
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections) ಸಮೀಪಿಸುತ್ತಿದ್ದು, ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು (Karnataka Politics) ಗರಿಗೆದರಿವೆ. ರಾಹುಲ್ ಗಾಂಧಿ (Rahul Gandhi) ಪಾದಯಾತ್ರೆಯ ನಂತರ ಕಾಂಗ್ರೆಸ್ನಲ್ಲಿ ಹೊಸ ಉತ್ಸಾಹ ಮೈಗೂಡಿದ್ದರೆ, ಸತತ ಕಾರ್ಯಾಗಾರಗಳ ಮೂಲಕ ಜೆಡಿಎಸ್ ಸಿದ್ಧತೆ ಚುರುಕುಗೊಳಿಸಿದೆ. ಬಿಜೆಪಿಯು ಸಂಕಲ್ಪ ಯಾತ್ರೆಗಳ ಮೂಲಕ ಪಕ್ಷದ ಸಂಘಟನೆಗೆ ಬಲ ತುಂಬಲು ಯತ್ನಿಸುತ್ತಿದೆ. ಹಳೆ ಮೈಸೂರು ಭಾಗದ 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಜೆಡಿಎಸ್ ನಾಯಕರು ಎಲ್ಲ ಬಗೆಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ಈ ನಡುವೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಲು ಆಸಕ್ತಿ ತೋರಿದ್ದ ಕೆಜಿಎಫ್ ಬಾಬು ನಿವಾಸಕ್ಕೆ ಭಾನುವಾರ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ. ಕೆಜಿಎಫ್ ಬಾಬು ಅವರೇ ಇಬ್ರಾಹಿಂ ಅವರಿಗೆ ಕಾರ್ ಕಳಿಸಿ, ತಮ್ಮ ಮನೆಗೆ ಕರೆಸಿಕೊಂಡಿದ್ದರು. ಈ ವೇಳೆ ಇಬ್ರಾಹಿಂ ಜೆಡಿಎಸ್ಗೆ ಸೇರ್ಪಡೆಗೊಳ್ಳುವಂತೆ ಕೆಜಿಎಫ್ ಬಾಬುಗೆ ಆಹ್ವಾನ ನೀಡಿದರು ಎಂದು ಮೂಲಗಳು ಹೇಳಿವೆ. ಚಿಕ್ಕಪೇಟೆಯಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿರುವ ಬಾಬು ಅವರಿಗೆ ಈವರೆಗೆ ಕಾಂಗ್ರೆಸ್ ಸ್ಪಷ್ಟ ಉತ್ತರ ನೀಡಿಲ್ಲ. ಆದರೆ ಮತ್ತೋರ್ವ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ.ದೇವರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಘೋಷಣೆ ಅನುಮಾನ ಎಂಬ ಕಾರಣದಿಂದಾಗಿ ಅವರು ಜೆಡಿಎಸ್ ಸೇರ್ಪಡೆ ಬಗ್ಗೆ ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮೊದಲು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದ ಕೆಜಿಎಫ್ ಬಾಬು ಚಿಕ್ಕಪೇಟೆ ಮೇಲೆ ಕಣ್ಣಿಟ್ಟಿದ್ದರು. ಜನರ ಗಮನವನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಹಲವು ವಿಶೇಷ ಕಾರ್ಯಗಳನ್ನು ಆರಂಭಿಸಿದ್ದರು. ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮೊದಲಿನಿಂದಲೂ ಹಿಡಿತ ಹೊಂದಿರುವ ಮತ್ತೋರ್ವ ನಾಯಕ ಆರ್.ವಿ.ದೇವರಾಜ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಕ್ಷೇತ್ರದ ವಿದ್ಯಮಾನಗಲನ್ನು ಚರ್ಚಿಸಿದ್ದರು. ಅಲ್ಪಸಂಖ್ಯಾತರು ನಿರ್ಣಾಯಕ ಸಂಖ್ಯೆಯಲ್ಲಿರುವ (ಸುಮಾರು 40 ಸಾವಿರ) ಈ ಕ್ಷೇತ್ರದಿಂದ ಸ್ಪರ್ಧಿಸಲು ಮುಸ್ಲಿಂ ಮುಖಂಡ ಮನ್ಸೂರ್ ಖಾನ್ ಕೂಡ ಆಸಕ್ತಿ ಹೊಂದಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಚಿಕ್ಕಪೇಟೆಯಿಂದ ಸ್ಪರ್ಧೆಗೆ ಅವಕಾಶ ಸಿಗುವುದು ಕಾಂಗ್ರೆಸ್ನಲ್ಲಿ ಕಷ್ಟ ಎಂಬುದನ್ನು ಮನಗಂಡಂತೆ ಇರುವ ಕೆಜಿಎಫ್ ಬಾಬು ಇದೀಗ ಜೆಡಿಎಸ್ ಪರ ಒಲವು ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಶ್ರೀಮಂತ ರಾಜಕಾರಿಣಿಗಳ ಪೈಕಿ ಒಬ್ಬರಾಗಿರುವ ಕೆಜಿಎಫ್ ಬಾಬು ಕಳೆದ ವಿಧಾನ ಪರಿಷತ್ ಚುನಾವಣೆ ವೇಳೆ ₹ 1,741 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದ ಅವರು ₹ 350 ಕೋಟಿ ಯೋಜನೆ ರೂಪಿಸಿ, 50 ಸಾವಿರ ಮನೆಗಳಿಗೆ ತಲಾ ₹ 5,000 ಮೌಲ್ಯದ ಚೆಕ್ ವಿತರಿಸಿದ್ದರು. ಕ್ಷೇತ್ರದ ಸ್ಲಂ ನಿವಾಸಿಗಳಿಗಾಗಿ ಬಹುಮಹಡಿ ಕಟ್ಟಡ ನಿರ್ಮಿಸಿ, ತಲಾ ಒಂದೊಂದು ಫ್ಲಾಟ್ ನೀಡುವ ಯೋಜನೆಯೂ ನನಗಿದೆ ಎಂದು ಹೇಳಿಕೊಂಡಿದ್ದರು.
‘ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಲಿ, ಬಿಡಲಿ ನಾನು ಸ್ಪರ್ಧಿಸುವುದು ಖಚಿತ’ ಎನ್ನುವ ಇವರ ಹೇಳಿಕೆಯು ವಿವಾದಕ್ಕೀಡಾಗಿತ್ತು. ಕೆಪಿಸಿಸಿ ಶಿಸ್ತು ಸಮಿತಿಯು ನೊಟೀಸ್ ಜಾರಿ ಮಾಡಿದ ನಂತರ ಕೆಜಿಎಫ್ ಬಾಬು ಕ್ಷಮೆ ಕೇಳಿದ್ದರು.
Published On - 2:44 pm, Sun, 23 October 22