Kanakapura Assembly Constituency: ಸೋಲಿಲ್ಲದ ಸರದಾರ ಡಿಕೆ ಶಿವಕುಮಾರ್ ಮಣಿಸಲು ಆರ್ ಅಶೋಕ್ ಅಸ್ತ್ರ, ಇಲ್ಲಿ ಗೆಲುವು ಯಾರದು?

|

Updated on: May 08, 2023 | 3:16 PM

ಎರಡು ದಶಕಗಳ ಹಿಂದೆ ಜೆಡಿಎಸ್‌ ಪಾಲಿಗೆ ಭದ್ರಕೋಟೆಯಾಗಿದ್ದ ಕನಕಪುರ, ಈಗ ಡಿಕೆ ಶಿವಕುಮಾರ್ ಅವರ ಮುಷ್ಟಿಯಲ್ಲಿದೆ. ಆದ್ರೆ ಡಿಕೆ ಶಿವಕುಮಾರ್ ಅವರನ್ನು ಮಣಿಸಲು ಬಿಜೆಪಿ ಒಕ್ಕಲಿಗ ಅಸ್ತ್ರ ಪ್ರಯೋಗಿಸಿದೆ.

Kanakapura Assembly Constituency: ಸೋಲಿಲ್ಲದ ಸರದಾರ ಡಿಕೆ ಶಿವಕುಮಾರ್ ಮಣಿಸಲು ಆರ್ ಅಶೋಕ್ ಅಸ್ತ್ರ, ಇಲ್ಲಿ ಗೆಲುವು ಯಾರದು?
ಕನಕಪುರ
Follow us on

ಕನಕಪುರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತವರು ಕ್ಷೇತ್ರವಾದ ಕನಕಪುರದಲ್ಲಿ ಕಾಂಗ್ರೆಸ್‌ ನದ್ದೆ ಸರ್ವಾಧಿಕಾರ, ಎದುರಾಳಿಗಳೇ ಇಲ್ಲದೇ ನಿರಾಯಾಸವಾಗಿ ಚುನಾವಣೆ ನಡೆಯುವ ಈ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ರಣತಂತ್ರ ಹೆಣೆದು ಆರ್ ಅಶೋಕ್​ ಅವರನ್ನು ಕಣಕ್ಕಿಳಿಸಿದೆ. ಎರಡು ದಶಕಗಳ ಹಿಂದೆ ಜೆಡಿಎಸ್‌ ಪಾಲಿಗೆ ಭದ್ರಕೋಟೆಯಾಗಿದ್ದ ಕನಕಪುರ, ಈಗ ಡಿಕೆ ಶಿವಕುಮಾರ್ ಅವರ ಮುಷ್ಟಿಯಲ್ಲಿದೆ. ಆದ್ರೆ ಡಿಕೆ ಶಿವಕುಮಾರ್ ಅವರನ್ನು ಮಣಿಸಲು ಬಿಜೆಪಿ ಒಕ್ಕಲಿಗ ಅಸ್ತ್ರ ಪ್ರಯೋಗಿಸಿದೆ. ಸಚಿವರೂ ಆಗಿರುವ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಆರ್ ಅಶೋಕ್‌ ಕಣದಲ್ಲಿದ್ದಾರೆ. ಬಂಡೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

1957ರಿಂದಲೂ ಕನಕಪುರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಆದರೆ, 1983ರ ನಂತರ ಈ ಕ್ಷೇತ್ರ ಪಿಜಿಆರ್ ಸಿಂಧ್ಯಾ ಅವರ ತೆಕ್ಕೆಗೆ ಬಿತ್ತು. ಸತತ 6 ಬಾರಿ ಕನಕಪುರದಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆ ಸಿಂಧ್ಯಾ ಅವರಿಗೆ ಸಲ್ಲುತ್ತದೆ. ಜನತಾ ಪಕ್ಷದಿಂದ 2 ಬಾರಿ, ಜೆಡಿಯು ಅಭ್ಯರ್ಥಿಯಾಗಿ 2 ಬಾರಿ, ಜೆಡಿಎಸ್ ಅಭ್ಯರ್ಥಿಯಾಗಿ 2 ಬಾರಿ ಪಿಜಿಆರ್ ಸಿಂಧ್ಯಾ ಗೆದ್ದಿದ್ದರು. ಆದರೆ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆದ ಬಳಿಕ ಕನಕಪುರ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಯ್ತು. ಸಾತನೂರಿನಿಂದ ಕನಕಪುರಕ್ಕೆ ಬಂದ ಡಿ.ಕೆ. ಶಿವಕುಮಾರ್, 2008ರಿಂದ ಇಲ್ಲಿಯವರೆಗೂ ಪ್ರತಿ ಚುನಾವಣೆಯಲ್ಲೂ ಗೆಲುವನ್ನು ಹಿಂಬಾಲಿಸಿಬಂದಿದ್ದಾರೆ. ಡಿಕೆಶಿಗೆ ಎದುರಾಳಿಗಳಾಗಿದ್ದ ಪಿ.ಜಿ.ಆರ್.ಸಿಂಧ್ಯಾ, ಈಗ ಡಿಕೆಶಿ ಬೆನ್ನಿಗೆ ನಿಂತಿದ್ದಾರೆ.

ಇನ್ನು ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ, ಕನಕಪುರ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತವೊಂದಿದ್ದ ದುಂತೂರು ವಿಶ್ವನಾಥ್ ಸಹಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇನ್ನು 2018ರಲ್ಲಿ 48 ಸಾವಿರ, 2013ರಲ್ಲಿ 68 ಸಾವಿರ, 2008ರಲ್ಲಿ 61 ಸಾವಿರ ಮತ ಪಡೆದಿರುವ ಜೆಡಿಎಸ್ ಇಲ್ಲಿ ನೆಲೆ ಕಂಡುಕೊಳ್ಳುವ ಲಕ್ಷಣಗಳಿವೆ. ಸದ್ಯ ಈ ಬಾರಿ ಜೆಡಿಎಸ್ ನಾಗರಾಜ್ ಅವರನ್ನು ಕಣಕ್ಕಿಳಿಸಿದೆ. ಕಳೆದ ಹಲವು ವರ್ಷದಿಂದ ಸೋಲನ್ನೆ ಕಾಣದ ಡಿ.ಕೆ.ಶಿವಕುಮಾರ್ ಅವರಿಗೆ ಸಹೋದರ ಡಿ.ಕೆ.ಸುರೇಶ್ ಅವರು ಆನೆ ಬಲ ಇದ್ದಂತೆ. ಕ್ಷೇತ್ರದಲ್ಲಿ ಪ್ರಚಾರ ನಡೆಸದಿದ್ದರೂ, ಗೆಲುವು ಗ್ಯಾರೆಂಟಿ ಎಂಬ ಲೆಕ್ಕಚಾರಗಳಲ್ಲಿ ಅವರಿದ್ದಾರೆ.

ಇದನ್ನೂ ಓದಿ: Kanakapura Assembly Polls: ಕನಕಪುರದಲ್ಲಿ ಪತಿಯ ಪರ ಮತಬೇಟೆಗಿಳಿದ ಉಷಾ ಶಿವಕುಮಾರ್, ಮನೆಮನೆ ತಿರುಗಿ ಮತಯಾಚನೆ

ಕೆಪಿಸಿಸಿ ಅಧ್ಯಕ್ಷರೇ ಆಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯೇ ಕ್ಷೇತ್ರದಲ್ಲಿಲ್ಲ. ಡಿಕೆ ಸಹೋದರರ ಅಣತಿಯಂತೆ ಇಲ್ಲಿನ ಕಾರ್ಯಕರ್ತರು ನಡೆದುಕೊಳ್ಳುವುದರಿಂದ ಒಳ
ಜಗಳ, ಪೈಪೋಟಿಗೆ ಅವಕಾಶಗಳೇ ಇಲ್ಲ.

1983 ರಿಂದ 2008ರವರೆಗೆ(6 ಬಾರಿ) ಪಾರುಪತ್ಯ ಮೆರೆದಿದ್ದ ಪಿ.ಜಿ.ಆರ್.ಸಿಂಧ್ಯಾ ಅವರು 2013ರಲ್ಲಿ ಡಿಕೆಶಿಗೆ ಸರ್ಧೆ ನೀಡಿ, 68 ಸಾವಿರ ಮತ ಪಡೆದರು. ಈಗ ಡಿಕೆಶಿ ಜೊತೆ ಗುರುತಿಸಿಕೊಂಡಿದ್ದಾರೆ. ಬಳಿಕ ಜೆಡಿಎಸ್‌ನಿಂದ ಫೀನಿಕ್ಸಿ ಹಕ್ಕಿಯಂತೆ ಎದ್ದು ಬಂದಿದ್ದ ವಿಶ್ವನಾಥ್, ಕ್ಷೇತ್ರ ಮರುವಿಂಗಡಣೆಯ ನಂತರ 2008ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 7 ಸಾವಿರ ಮತಗಳ ಅಂತರದಿಂದ ಡಿಕೆಶಿ ಎದುರು ಮಂಡಿಯೂರಿದ್ದರು. ಇನ್ನು  2018ರ ಚುನಾವಣೆಯಲ್ಲಿ ಡಿಕೆಶಿ ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡ ವಿರುದ್ದ 79,909 ಮತಗಳಿಂದ ಗೆಲುವು ಸಾಧಿಸಿದ್ದರು.

ಬಂಡೆಗೆ ಎದುರಾಳಿಯಾದ ಆರ್ ಅಶೋಕ್

ಡಿಕೆ ಶಿವಕುಮಾರ್ ಒಕ್ಕಲಿಗರು ಹಾಗೂ ಆರ್.ಅಶೋಕ್ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕನಕಪುರ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ 1 ಲಕ್ಷಕ್ಕೂ ಹೆಚ್ಚಿವೆ. ಹೀಗಾಗಿ ಕನಕಪುರ ಜನ ಆರ್​ ಅಶೋಕ್​ರ ಮೇಲೂ ಒಲವು ತೋರಿಸುವ ಸಾಧ್ಯತೆ ಇದೆ. ಆರ್. ಅಶೋಕ್ ಎಂಟ್ರಿಯಿಂದ ಒಕ್ಕಲಿಗರ ವೋಟ್ ಒಡೆದು ಚುನಾವಣೆಯಲ್ಲಿ ಪರಿಣಾಮ ಬೀರಬಹುದು. ಕನಕಪುರ ಕ್ಷೇತ್ರದಲ್ಲಿ ಸದ್ಯ 2,21,1591
ಮತದಾರರು ಇದ್ದು, ಒಕ್ಕಲಿಗರೇ ಒಂದು ಲಕ್ಷದಷ್ಟು ಇದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ