
ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಗೊಲ್ಲೆ ಪ್ರವೀಣ್ ಕುಮಾರ್ ಅತ್ಯಂತ ಸರಳ ಕುಟುಂಬದಿಂದ ಬಂದವರು. ತಾಯಿ ಬೀಡಿ ಕಟ್ಟಿ ಮಕ್ಕಳನ್ನು ಬೆಳೆಸಿದ್ದು ಹಾಗೂ ಅಣ್ಣ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಬಡ ಕುಟುಂಬದಲ್ಲಿ ಬೆಳೆದ ಪ್ರವೀಣ್, ಆರ್ಥಿಕ ಸವಾಲುಗಳ ನಡುವೆಯೇ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಿದರು. ತಮ್ಮ ಕುಟುಂಬಕ್ಕೆ ಆರ್ಥಿಕ ಹೊರೆಯಾಗಬಾರದು ಎಂಬ ದೃಢ ನಿರ್ಧಾರ ಅವರದಾಗಿತ್ತು.
ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಕಾಮ್, ಬಿ.ಎಡ್ ಮತ್ತು ಎಂ.ಎಡ್ ವ್ಯಾಸಂಗ ಮಾಡುತ್ತಿದ್ದಾಗ, ತಮ್ಮ ವೈಯಕ್ತಿಕ ಖರ್ಚಿಗಾಗಿ ಪ್ರವೀಣ್ ವಿಶ್ವವಿದ್ಯಾಲಯದಲ್ಲೇ ರಾತ್ರಿ ಕಾವಲುಗಾರನಾಗಿ (Night Watchman) ಸೇರಿಕೊಂಡರು. ರಾತ್ರಿ ಕರ್ತವ್ಯ ನಿರ್ವಹಿಸುತ್ತಾ ಸಿಗುತ್ತಿದ್ದ ಸಮಯದಲ್ಲಿ ಕಷ್ಟಪಟ್ಟು ಓದಿದರು. ಕೆಲವರು ಇವರ ಕೆಲಸವನ್ನು ಗೇಲಿ ಮಾಡಿದರೂ, ಪ್ರವೀಣ್ ಆ ಮಾತುಗಳನ್ನು ನಿರ್ಲಕ್ಷಿಸಿ ತಮ್ಮ ಗುರಿಯತ್ತ ಮಾತ್ರ ಗಮನಹರಿಸಿದರು.
ವರ್ಷಗಳ ನಿರಂತರ ಪರಿಶ್ರಮಕ್ಕೆ ಕೊನೆಗೂ ಅದ್ಭುತ ಫಲ ಸಿಕ್ಕಿತು. ಗುರುಕುಲ ಶಿಕ್ಷಣ ಸಂಸ್ಥೆಗಳಲ್ಲಿ ಜೂನಿಯರ್ ಲೆಕ್ಚರರ್ (ರಾಜ್ಯ ಮಟ್ಟದಲ್ಲಿ 17 ನೇ ರ್ಯಾಂಕ್), ಪಿಜಿಟಿ ಮತ್ತು ಟಿಜಿಟಿ ಹುದ್ದೆಗಳು ಸೇರಿದಂತೆ ಒಂದೇ ಬಾರಿಗೆ ಸತತವಾಗಿ 3 ಸರ್ಕಾರಿ ಉದ್ಯೋಗಗಳನ್ನು ಪಡೆದು ಪ್ರವೀಣ್ ಸಾಧನೆ ಮಾಡಿದರು. ತಾವು ಕಾವಲುಗಾರನಾಗಿ ಕೆಲಸ ಮಾಡಿದ ಕಚೇರಿಯಲ್ಲೇ ಸನ್ಮಾನ ಸ್ವೀಕರಿಸಿದ್ದು ಅವರ ಜೀವನದ ಅತ್ಯಂತ ಭಾವನಾತ್ಮಕ ಕ್ಷಣವಾಯಿತು.
ಯಶಸ್ಸಿನ ನಂತರ ಮಾತನಾಡಿದ ಪ್ರವೀಣ್, “ಕೆಲವರಿಗೆ ಮೊದಲ ಪ್ರಯತ್ನದಲ್ಲೇ ಸಿಗಬಹುದು, ಇನ್ನು ಕೆಲವರಿಗೆ ಎರಡನೇ ಪ್ರಯತ್ನದಲ್ಲಿ ಸಿಗಬಹುದು. ಆದರೆ ತಾಳ್ಮೆಯಿಂದ ಕಾಯುತ್ತಾ ನಿರಂತರವಾಗಿ ಅಭ್ಯಾಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ” ಎಂದು ಹೇಳುತ್ತಾರೆ. ಸೋಲಿಗೆ ಹೆದರದೆ ಮುನ್ನಡೆಯುವ ಪ್ರತಿಯೊಬ್ಬರಿಗೂ ಅವರ ಜೀವನದ ಪ್ರಯಾಣವೇ ದೊಡ್ಡ ಪ್ರೇರಣೆ.
ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ