ಕರುನಾಡಲ್ಲೇ ಆವರಿಸಿದ ಕಾಂಗ್ರೆಸ್‌ ಸುನಾಮಿ, ಕರಾವಳಿಯಲ್ಲಿ ಮಾತ್ರ ಅರಳಿದ ಕಮಲ

|

Updated on: May 13, 2023 | 7:49 PM

ಆಡಳಿತ ವಿರೋಧಿ ಅಲೆ ಇಡೀ ರಾಜ್ಯವನ್ನೇ ವ್ಯಾಪಿಸಿ ಬಿಟ್ಟಿದೆ. ನಿನ್ನೆ ಮೊನ್ನೆವರೆಗೂ ಅತಂತ್ರ ವಿಧಾನಸಭೆ ಅನ್ನುವಂತಿದ್ದ ಚಿತ್ರಣ ಇವತ್ತು ಬೆಳಗಾಗ್ತಿದ್ದಂತೆ ಸಂಪೂರ್ಣ ಬದಲಾಗಿದೆ. ಕಾಂಗ್ರೆಸ್ ಪರ ಎದ್ದಿದ್ದ ಸುನಾಮಿ ಇಡೀ ರಾಜ್ಯವನ್ನೇ ಆವರಿಸಿದೆ. ಅಷ್ಟಕ್ಕೂ ರಾಜ್ಯದ ಯಾವ್ಯಾವ ಕಡೆ ಕಾಂಗ್ರೆಸ್‌ ಎಷ್ಟೆಷ್ಟು ಸೀಟ್‌ ಗೆದ್ದಿದೆ? ಬಿಜೆಪಿ ಮಾನ ಉಳಿದಿದ್ದೆಲ್ಲಿ ಎನ್ನುವ ವಿವರ ಇಲ್ಲಿದೆ.

ಕರುನಾಡಲ್ಲೇ ಆವರಿಸಿದ ಕಾಂಗ್ರೆಸ್‌ ಸುನಾಮಿ, ಕರಾವಳಿಯಲ್ಲಿ ಮಾತ್ರ ಅರಳಿದ ಕಮಲ
Follow us on

ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಕಂಪನ. ಕಿತ್ತೂರು ಕರ್ನಾಟಕದಲ್ಲೂ ಕೈಪಡೆಯದ್ದೇ ಅಬ್ಬರ. ಮಧ್ಯ ಕರ್ನಾಟಕ, ಮಲೆನಾಡು, ಹಳೇ ಮೈಸೂರು ಎಲ್ಲೇ ಹೋಗಿ ಇಡೀ ರಾಜ್ಯ ಸಂಪೂರ್ಣ ಕಾಂಗ್ರೆಸ್‌ ಮಯವಾಗಿದೆ. ಕಾಂಗ್ರೆಸ್‌ನ ಈ ದೊಡ್ಡ ಸುನಾಮಿ ನಡುವೆಯೂ ಕರಾವಳಿಯಲ್ಲಿ ಮಾತ್ರ ಕಮಲ ಅರಳಿದೆ. ಒಳಗೊಳಗೆ ಹುಟ್ಟಿಕೊಂಡಿದ್ದ ಅಂಥಾದ್ದೊಂದು ಆಡಳಿತ ವಿರೋಧಿ ಅಲೆ ಇಡೀ ರಾಜ್ಯವನ್ನೇ ವ್ಯಾಪಿಸಿ ಬಿಟ್ಟಿದೆ. ನಿನ್ನೆ ಮೊನ್ನೆವರೆಗೂ ಅತಂತ್ರ ವಿಧಾನಸಭೆ ಎನ್ನುವಂತಿದ್ದ ಚಿತ್ರಣ ಇವತ್ತು ಬೆಳಗಾಗುತ್ತಿದ್ದಂತೆಯೇ ಸಂಪೂರ್ಣ ಬದಲಾಗಿದೆ. ಕಾಂಗ್ರೆಸ್ ಪರ ಎದ್ದಿದ್ದ ಸುನಾಮಿ ಇಡೀ ರಾಜ್ಯವನ್ನೇ ಆವರಿಸಿದೆ. ಅಷ್ಟಕ್ಕೂ ರಾಜ್ಯದ ಯಾವ್ಯಾವ ಕಡೆ ಕಾಂಗ್ರೆಸ್‌ ಎಷ್ಟೆಷ್ಟು ಸೀಟ್‌ ಗೆದ್ದಿದೆ? ಬಿಜೆಪಿ ಮಾನ ಉಳಿದಿದ್ದೆಲ್ಲಿ ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ತಂತ್ರಗಾರಿಕೆಗಳು ಫೇಲ್, ಜೆಡಿಎಸ್ ಭದ್ರಕೋಟೆ ಛಿದ್ರಗೊಳಿಸಿದ ಕಾಂಗ್ರೆಸ್

ಕಲ್ಯಾಣ ಕರ್ನಾಟಕದಲ್ಲಿ 41 ಸ್ಥಾನಗಳ ಪೈಕಿ 25 ರಲ್ಲಿ ಕೈಗೆ ಗೆಲುವು

ಕಲ್ಯಾಣ ಕರ್ನಾಟಕ ಹೇಳಿಕೇಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ನೆಲ. ಇದೇ ನೆಲದಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳಿಸುತ್ತೇ ಅನ್ನೋ ನಿರೀಕ್ಷೆ ನಿಜವಾಗಿದೆ. ಇಲ್ಲಿರೋ 41 ಸ್ಥಾನಗಳ ಪೈಕಿ 25 ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ರೆ, ಬಿಜೆಪಿ ಗೆದ್ದಿರೋದು 11 ಸ್ಥಾನ ಮಾತ್ರ. ಅದರಲ್ಲೂ ಬಳ್ಳಾರಿಯ ಜಿಲ್ಲೆಯ ಐದೂ ಕ್ಷೇತ್ರಗಳು ಕಾಂಗ್ರೆಸ್‌ ಮಡಿಲಿಗೆ ಬಿದ್ದಿವೆ. ಯಾದಗಿರಿ, ರಾಯಚೂರು, ಕಲಬುರಗಿಯಲ್ಲೂ ಕಾಂಗ್ರೆಸ್‌ ಪಾರಮ್ಯ ಮೆರೆದಿದೆ.

ಕಿತ್ತೂರು ಕರ್ನಾಟಕದಲ್ಲೂ ಕಾಂಗ್ರೆಸ್‌ ದಿಗ್ವಿಜಯ

ಕಿತ್ತೂರು ಕರ್ನಾಟಕದಲ್ಲೂ ಕಾಂಗ್ರೆಸ್‌ ದಿಗ್ವಿಜಯ ಸಾಧಿಸಿದ್ದು, 44 ಕ್ಷೇತ್ರಗಳ ಪೈಕಿ ಬರೋಬ್ಬರಿ 28 ರಲ್ಲಿ ಕಾಂಗ್ರೆಸ್‌ ಸುನಾಮಿ ಎದ್ದಿದೆ. 15 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ವಿಷ್ಯ ಅಂದ್ರೆ ಬೆಳಗಾವಿಯ 18ಕ್ಷೇತ್ರಗಲ್ಲಿ 11 ಕ್ಷೇತ್ರ ಕಾಂಗ್ರೆಸ್‌ ಮಡಿಲಿಗೆ ಬಿದ್ದಿವೆ. ವಿಜಯಪುರದಲ್ಲಿ 6, ಬಾಗಲಕೋಟೆಯಲ್ಲಿ 5 ಸೀಟ್‌ಗಳು ಕಾಂಗ್ರೆಸ್‌ ತೆಕ್ಕೆಗೆ ಜಾರಿವೆ.

ಇದನ್ನೂ ಓದಿ: ಟಿಕೆಟ್ ಸಿಗದೇ ಬಂಡೆದ್ದು ಬೇರೆ-ಬೇರೆ ಪಕ್ಷಕ್ಕೆ ಹೋಗಿದ್ದ ಜಂಪಿಂಗ್ ಸ್ಟಾರ್ಸ್ ಗೆದ್ರಾ? ಸೋತ್ರಾ? ಇಲ್ಲಿದೆ ವಿವರ

ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಸುಂಟರಗಾಳಿ

ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಸುಂಟರಗಾಳಿ ಎದ್ದಿದ್ದು, 19 ಕ್ಷೇತ್ರಗಲ್ಲಿ 16 ಕ್ಷೇತ್ರಗಳು ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿವೆ. ಇಲ್ಲಿಯ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಗೆದ್ದಿದ್ದು ಮೂರೇ ಕ್ಷೇತ್ರ ಮಾತ್ರ. ಹಾವೇರಿ, ದಾವಣಗೆರೆ, ಚಿತ್ರದುರ್ಗದಲ್ಲಿ ಬಿಜೆಪಿ ಧೂಳೀಪಟವಾಗಿದ್ದು, ಜಿಲ್ಲೆಗೊಂದರಂತೆ ಮೂರು ಕ್ಷೇತ್ರ ಗೆದ್ದಿದೆ

ಹಳೇ ಮೈಸೂರಿನ 9 ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಾರಮ್ಯ

ಕಾಂಗ್ರೆಸ್‌ನ ಪ್ರಚಂಡ ಬಹುಮತದಲ್ಲಿ ಹಳೇ ಮೈಸೂರಿನ 9 ಜಿಲ್ಲೆಗಳ ಪಾತ್ರ ದೊಡ್ಡದಿದೆ. 57 ಕ್ಷೇತ್ರಗಳ ಪೈಕಿ 36 ರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಅದ್ರಲ್ಲೂ ಸಿದ್ದು ತವರು ಮೈಸೂರಿನಲ್ಲಿ 8, ತುಮಕೂರಲ್ಲಿ 7, ಹಾಗೂ ಮಂಡ್ಯದಲ್ಲಿ 5 ಸೀಟ್‌ ಬಾಚಿಕೊಂಡಿದೆ. ಭದ್ರಕೋಟೆಯಲ್ಲಿ ಜೆಡಿಎಸ್‌ ಗೆದ್ದಿದ್ದು 14 ಕ್ಷೇತ್ರ ಸ್ಥಾನ ಮಾತ್ರ. ಜೆಡಿಎಸ್‌ಗೆ ಹಾಸನದಲ್ಲಿ 4 ಸ್ಥಾನ ಬಂದ್ರೆ, ಕಳೆದ ಬಾರಿ ಕ್ಲೀನ್‌ ಸ್ವೀಪ್‌ ಮಾಡಿದ್ದ ಮಂಡ್ಯದಲ್ಲಿ ಜೆಡಿಎಸ್‌ಗೆ ಸಿಕ್ಕಿದ್ದು 1 ಸ್ಥಾನ ಮಾತ್ರ. ಇನ್ನು ಮೋದಿ ಕರೆಸಿ ಅಬ್ಬರದ ಪ್ರಚಾರ ನಡೆಸಿದ್ದ ಬಿಜೆಪಿಗೆ ಸಿಕ್ಕಿದ್ದು 5 ಸ್ಥಾನ ಮಾತ್ರ. ಉಳಿದಂತೆ ಮಲೆನಾಡಿನಲ್ಲೂ ಕಾಂಗ್ರೆಸ್‌ ದಿಗ್ವಿಜಯ ಸಾಧಿಸಿದ್ದು, 12 ಸ್ಥಾನಗಳ ಪೈಕಿ 8 ರಲ್ಲಿ ಗೆದ್ದಿದೆ. ಚಿಕ್ಕಮಗಳೂರಿನಲ್ಲಂತೂ ಕ್ಲೀನ್ ಸ್ವೀಪ್‌ ಮಾಡಿದೆ.

ಕರಾವಳಿಯಲ್ಲಿ ಮಾತ್ರ ಅರಳಿದ ಕಮಲ

ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಸುನಾಮಿ ಎದ್ದಿದ್ರು, ಕರಾವಳಿಯಲ್ಲಿರೋ ಬಿಜೆಪಿ ಅಲೆಯನ್ನ ತಡೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ರಾಜ್ಯದ ಉದ್ದಗಲಕ್ಕೂ ಬಿಜೆಪಿ ಧೂಳೀಪಟವಾಗಿದ್ರೆ, ಕರಾವಳಿಯಲ್ಲಿ ನೆಲೆ ಉಳಿಸಿಕೊಂಡಿದೆ. 19 ಸ್ಥಾನಗಳ ಪೈಕಿ 13 ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, 6 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ಗೆ ಜಯಗಳಿಸಿದೆ . ಅದರಲ್ಲೂ ಉಡುಪಿಯನ್ನ ಕ್ಲೀನ್‌ ಸ್ವೀಪ್‌ ಮಾಡಿದ ಬಿಜೆಪಿ 5 ಸ್ಥಾನ ಬಾಚಿಕೊಂಡಿದೆ.

ಒಟ್ಟಿನಲ್ಲಿ ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್‌ ಹರಡಿಕೊಂಡಿದ್ದು, ಕರಾವಳಿಯಲ್ಲಿ ಮಾತ್ರ ಬಿಜೆಪಿ ಗಟ್ಟಿಯಾಗಿ ನಿಂತಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 7:39 pm, Sat, 13 May 23