Chikmagalur Assembly Election Results 2023: ಸತತ ನಾಲ್ಕು ಬಾರಿ ವಿಜಯ ಸಾಧಿಸಿದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿನಿಧಿಸುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ, ಈಗ ಅವರಿಗೆ ಆಪ್ತ ಎಚ್ಡಿ ತಮ್ಮಯ್ಯ ಟಕ್ಕರ್ ನೀಡಲು ಮುಂದಾಗಿದ್ದಾರೆ. 1999ರ ವಿಧಾನಸಭಾ ಚುನಾವಣೆ ಬಳಿಕ ಸೋಲು ಕಾಣದ ರವಿಗೆ ಈ ಬಾರಿ ಮತ್ತೆ ಬಿಜೆಪಿ ಮಣೆ ಹಾಕಿದೆ. ಆದರೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಬದಲಿಸಿ ಬಿಜೆಪಿಯಿಂದ ಕರೆತಂದ ಎಚ್ಡಿ ತಮ್ಮಯ್ಯಗೆ ಟಿಕೆಟ್ ನೀಡಿದೆ. ಅತ್ತ ಜೆಡಿಎಸ್ನಿಂದ ತಿಮ್ಮಶೆಟ್ಟಿ ಸ್ಪರ್ಧಿಸಿದ್ದರೆ ಎಎಪಿಯಿಂದ ಈರೇಗೌಡ ಸ್ಪರ್ಧಿಸಿದ್ದಾರೆ.
1999ರಲ್ಲಿ ಸುಮಾರು 900 ಮತಗಳಿಂದ ಸೋತಿದ್ದ ಸಿಟಿ ರವಿ ನಂತರದ ಚುನಾವಣೆಯಲ್ಲಿ ಕ್ರಮವಾಗಿ 25 ಸಾವಿರ, 15 ಸಾವಿರ, 11 ಸಾವಿರ, 26 ಮತಗಳಿಂದ ಗೆಲುವು ಸಾಧಿಸುತ್ತಾ ಬಂದಿದ್ದಾರೆ.
ಈ ಬಾರಿ ಸಿಟಿ ರವಿಯನ್ನು ಸೋಲಿಸಲು ಎಲ್ಲಾ ಪಕ್ಷಗಳು ಒಗ್ಗೂಡಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸ್ನೇಹಿತರಾದ ಸಿಟಿ ರವಿ ಹಾಗೂ ತಮ್ಮಯ್ಯ ಪರಸ್ಪರ ಜಿದ್ದಾಜಿದ್ದಿಗೆ ಇಳಿದಿದ್ದಾರೆ. 1999ರ ಬಳಿಕ ಸಿಟಿ ರವಿಗೆ ಇದು ಅತ್ಯಂತ ತುರುಸಿನ ಸ್ಪರ್ಧೆಯಾಗುವ ಸಾಧ್ಯತೆ ಇದೆ.