Jagadish Shettar: ಚುನಾವಣೆಯಿಂದ ಹಿಂದೆ ಸರಿಯುವಂತೆ ಹೈಕಮಾಂಡ್ ಕರೆ; ಏನಂದರು ಜಗದೀಶ್ ಶೆಟ್ಟರ್?

ಹೈಕಮಾಂಡ್ ತೀರ್ಮಾನ ಏನೇ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ ಎಂದು ಶೆಟ್ಟರ್ ಹೇಳಿದ್ದಾರೆ.

Follow us
|

Updated on:Apr 11, 2023 | 5:31 PM

ಹುಬ್ಬಳ್ಳಿ: ಚುನಾವಣೆಯಿಂದ ಹಿಂದೆ ಸರಿಯುವಂತೆ ಹೈಕಮಾಂಡ್​​​ನಿಂದ ಕರೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ (Jagadish Shettar), ನಿನ್ನೆಯವರೆಗೆ ನನಗೆ ಬಿಜೆಪಿ (BJP) ಟಿಕೆಟ್​ ಕನ್ಫರ್ಮ್​ ಎಂದು ಹೇಳಿದ್ದರು. ಆದರೆ ಇಂದು ದೂರವಾಣಿ ಕರೆ ಮಾಡಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಸ್ಪರ್ಧೆ ಮಾಡಬಾರದು ಎಂಬುದಾಗಿದ್ದ ಎರಡು-ಮೂರು ತಿಂಗಳ ಹಿಂದೆ ನನಗೆ ಹೇಳಬೇಕಿತ್ತು. ಆದರೆ, ಇವತ್ತು ನನಗೆ ಹೇಳುತ್ತಾರೆ ಎಂಬುದು ಬಹಳ ಬೇಸರ ಉಂಟುಮಾಡಿತು. 30 ವರ್ಷ ಪಕ್ಷ ಕಟ್ಟಿದವರಿಗೆ ಹೀಗೆ ಹೇಳಿದ್ದು ಬೇಸರ ಉಂಟುಮಾಡಿತು ಎಂದು ಹೇಳಿದ್ದಾರೆ.

ಹಿರಿಯ ನಾಯಕರಿಗೆ ಗೌರವ ಕೊಡುವ‌ ಕೆಲಸ ಆಗಬೇಕಿದೆ. ನೀವು ಹೇಳಿರುವುದು ನನಗೆ ಒಪ್ಪಿಗೆ ಇಲ್ಲ ಎಂದಿದ್ದೇನೆ. ನಿಮ್ಮ ಸಮೀಕ್ಷೆ ಪಾಸಿಟಿವ್ ಇದೆ ಎಂದು ಹಿರಿಯರು ಹೇಳಿದ್ದಾರೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಇಲ್ಲ. ಪಕ್ಷ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ನಿಷ್ಠರಾದವರಿಗೆ ಗೌರವ ಇಲ್ಲ ಅಂತಾ ಬೇಜಾರಾಯಿತು. ವರಿಷ್ಟರು ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ವರಿಷ್ಠರು ನನಗೆ ಅವಕಾಶ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ ಎಂದರು.

ಇದನ್ನೂ ಓದಿ: ಒಟ್ಟೊಟ್ಟಿಗೇ ಸುತ್ತಾಡಿ ಪಕ್ಷ ಕಟ್ಟಿ, ಜತೆಯಾಗಿಯೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಯಡಿಯೂರಪ್ಪ, ಈಶ್ವರಪ್ಪ

ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡೇ ಮಾಡ್ತೇನೆ. ಈಗಾಗಲೇ ಕ್ಷೇತ್ರದಲ್ಲಿ ನಾನು ಚುನಾವಣೆ ಪ್ರಚಾರ ಮಾಡುತ್ತಿದ್ದೇನೆ. ನನಗೆ ಕ್ಷೇತ್ರದ ಜನರ ಅಶೀರ್ವಾದ ಇದೆ, ಹಾಗಾಗಿ ಸ್ಪರ್ಧಿಸುತ್ತೇನೆ. ಕ್ಷೇತ್ರದ ಜನ ಪ್ರೀತಿ ವಿಶ್ವಾಸದಿಂದ ಗೌರವದಿಂದ ನೋಡಿಕೊಳ್ತಿದ್ದಾರೆ ಎಂದರು.

ಇನ್ನೂ 15 ವರ್ಷ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ

ನಾನು ಇನ್ನೂ ಆರೋಗ್ಯವಾಗಿ ಇದ್ದೇನೆ. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಜನ ನನ್ನ ಬಯಸುತ್ತಿದ್ದಾರೆ. ರಾಜಕಾರಣದಲ್ಲಿ ನಾನು ಮುಂದುವರೆಯುತ್ತೇನೆ. ವರಿಷ್ಠರ ತೀರ್ಮಾನಕ್ಕೆ ಎರಡು ದಿನ ಕಾಯುತ್ತೇನೆ. ವ್ಯತಿರಿಕ್ತ ತೀರ್ಮಾನ ಬಂದರೆ ಮಾದ್ಯಮಗಳ ಎದುರು ಬರುತ್ತೇನೆ. ಇನ್ನೂ 15 ವರ್ಷ ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಹೈಕಮಾಂಡ್ ತೀರ್ಮಾನ ಏನೇ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ ಎಂದು ಶೆಟ್ಟರ್ ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Tue, 11 April 23