
ದೇಶದ ಲಕ್ಷಾಂತರ ಯುವ ಜನತೆ ‘ಯುಪಿಎಸ್ಸಿ’ (UPSC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ IAS ಅಥವಾ IPS ಅಧಿಕಾರಿಗಳಾಗಬೇಕೆಂದು ಕನಸು ಕಾಣುತ್ತಾರೆ. ಆದರೆ, ಈ ಪರೀಕ್ಷೆಯು ದೇಶದಲ್ಲೇ ಅತ್ಯಂತ ಕಠಿಣ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅತ್ಯಂತ ದುಬಾರಿ ಕೋಚಿಂಗ್ ಸೆಂಟರ್ಗಳು, ದೊಡ್ಡ ದೊಡ್ಡ ಇನ್ಸ್ಟಿಟ್ಯೂಟ್ಗಳಿಗೆ ಹೋದರೆ ಮಾತ್ರ ಯುಪಿಎಸ್ಸಿ ಪಾಸ್ ಆಗಲು ಸಾಧ್ಯ ಎಂದು ಹೇಳಲಾಗುತ್ತದೆ. ಆದರೆ, ಯಾವುದೇ ಕೋಚಿಂಗ್ ಇಲ್ಲದೆ, ಕೇವಲ ಸ್ವಯಂ ಅಧ್ಯಯನ (Self Study) ಮತ್ತು ಯೂಟ್ಯೂಬ್ ಸಹಾಯದಿಂದ ಮೊದಲ ಪ್ರಯತ್ನದಲ್ಲೇ ದೇಶದ ಅತ್ಯುನ್ನತ ಪರೀಕ್ಷೆ ಪಾಸ್ ಮಾಡಿದ ಸಾಧಕಿಯೊಬ್ಬರಿದ್ದಾರೆ. ಅವರೇ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿರುವ ಐಎಎಸ್ ವಂದನಾ ಮೀನಾ.
ರಾಜಸ್ಥಾನದ ಹಳ್ಳಿಯೊಂದರಿಂದ ಬಂದು, ಸೀಮಿತ ಸಂಪನ್ಮೂಲಗಳ ನಡುವೆಯೇ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಕನಸನ್ನು ನನಸಾಗಿಸಿಕೊಂಡ ವಂದನಾ ಅವರ ಯಶೋಗಾಥೆ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ.
ಐಎಎಸ್ ವಂದನಾ ಮೀನಾ ಮೂಲತಃ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯವರು. ಬಾಲ್ಯದ ಕೆಲವು ವರ್ಷಗಳನ್ನು ಹಳ್ಳಿಯಲ್ಲೇ ಕಳೆದ ನಂತರ, ಇವರ ಕುಟುಂಬ ದಿಲ್ಲಿಗೆ ಸ್ಥಳಾಂತರಗೊಂಡಿತು. ವಂದನಾ ಅವರ ತಂದೆ ಪೃಥ್ವಿರಾಜ್ ಮೀನಾ ಅವರು ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬ ದಿಲ್ಲಿಗೆ ಬಂದ ನಂತರ ವಂದನಾ ಅವರ ಶಿಕ್ಷಣ ಶರವೇಗದಲ್ಲಿ ಸಾಗಿತು.
ವಂದನಾ ದಿಲ್ಲಿಯ ಪ್ರಸಿದ್ಧ ಸೇಂಟ್ ಕೊಲಂಬಸ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಪ್ರತಿಷ್ಠಿತ ದಿಲ್ಲಿ ವಿಶ್ವವಿದ್ಯಾಲಯದಿಂದ ‘ಗಣಿತ ಗೌರವ’ (Mathematics Honours) ಪದವಿ ಪಡೆದರು. ಬಾಲ್ಯದಿಂದಲೇ ದೇಶ ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದ ವಂದನಾ, ಪದವಿ ಮುಗಿಯುತ್ತಿದ್ದಂತೆಯೇ ನಾಗರಿಕ ಸೇವೆಗೆ (Civil Services) ಸೇರಲು ಗಂಭೀರ ಸಿದ್ಧತೆ ಆರಂಭಿಸಿದರು.
ಪದವಿ ಮುಗಿದ ನಂತರ ವಂದನಾ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದಾಗ, ಅವರು ಲಕ್ಷಾಂತರ ರೂಪಾಯಿ ವೆಚ್ಚದ ಯಾವುದೇ ಕೋಚಿಂಗ್ ಸಂಸ್ಥೆಗಳಿಗೆ ಸೇರಲಿಲ್ಲ. ಬದಲಿಗೆ ಮನೆಯನ್ನೇ ಓದುವ ಕೋಣೆಯನ್ನಾಗಿ ಮಾಡಿಕೊಂಡರು. ಇಂಟರ್ನೆಟ್ನಲ್ಲಿ ಸಿಗುವ ಉಚಿತ ಮಾಹಿತಿಯನ್ನು ಬಳಸಿಕೊಂಡರು. ಯೂಟ್ಯೂಬ್ನಲ್ಲಿ ಲಭ್ಯವಿರುವ ಪ್ರಮುಖ ಅಕಾಡೆಮಿಕ್ ಉಪನ್ಯಾಸಗಳನ್ನು ವೀಕ್ಷಿಸುತ್ತಿದ್ದರು. ಆನ್ಲೈನ್ ಇ-ಪುಸ್ತಕಗಳು ಹಾಗೂ ಪಿಡಿಎಫ್ ಮೆಟೀರಿಯಲ್ಗಳ ಮೂಲಕ ನೋಟ್ಸ್ ಮಾಡಿಕೊಳ್ಳುತ್ತಿದ್ದರು.
ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ
ಮಾಧ್ಯಮ ವರದಿಗಳ ಪ್ರಕಾರ, ಪರೀಕ್ಷೆಯ ಸಿದ್ಧತೆಯ ಸಮಯದಲ್ಲಿ ವಂದನಾ ದಿನಕ್ಕೆ ಸುಮಾರು 15 ರಿಂದ 16 ಗಂಟೆಗಳ ಕಾಲ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದರು. ಸರಿಯಾದ ಸ್ಟ್ರಾಟಜಿ ಮತ್ತು ಕಠಿಣ ಪರಿಶ್ರಮವೇ ಅವರ ಯಶಸ್ಸಿನ ಸೀಕ್ರೆಟ್.
ನಿರಂತರ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿತು. 2021ರ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಬಂದಾಗ ವಂದನಾ ಅವರ ಹೆಸರು ಸಾಧಕರ ಪಟ್ಟಿಯಲ್ಲಿತ್ತು. ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 330ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ಪ್ರಸ್ತುತ ವಂದನಾ ಮೀನಾ ಅವರು ಗುಜರಾತ್ನ ಜುನಾಗಢ ಜಿಲ್ಲೆಯ ಕೆಸೋಡ್ ಪ್ರದೇಶದಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಫೀಸ್ ಕೊಡಲು ಸಾಧ್ಯವಿಲ್ಲ ಎಂದು ಕಂಗೆಡುವ ಗ್ರಾಮೀಣ ಭಾಗದ ಮತ್ತು ಬಡ ವಿದ್ಯಾರ್ಥಿಗಳಿಗೆ ವಂದನಾ ಮೀನಾ ಅವರ ಈ ಸಾಧನೆ ಒಂದು ಬೆಳಕಿನ ಕಿಂಡಿಯಾಗಿದೆ. ಸಾಧಿಸುವ ಛಲವಿದ್ದರೆ ಸೌಲಭ್ಯಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ಇವರೇ ಸಾಕ್ಷಿ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ