ಗುಜರಾತ್ ಮಾದರಿಯಲ್ಲಿ ಅಭ್ಯರ್ಥಿ ಆಯ್ಕೆ: ಈ ಬಾರಿ ಹಾಸನ ಟಿಕೆಟ್ ಸಿಗುವ ಅನುಮಾನ ವ್ಯಕ್ತಿಪಡಿಸಿದ ಪ್ರೀತಂಗೌಡ

ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಪ್ಲ್ಯಾನ್ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹಾಸನ ಟಿಕೆಟ್ ಕೈತಪ್ಪುವ ಆತಂಕ ವ್ಯಕ್ತಪಡಿಸಿದ್ದಾರೆ.

ಗುಜರಾತ್ ಮಾದರಿಯಲ್ಲಿ ಅಭ್ಯರ್ಥಿ ಆಯ್ಕೆ: ಈ ಬಾರಿ ಹಾಸನ ಟಿಕೆಟ್ ಸಿಗುವ ಅನುಮಾನ ವ್ಯಕ್ತಿಪಡಿಸಿದ ಪ್ರೀತಂಗೌಡ
ಪ್ರೀತಂಗೌಡ,
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jan 24, 2023 | 8:26 PM

ಹಾಸನ: ಗುಜರಾತ್​ನಲ್ಲಿ ಕಳೆದ ಬಾರಿ ಗೆದ್ದ ಕ್ಷೇತ್ರಗಳಲ್ಲಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಹೀಗಾಗಿ ಇದೇ ತಂತ್ರವನ್ನೂ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಅನುಸರಿಸಲು ಬಿಜೆಪಿ (BJP) ಮುಂದಾಗಿದೆಯಂತೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಲು ಪ್ಲ್ಯಾನ್ ರೂಪಿಸಲಾಗಿದ್ದು, ಹಲವರಿಗೆ ಟಿಕೆಟ್ ಕೈತಪ್ಪುವ ಭೀತಿ ಶುರುವಾಗಿದೆ. ಇದೀಗ ಆ ಪಟ್ಟಿಯಲ್ಲಿ ಹಾಸನ (Hassan) ಹಾಲಿ ಶಾಸಕ ಪ್ರೀತಂಗೌಡ (Preetham Gowda) ಸಹ ಇದ್ದಾರೆ. ಈ ಬಗ್ಗೆ ಸ್ವತಃ ಅವರೇ ಪ್ರತಿಕ್ರಿಯಿಸಿ ಮುಂಬರುವ ಚುನಾವಣೆಯಲ್ಲಿ ಹಾಸನ ಟಿಕೆಟ್ ಸಿಗುವ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಈ ಬಾರಿ ಹಾಸನ ಕ್ಷೇತ್ರದ ಟಿಕೆಟ್​ ತಪ್ಪುವ ಭೀತಿ: ಆತಂಕದ ಜೊತೆ ಅಚ್ಚರಿ ಹೇಳಿಕೆ ಕೊಟ್ಟ ಪ್ರೀತಂಗೌಡ

ಹಾಸನದಲ್ಲಿ ಇಂದು(ಜನವರಿ 24) ಸುದ್ದಿಗಾರರೊಂದಿಗೆ ಮಾತನಾಡಿದ ​ಪ್ರೀತಂಗೌಡ, ಹಾಸನ ಕ್ಷೇತ್ರದ ಶಾಸಕನಾಗಿ ಕಳೆದ ಐದು ವರ್ಷಗಳಿಂದ ಜನರ ನಡುವೆ ಕೆಲಸ ಮಾಡುತ್ತಿದ್ದೇನೆ. ಬೇರೆ ಪಕ್ಣದ ಆಕಾಂಕ್ಷಿಗಳಂತೆ ನಾನು ಕೂಡ 2023ರ ಹಾಸನ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಆಗಿದ್ದೇನೆ. ಪಕ್ಷದ ವರಿಷ್ಠರಿಗೆ ಹಾಗೂ ಹಿರಿಯರಿಗೆ ಇನ್ನೊಮ್ಮೆ ಅವಕಾಶ ಕೊಡಿ ಎಂದು ಕೇಳಿದ್ದೇನೆ ಎಂದರು. ಇದರೊಂದಿಗೆ ಮತ್ತೊಮ್ಮೆ ಹಾಸನದಿಂದ ಬಿಜೆಪಿ ಟಿಕೆಟ್ ತಮಗೆ ಅಂತಿಮ ಆಗಿಲ್ಲ ಎನ್ನುವುದನ್ನು ಪ್ರೀತಂಗೌಡ ಪುನರುಚ್ಚರಿಸಿದರು.

ನಿಮ್ಮಂತೆ ನಾನೂ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂದು ಕೌತುಕದಿಂದ ಕಾಯುತ್ತಿದ್ದೇನೆ. ಹಾಗೆಯೇ ಜೆಡಿಎಸ್ ಕಾಂಗ್ರೆಸ್ ನಲ್ಲೂ ಚರ್ಚೆ ಆಗುತ್ತಿದೆ. ನಾಮಪತ್ರ ಸಲ್ಲಿಕೆ ಆಗುವವರೆಗೂ ಜನರ ನಡುವೆ ಎಲ್ಲರೂ ಕೆಲಸ ಮಾಡುತ್ತಾರೆ. ನಾನೂ ಓರ್ವ ಆಕಾಂಕ್ಷಿಯಾಗಿ ಶಾಸಕನಾಗಿ ನಾನೂ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಯಾರನ್ನು ತೀರ್ಮಾನ ಮಾಡುತ್ತೋ ಅವರು ಅಭ್ಯರ್ಥಿ ಆಗುತ್ತಾರೆ. ನಾನು ಶಾಸಕನಾಗಿ ನಾನೂ ಅಭ್ಯರ್ಥಿ ಆಗಬೇಕು ಎಂಬ ಅಪೇಕ್ಷೆ ವ್ಯಕ್ತಪಡಿಸಿದ್ದೆನೆ. ಆದರೆ ಹಿರಿಯರ ತೀರ್ಮಾನಕ್ಕೆ ಬದ್ದ. ಕರ್ನಾಟಕದಲ್ಲಿ ಗುಜರಾತ್​ ಮಾಡೆಲ್ ಅನ್ವಯ ಆಗುತ್ತೋ ಏನೋ ನನಗೆ ಮಾಹಿತಿ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ ಚುನಾವಣೆಗಾಗಿ ಒಂದು ಸಮಿತಿ ಇರುತ್ತೆ. ಅವರು ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಸೂಕ್ತ ಎಂದು ತೀರ್ಮಾನ ಮಾಡುತ್ತಾರೆ. ಅಲ್ಲಿಯವರೆಗೆ ಕಾದು ನೋಡಬೇಕು, ನಾವೇ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಳ್ಳಲು ನಮ್ಮ ಪಕ್ಷದಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಹಾಸನ: ಜೆಡಿಎಸ್ ದಳಪತಿಗಳ​ ಭದ್ರಕೋಟೆಯಲ್ಲಿ ಗುಡುಗಿದ ಕೈ ನಾಯಕರು

ಪಕ್ಷದ ಕೋರ್ ಕಮಿಟಿ ಹಾಗು ಚುನಾವಣೆ ನಿರ್ವಹಣೆ ಸಮಿತಿ ತೀರ್ಮಾನ ಮಾಡುವವರೆಗೆ ನಾನೂ ಕೂಡ ಓರ್ವ ಆಕಾಂಕ್ಷಿ ಅಷ್ಟೇ. ರಾಜ್ಯದ 224 ಕ್ಷೇತ್ರದಲ್ಲು ಕೂಡ ಅಭ್ಯರ್ಥಿ ಯಾರೆಂದು ಇನ್ನೂ ತೀರ್ಮಾನ ಆಗಿಲ್ಲ. ನಾನು ಬಿಜೆಪಿ ಶಾಸಕನಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಸರ್ಕಾರ ಅನುದಾನ ಕೊಟ್ಟಿದೆ. ನಾನು ಶಾಸಕನಾಗಿ ಕೆಲಸ ಮಾಡಿದ್ದೆನೆ. ಇದು ಪಕ್ಷದ ಕೆಲಸ ಮಾಡಿದಂತೆ. ನಾನು ಮಾಡಿರುವ ಕೆಲಸ ಅಭ್ಯರ್ಥಿ ಪರವಾಗಿ ಇರುತ್ತೆ. ಬೇರೆ ಕ್ಷೇತ್ರದಲ್ಲಿ ಹೋಗಿ ಹೋರಾಟ ಮಾಡಬೇಕು ಎಂದರೆ ತಿರಸ್ಕಾರ ಮಾಡಲು ಆಗಲ್ಲ. ಹಾಗಾಗಿ ಪಕ್ಷದ ತೀರ್ಮಾನ ಕಾದು ನೋಡಬೇಕು. ಹಾಸನದಲ್ಲಿ ಬೇರೆಯವರಿಗೆ ಅವಕಾಶ ನೀಡಿ ಪ್ರೀತಂಗೌಡ ಇನ್ನೊಂದು ಕ್ಷೇತ್ರ ಗೆಲ್ಲಬಹುದು ಎಂದು ರಾಷ್ಟ್ರೀಯ ನಾಯಕರಿಗೆ ಅನ್ನಿಸಬಹುದು. ಆಗ ಇಲ್ಲಿಗೆ ಬೇರೆಯವರಿಗೆ ಕೊಟ್ಟು ನನಗೆ ಬೇರೆ ಕೊಟ್ಟರೆ ನಾನು ಸ್ಪರ್ಧೆ ಮಾಡುವುದಕ್ಕೆ ಆಗಲ್ಲ ಎಂದು ಹೇಳುವುದಕ್ಕೆ ಆಗಲ್ಲ. ಹಾಗಾಗಿ ಅವರ ತೀರ್ಮಾನ ತೆಗೆದುಕೊಳ್ಳುವವರೆಗೆ ಕಾದು ನೊಡುತ್ತೇನೆ. ಅವರು ಏನು ಹೇಳಿತ್ತಾರೋ ಅದನ್ನ ಪಾಲಿಸುತ್ತೇನೆ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಸ್ಪಷ್ಟಪಡಿಸುವ ಮೂಲಕ ಪರೋಕ್ಷವಾಗಿ ಟಿಕೆಟ್ ಕೈತಪ್ಪುವ ಆತಂಕ ವ್ಯಕ್ತಪಡಿಸಿದರು.

ಹಾಸನದಲ್ಲಿ 4 ಕ್ಷೇತ್ರ ಗೆಲ್ಲಲು ಸೂಚನೆ

ಹಾಸನ ಜಿಲ್ಲೆಯಲ್ಲಿ 4 ಕ್ಷೇತ್ರ ಗೆಲ್ಲಿಸಿಕೊಳ್ಳಬೇಕು. ಬಿಜೆಪಿ ಗೆಲುವಿನಲ್ಲಿ ನಿಮ್ಮದು ಕೊಡುಗೆ ಇರಬೇಕು ಎಂದು ಹೇಳಿದಾರೆ. ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿಟಿ ರವಿ, ಗೋಪಾಲಯ್ಯ ಅವರು ನಮ್ಮ ಪಕ್ಷದ ಜಿಲ್ಲಾ ಅಧ್ಯಕ್ಷರ ಸುರೇಶ್ ಅವರು ಎಲ್ಲಾ ಹಿರಿಯರ ಮುಖಂಡರ ಜೊತೆ ಸೇರಿ ನಾಲ್ಕು ಕ್ಷೇತ್ರ ಗೆಲ್ಲಬೇಕು ಎನ್ನುವುದು ವರಿಷ್ಠರ ಅಪೇಕ್ಷೆಯಾಗಿದೆ. ನಿಮ್ಮ ಕೈಲಾದ ಶ್ರಮ ಹಾಕಬೇಕು ಎಂದು ಸೂಚನೆ ಕೊಟ್ಟಿದಾರೆ ಅದರಂತೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಬೇರೆ ಪಕ್ಷದ ಎರಡನೇ ಹಂತದ ಪ್ರಮುಖ ಕಾರ್ಯಕರ್ತರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸ ಆಗುತ್ತದೆ. ಇದಕ್ಕಾಗಿ ತಂತ್ರ ಮಾಡಿದ್ದೇವೆ, ಐದುನೂರು ಸಾವಿರ ಓಟ್ ಹಾಕಿಸುವ ಶಕ್ತಿ ಇರುವ ನಾಯಕರನ್ನು ಸೆಳೆಯುತ್ತೇವೆ. ಘಟಾನುಘಟಿ ನಾಯಕರಾರು ಬಿಜೆಪಿಗೆ ಬರಲ್ಲ, ಬಿಜೆಪಿ ಕಷ್ಟ ಎನ್ನುವ ಕಾರಣಕ್ಕೆ ದೊಡ್ಡವರು ಬರಲ್ಲ. ಇದೆಲ್ಲವನ್ಮು ಮೀರಿ ಪಕ್ಷ ಸಂಘಟನೆ ಕಾರ್ಯ ಚೆನ್ನಾಗಿ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ