ಶೆಟ್ಟರ್ ಮಣಿಸಲು ಗೌಪ್ಯ ರಣತಂತ್ರ; ಮತದಾನಕ್ಕೂ ಮುನ್ನವೇ ಗೆಲುವಿನ ಸಂಕೇತ ತೋರಿದ ಅಮಿತ್‌ ಶಾ

ಕಾಂಗ್ರೆಸ್​​ನಿಂದ ಜಗದೀಶ ಶೆಟ್ಟರ್ (Jagadish Shettar) ಕಣಕ್ಕಿಳಿದಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವೂ ಸೇರಿದಂತೆ ಜಿಲ್ಲೆಯ 7 ಕ್ಷೇತ್ರದಲ್ಲೂ ಗೆಲುವಿಗೆ ರಣತಂತ್ರ ರೂಪಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೋಮವಾರ ರಾತ್ರಿ ಮಹತ್ವದ ಸಭೆ ನಡೆಸಿದರು.

ಶೆಟ್ಟರ್ ಮಣಿಸಲು ಗೌಪ್ಯ ರಣತಂತ್ರ; ಮತದಾನಕ್ಕೂ ಮುನ್ನವೇ ಗೆಲುವಿನ ಸಂಕೇತ ತೋರಿದ ಅಮಿತ್‌ ಶಾ
ಕೇಂದ್ರ ಸಚಿವ ಅಮಿತ್​ ಶಾ
Image Credit source: businesstoday.in

Updated on: Apr 24, 2023 | 11:15 PM

ಹುಬ್ಬಳ್ಳಿ: ಕಾಂಗ್ರೆಸ್​​ನಿಂದ ಜಗದೀಶ ಶೆಟ್ಟರ್ (Jagadish Shettar) ಕಣಕ್ಕಿಳಿದಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವೂ ಸೇರಿದಂತೆ ಜಿಲ್ಲೆಯ 7 ಕ್ಷೇತ್ರದಲ್ಲೂ ಗೆಲುವಿಗೆ ರಣತಂತ್ರ ರೂಪಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೋಮವಾರ ರಾತ್ರಿ ಮಹತ್ವದ ಸಭೆ ನಡೆಸಿದರು. ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಸುಮಾರು ಒಂದು ಗಂಟೆ ಕಾಲ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ, ಜಿಲ್ಲೆಯ ಪ್ರಮುಖರು ಹಾಗೂ ಮಂಡಳ ಅಧ್ಯಕ್ಷರ ಜೊತೆ ಸೇರಿ ಕೆಲವು ನಾಯಕರ ಜತೆ ರಹಸ್ಯ ಸಭೆ ನಡೆಸಿದ ಅವರು ನಂತರ ಹೊರಬಂದು ಗೆಲುವಿನ ಸಂಕೇತ ಪ್ರದರ್ಶಿಸಿದರು.

ಸಭೆಗೂ ಮುನ್ನ ಮಾತನಾಡಿದ್ದ ಅಮಿತ್ ಶಾ, ಜಗದೀಶ ಶೆಟ್ಟರ್ ಅವರು ಪಕ್ಷ ತ್ಯಜಿಸಿ ಕಾಂಗ್ರೆಸ್​​ಗೆ ಸೇರಿದ್ದರಿಂದ ನಷ್ಟವಾಗದು. ಶೆಟ್ಟರ್‌ಗೆ ಮಾತ್ರ ಟಿಕೆಟ್‌ ಕೈತಪ್ಪಿಲ್ಲ. ಹಲವರಿಗೆ ಟಿಕೆಟ್ ನೀಡಲಾಗಿಲ್ಲ. ಏಕೆ ಟಿಕೆಟ್ ನೀಡುತ್ತಿಲ್ಲ ಎಂಬುದನ್ನು ಅವರಿಗೆ ತಿಳಿಸಿದ್ದೆವು. ಅದನ್ನು ಇಲ್ಲಿ ಬಹಿರಂಗಪಡಿಸಲಾಗದು. ಮತದಾರರಿಗೆ ಯಾವ ರೀತಿ ಮನವರಿಕೆ ಮಾಡಿಕೊಡಬೇಕೋ ಆ ರೀತಿ ತಿಳಿಸುತ್ತೇವೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಮತ ಬ್ಯಾಂಕ್ ಹೊಂದಿದೆ. ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಜಗದೀಶ್ ಶೆಟ್ಟರ್ ಸೋಲುತ್ತಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಶೆಟ್ಟರ್‌ ಕಾಂಗ್ರೆಸ್‌ಗೆ ಹೋಗಿದ್ದರಿಂದ ನಷ್ಟವಾಗಲ್ಲ, ಬಿಜೆಪಿಯೇ ಗೆಲ್ಲಲಿದೆ; ಹುಬ್ಬಳ್ಳಿಯಲ್ಲಿ ಅಮಿತ್ ಶಾ

ಮಂಗಳವಾರ ವಿಜಯಪುರದಲ್ಲಿ ಶಾ ಪ್ರಚಾರ

ಅಮಿತ್ ಶಾ ಅವರು ವಿಜಯಪುರ ಜಿಲ್ಲೆಯಲ್ಲಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ನಾಳೆ ಮಧ್ಯಾಹ್ನ ಭೋಜನ ಸವಿಯುವ ಶಾ, ಮಧ್ಯಾಹ್ನ 2ರಿಂದ 3 ಗಂಟೆವರೆಗೆ ಸಾರ್ವಜನಿಕ ಸಭೆಯಲ್ಲಿ ಶಾ ಭಾಗಿಯಾಗಲಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋಮನಗೌಡ ಪರ ಮತಯಾಚಿಸಲಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಜಿಲ್ಲೆಯ 8 ಕ್ಷೇತ್ರಗಳ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ. ನಂತರ ಶಾ ಅವರು ಯಾದಗಿರಿಗೆ ತೆರಳಲಿದ್ದಾರೆ.

ಇಂದು (ಸೋಮವಾರ) ಚಾಮರಾಜನಗರದ ಗುಂಡ್ಲುಪೇಟೆ, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ರೋಡ್​​ ಶೋ ನಡೆಸಿ ಮತ ಯಾಚನೆ ಮಾಡಿದ್ದಾರೆ. ಜತೆಗೆ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:14 pm, Mon, 24 April 23