್​​ಗೆ ಬಿಜೆಪಿ ಹಾಕಿದ್ದ ಗಾಳ ಯಶಸ್ವಿಯಾಗಿತ್ತು. ಅಲ್ಲದೆ ಏರಿಯಾದಲ್ಲಿ ತನ್ನ ಯುವಕರ ಬಳಗದ ಸಮೇತ ಯುವ ಉತ್ಸಾಹಿ ವಿನೋದ್​ ಬಿಜೆಪಿ ಸೇರಿ ಪಕ್ಷ ಸಂಘಟನೆಯಲ್ಲೂ ತೋಡಗಿಸಿಕೊಂಡಿದ್ದನು. ಇನ್ನೂ ಎಲ್ಲ ಚೆನ್ನಾಗಿದೆ ಮುಂದೆ ಬಿಜೆಪಿ ಶಾಸಕರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಅಂದುಕೊಂಡಿದ್ದ ವಿನೋದ್ ದಿಡೀರ್ ನಾಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಕುಟುಂಬಸ್ಥರು ಸೇರಿದಂತೆ ಮುಖಂಡರಿಗೆ ಶಾಕ್​ ನೀಡಿದ್ದಾನೆ.

ಹೌದು ವಿನೋದ್​ ದೊಡ್ಡಬಳ್ಳಾಪುರ ನಗರದ ಕಛೇರಿಪಾಳ್ಯದ ನಿವಾಸದಲ್ಲಿ ವಾಸವಾಗಿದ್ದು, ನವೆಂಬರ್​ 16 ರಂದು ​ಹೊರಗಡೆ ಹೋಗುತ್ತಿದ್ದೇನೆ ಮಕ್ಕಳನ್ನ ಚೆನ್ನಾಗಿ ನೋಡಿಕೋ ಎಂದು ಪತ್ನಿಗೆ ಹೇಳಿ ಹೋದನು. ಹೋಗುವಾಗ 1000ರೂ ಪತ್ನಿ ಕೈಗಿಟ್ಟು ಹೋಗಿದ್ದನು. ಹೀಗೆ ಹೇಳಿ ಹೋದ ವಿನೋದ್​ ಸಂಜೆಯಾದ್ರು ಮನೆಗೆ ವಾಪಸ್ ಆಗಿರಲಿಲ್ಲ. ಇದರಿಂದ ಗಾಬರಿಗೊಂಡ ಪತ್ನಿ ನಿರಂತರವಾಗಿ ಫೋನ್​ ಮಾಡಿದರು, ಪೋನ್​​ ತೆಗೆದಿರಲಿಲ್ಲ. ಇದರಿಂದ ತೀರ್ವ ಗಾಬರಿಗೊಂಡ ಪತ್ನಿ, ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ವಿಷಯ ತಿಳಿಸಿದ್ದಾರೆ.

ಆಗ ಎಲ್ಲರೂ ವಿನೋದ್​ನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ ವಿನೋದ್​​ ಎಲ್ಲೂ ಸಿಗಲಿಲ್ಲ. ಆದರೆ ದೊಡ್ಡಬಳ್ಳಾಪುರ ನಗರದಿಂದ ಕೂಗಳತೆ ದೂರದಲ್ಲಿರುವ ತಳಗವಾರ ಕೆರೆ ಬಳಿಗೆ ಕುರಿಗಾಹಿಗಳು ಕುರಿ ಮೇಯಿಸಲು ಹೋದಾಗ, ಕೆರೆಯ ದಡದಲ್ಲಿ ಚಪ್ಪಲಿ ಜೊತೆಗೆ ಒಂದು ಲೆಟರ್ ಸಿಕ್ಕಿದೆ. ಇದೇನಪ್ಪ ಅಂತ ಚಪ್ಪಲಿ ಬಳಿ ಹೋಗಿ ಲೆಟರ್​​ ಓಪನ್​ ಮಾಡಿ ಓದಿದರೇ ಆಶ್ಚರ್ಯ ಕಾದಿತ್ತು.

ಲೆಟರ್​​ನಲ್ಲಿ “ನನ್ನ ಹೆಸರು ವಿನೋದ್ ಕಛೇರಿಪಾಳ್ಯ ನಿವಾಸಿ. ಮಂಜುನಾಥ್ ಕೌನ್ಸಿಲರ್ ಶಂಕರಪ್ಪ, ಕಾಂಕ್ರೇಟ್ ಮೇಡಂ, ನಮ್ಮ ಮನೆಯ ಪಕ್ಕದ ಶ್ರೀನಿವಾಸ್ ಹೆಂಡತಿ, ಸಪಾರಿ ನಾರಾಯಣಪ್ಪ, ದರ್ಮೇಶಿ ಎಂಬುವರು ನನ್ನ ಸಾವಿಗೆ ಕಾರಣವಾದವರು. ಇವರು ತುಂಬಾ ತೊಂದರೆ ಕೊಟ್ಟಿದ್ದ ಕಾರಣ ನಾನು ಆತ್ಮಹತ್ಯೆ ಮಾಡಿಕೊಳ್ಳೂತ್ತಿದ್ದೇನೆ. ನನ್ನ ಮನೆಯವರು ನನ್ನನ್ನು ಕ್ಷಮಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳೂತ್ತಿದ್ದೇನೆ ಅನುಷಾ ನನ್ನನ್ನು ಕ್ಷಮಿಸು ಮಕ್ಕಳನ್ನ ಚೆನ್ನಾಗಿನೋಡಿಕೊ”, ಅಂತ ಬರೆದಿರುವ ಪತ್ರ ಸಿಕ್ಕಿದೆ. ಹೀಗಾಗಿ ಪತ್ರವನ್ನ ಕಂಡು ಗಾಬರಿಯಾದ ಕುರಿಗಾಹಿಗಳು ಕೂಡಲೆ ದೊಡ್ಡಬಳ್ಳಾಪುರ ಪೊಲೀಸರಿಗೆ ಮಾಹಿತಿ ನೀಡಿದರು.

ಇನ್ನೂ ವಿಚಾರ ತಿಳಿಯುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಕೆರೆಯ ಬಳಿ ಸಿಕ್ಕ ಲೆಟರ್​ನಿಂದ ವಿನೋದ್ ನೀರಿನಲ್ಲಿ ಮುಳಿಗಿದ್ದಾನೆ ಅಂತ ಅಗ್ನಿಶಾಮಕ ದಳದ ಸಿಬ್ಬಂದಿಯನ್ನ ಕರೆಸಿಕೊಂಡು ತೀವ್ರ ಶೋಧ ಕಾರ್ಯ ನಡೆಸಿದರು. ಕೆರೆಯಲ್ಲಿ ಯುವ ಮುಖಂಡ ವಿನೋದನ ಮೃತದೇಹ ಪತ್ತೆಯಾಗಿದ್ದು ಕುಟುಂಬಸ್ಥರಿಗೆ ವಿಚಾರ ತಿಳಿಸಿ ನಂತರ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ವಿನೋದ್ ಆತ್ಮಹತ್ಯೆ ಮಾಡಿಕೊಳ್ಳಲು ಕಛೇರಿಪಾಳ್ಯದ ಕಾಂಗ್ರೇಸ್ ನಗರಸಭೆ ಸದಸ್ಯೆಯ ಪತಿ ಮತ್ತು ಡೆತ್​​ನೋಟ್​ನಲ್ಲಿ ಬರೆದಿರುವ ಹೆಸರುಗಳೇ ಕಾರಣ ಅಂತ ಕುಟುಂಬಸ್ಥರು ಪೊಲೀಸ್ ಠಾಣೆ ಬಳಿ ಜಮಾಯಿಸಿದರು.

ಅಲ್ಲದೆ ವಿನೋದ್ ಸಾವಿಗೆ ನ್ಯಾಯ ಸಿಗುವವರೆಗೂ ನಾವು ಇಲ್ಲಿಂದ ಹೋಗಲ್ಲ ಅಂತ ಪೊಲೀಸ್ ಠಾಣೆಯ ಬಳಿಯೇ ಪಟ್ಟು ಹಿಡಿದು ಕುಳಿತು ಆಕ್ರೋಶ ಹೊರ ಹಾಕಿದರು. ಇನ್ನೂ ಇತ್ತಿಚೆಗಷ್ಟೆ ರಾಜಕೀಯದಲ್ಲಿ ಬೆಳಯುತ್ತಿದ್ದ ವಿನೋದ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದ್ದು ಏನು ಅಂತ ಹುಡುಕುತ್ತಾ ಹೋದರೇ ಸಿಗೋದು ಅನಾಮದೇಯ ಪತ್ರ ಮತ್ತು ರಾಜಕೀಯ.

ಅಂದಹಾಗೆ ಕಳೆದ ಒಂದು ವರ್ಷದಿಂದಷ್ಟೆ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಕಛೇರಿಪಾಳ್ಯದ ಕಾಂಗ್ರೇಸ್ ಅಭ್ಯರ್ಥಿಯಾಗಿ ಅದೇ ವಾರ್ಡ್​​ನ ರೂಪಿಣಿ ಮಂಜುನಾಥ್ ಸ್ವರ್ದಿಸಿದ್ದರು. ಹೀಗಾಗಿ ತಮ್ಮ ಪರ ಕೆಲಸ ಮಾಡಿ ನನ್ನ ಪತ್ನಿಯನ್ನ ಗೆಲ್ಲಿಸಿದರೇ ಮುಂದೆ ನಿನಗೆ ಏನು ಬೇಕಾದರು ಸಹಾಯ ಮಾಡುತ್ತೇನೆ ಅಂತ ಸದಸ್ಯೆ ರೂಪಿಣಿ ಪತಿ ಮಂಜುನಾಥ್ ಹೇಳಿದ್ದನಂತೆ.

ಮೊದಲಿನಿಂದಲೂ ಮಂಜುನಾಥ್ ಮತ್ತು ವಿನೋದ್ ಜತೆಯಲ್ಲಿ ಬೆಳೆದಿದ್ದ ಕಾರಣ ಮುಂದೆ ಒಳ್ಳೇದಾಗುತ್ತೆ ಅಂತ ಚುನಾವಣೆ ಸಂಧರ್ಭದಲ್ಲಿ ಮುಂದೆ ನಿಂತು ಆಕೆಯ ಪರ ವಿನೋದ್ ಮತಯಾಚಿಸಿದ್ದಾನೆ. ಅಲ್ಲದೆ ಚುನಾವಣೆ ವೇಳೆ ಜನರಿಗೆ ಕೊಡಲು ಹಣವಿಲ್ಲ ಅಂದಿದಕ್ಕೆ ಸ್ವತಃ ವಿನೋದ್ ಸ್ತ್ರೀಶಕ್ತಿ ಸಂಘಗಳಲ್ಲಿ 2 ಲಕ್ಷವರೆಗೂ ಸಾಲ ತೆಗೆದುಕೊಂಡು ಹಣ ಹಂಚಿ ರೂಪಿಣಿ ಮಂಜುನಾಥ್ ನನ್ನ ಗೆಲ್ಲಿಸಿದ್ದನಂತೆ. ಚುನಾವಣೆಯಲ್ಲಿ ಗೆದ್ದ ನಂತರ ನಗರಸಭೆ ಸದಸ್ಯೆ ರೂಪಿಣಿ ಮಂಜುನಾಥ್ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಮಾತು ತಪ್ಪಿದ್ದು ರಾಜಕೀಯದಿಂದಲು ವಿನೋದ್​​ನನ್ನ ದೂರ ತಳ್ಳಿದ್ದನಂತೆ.

ಇದರಿಂದ ಮನನೊಂದಿದ್ದ ವಿನೋದ್ ಅದೇ ನೋವಿನಲ್ಲಿದ್ದನಂತೆ. ಹೀಗಾಗಿ ಈ ವೇಳೆ ಒಳ್ಳೆ ಯುವಕರ ಪಡೆ ಹೋಂದಿದ್ದ ವಿನೋದ್ ನನ್ನ ಬಿಜೆಪಿಗೆ ಬರುವಂತೆ ದೊಡ್ಡಬಳ್ಳಾಪುರದ ಯುವ ಮುಖಂಡರು ಆಹ್ವಾನಿಸಿದ್ದು ತನ್ನ ಆಪ್ತ ಗೆಳೆಯರ ಜೊತೆ ವಿನೋದ್ ಬಿಜೆಪಿ ಸೇರಿ ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದನು.

-ಅನುಷಾ ಮೃತ ವಿನೋದ್​​ ಪತ್ನಿ

ಕಾಂಗ್ರೇಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದ ವಿನೋದ್ ಬಿಜೆಪಿಗೆ ಸೇರುತ್ತಿದ್ದಂತೆ ನಗರಸಭೆ ಸದಸ್ಯೆ ಪತಿ ಮಂಜುನಾಥ್​ಗೆ ಹೊಟ್ಟೆ ಉರಿ ಶುರುವಾಗಿದೆ. ಹಲವು ಬಾರಿ ಇಲ್ಲ ಸಲ್ಲದ ದೂರಗಳನ್ನ ಕೊಟ್ಟು ವಿನೋದ್​​ನನ್ನ ಪೊಲೀಸ್ ಠಾಣೆಗೆ ಕರೆಸಿ ಕಿರುಕುಳ ಕೊಡಿಸಿದ್ದನಂತೆ. ಹೀಗಾಗಿ ಪೊಲೀಸ್ ಠಾಣೆಗೆ ಹೋಗಿ ಬಂದ ಹಿನ್ನೆಲೆಯಲ್ಲಿ ಸಾಕಷ್ಟು ಮನನೊಂದಿದ್ದನು. ಮುಂದೆ ವಿನೋದ್​ಗೆ ಅನಾಮದೇಯ ಪತ್ರವೊಂದನ್ನ ಪೋಸ್ಟ್ ಮುಖಾಂತರ ಬಂದಿದೆ. ಜತೆಗೆ ಆ ಪತ್ರದಲ್ಲಿ “ವಿನೋದ್ ಏರಿಯಾದಲ್ಲಿಯ ಅಪ್ರಾಪ್ತ ಬಾಲಕಿಯೊಬ್ಬಳು ಹುಡುಗನ ಜೊತೆ ಮಾತನಾಡಿದನ್ನು ಕಂಡು ಆಕೆಯನ್ನ ಬ್ಲಾಕ್ ಮೇಲ್ ಮಾಡಿದ್ದಾನೆ. ಅಲ್ಲದೆ ಬ್ಲಾಕ್ ಮೇಲ್ ಮುಖಾಂತರ ಅಪ್ರಾಪ್ತ ಬಾಲಕಿಯ ಜೊತೆ ಲೈಂಗಿಕ ಸಂರ್ಪಕ ಬೆಳೆಸಿದ್ದು ನಿಮ್ಮ ಮಗಳನ್ನ ನೀವು ಜೋಪಾನವಾಗಿ ನೋಡಿಕೊಳ್ಳಿ ನಿಮ್ಮ ಮಗಳ ಬಳಿ ಕೇಳಿ ಠಾಣೆಗೆ ದೂರು ಕೊಡಿಸಿ ಅಂತನು ಪತ್ರದಲ್ಲಿ ಬರದಿತ್ತಂತೆ. ಅಲ್ಲದೆ ಇದೇ ಪತ್ರವನ್ನ ನಗರದ ವಾಟ್ಸ್ ಆಪ್ ಗ್ರೂಪ್​ಗಳಲ್ಲಿ ಸಹ ಹರಿಬಿಟ್ಟಿದ್ದು ಸಾಕಷ್ಟು ಕಡೆ ಪತ್ರ ವೈರಲ್ ಆಗಿದ್ದು ಆಪ್ತರು ಮುಖಂಡರು ಸ್ನೇಹಿತರೆಲ್ಲ ಪತ್ರದ ಬಗ್ಗೆ ವಿನೋದ್ ಬಳಿ ಕೇಳುತ್ತಿದ್ದರಂತೆ.

ಹೀಗಾಗಿ ಪೊಲೀಸ್ ಠಾಣೆಯಲ್ಲಿ ಕಿರುಕುಳ ಮತ್ತು ಪತ್ರದಿಂದ ಮನನೊಂದಿದ್ದ ನನ್ನ ಗಂಡ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದು ನಗರಸಭೆ ಸದಸ್ಯೆಯ ಪತಿ ಮತ್ತು ಇತರರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಸ್ಥಳಿಯ ಕಾಂಗ್ರೇಸ್ ಶಾಸಕ ಮತ್ತು ನಗರಸಭೆ ಸದಸ್ಯೆಯ ಪತಿ ಮಂಜುನಾಥ್ ಪಿತೂರಿ ಮಾಡಿ ಪೊಲೀಸರಿಂದ ನಮಗೆ ನ್ಯಾಯ ಸಿಗದೆ ಮಾಡ್ತಿದ್ದಾರೆ ಆರೋಪಿ ಮಂಜುನಾಥ್ ಹೆಸರು ಸಹ ಎಪ್ಐಆರ್​ನಲ್ಲಿ ಮೂರನೆಯವನಾಗಿ ಹಾಕಿ ಅನ್ಯಾಯ ಮಾಡ್ತಿದ್ದಾರೆ ಅಂತ ಆಕ್ರೋಶ ಹೊರ ಹಾಕಿದ್ದಾರೆ.

-ರೇಣುಕಾ ಮೃತ ವಿನೋದ್​ನ ಅತ್ತೆ

ಅಲ್ಲದೆ ನನ್ನ ಅಳಿಯ ವಿನೋದ್ ಯಾವತ್ತು ಒಬ್ಬನೆ ಎಲ್ಲು ಹೋಗಲ್ಲ ಯಾರೂ ಅವನನ್ನ ಉದ್ದೇಶ ಪೂರ್ವಕವಾಗಿ ನೀರಿನಲ್ಲಿ ತಳ್ಳಿ ಕೊಲೆ ಮಾಡಿದ್ದಾರೆ. ನನ್ನ ಕುಟುಂಬಕ್ಕೆ ನನ್ನ ಅಳಿಯನೆ ಆಧಾರವಾಗಿದ್ದ ನನಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ನಮಗೆ ಯಾರು ದಿಕ್ಕು ಎಂದು ಮೃತ ವಿನೋದನ ಅತ್ತೆ ಅಳಲು ತೋಡಿಕೊಂಡಿದ್ದಾರೆ.

ಇನ್ನೂ ವಿನೋದ್ ಸಾವನ್ನಪ್ಪುತ್ತಿದ್ದಂತೆ ನಗರಸಭೆ ಸದಸ್ಯೆ ರೂಪಿಣಿ ಮತ್ತು ಆಕೆಯ ಪತಿ ಸೇರಿದಂತೆ ಕುಟುಂಬಸ್ಥರೆಲ್ಲ ಊರು ಬಿಟ್ಟು ನಾಪತ್ತೆಯಾಗಿದ್ದು ತಪ್ಪು ಮಾಡಿಲ್ಲ ಅಂದರೆ ಯಾಕೆ ಊರು ಬಿಟ್ಟು ಹೋದರು ಅಂತ ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಇನ್ನೂ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನೋದನ ಮೃತದೇಹವನ್ನ ನಗರದಲ್ಲಿ ನೂರಾರು ಜನ ಯುವಕರು ಸೇರಿ ಮೆರವಣಿಗೆ ಮಾಡುವ ಮೂಲಕ ಅಂತ್ಯ ಕ್ರಿಯೆ ನೆರವೇರಿಸಿದ್ದಾರೆ.

ರಾಜಕೀಯಕ್ಕೆ ಸೇರಿ ನಗರದಲ್ಲಿ ಬೆಳೆಯುತ್ತಿದ್ದ ಯುವಕ ವಿನೋದ್ ಮೆಲ್ನೂಟಕ್ಕೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರೂ ಸಾವಿನ ಸುತ್ತ ಅನುಮಾನದ ಹುತ್ತ ಬೆಳದಿರುವ ಕಾರಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ,. ಈ ನಡುವೆ ವಿನೋದ್​ಗೆ ಬಂದ ಆ ಅನಾಮದೇಯ ಪತ್ರ ಯಾರದ್ದು ಯಾರು ಕಳಿಸಿದ್ದು ಪತ್ರದಲ್ಲಿರೂದು ಎಷ್ಟು ಸುಳ್ಳು ಎಷ್ಟು ಸತ್ಯ ಅನ್ನೂ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದು ಪೊಲೀಸರ ತನಿಖೆಯಿಂದಷ್ಟೆ ವಿನೋದ್ ಸಾವಿನ ಹಿಂದಿನ ಸತ್ಯ ಬೆಳಕಿಗೆ ಬರಬೇಕಿದೆ.

ವರದಿ- ನವೀನ ಟಿವಿ9 ದೊಡ್ಡಬಳ್ಳಾಪುರ

Published On - 11:25 am, Tue, 22 November 22