Karnataka Legislative Council: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಭರಾಟೆಯಲ್ಲಿ ಖಾಲಿಯಾಗುತ್ತಿದೆ ಕರ್ನಾಟಕದ ಮೇಲ್ಮನೆ!

|

Updated on: Apr 22, 2023 | 1:00 PM

ಅಸೆಂಬ್ಲಿ ಚುನಾವಣೆ: ರಾಜೀನಾಮೆ ಭರಾಟೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಂಖ್ಯೆ ಇಳಿಮುಖವಾಗಿದೆ!

Karnataka Legislative Council: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಭರಾಟೆಯಲ್ಲಿ ಖಾಲಿಯಾಗುತ್ತಿದೆ ಕರ್ನಾಟಕದ ಮೇಲ್ಮನೆ!
ಅಸೆಂಬ್ಲಿ ಚುನಾವಣೆ: ರಾಜೀನಾಮೆ ಭರಾಟೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಂಖ್ಯೆ ಇಳಿಮುಖವಾಗಿದೆ!
Follow us on

ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಭರಾಟೆಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ರಾಜೀನಾಮೆ ಪರ್ವ ನಡೆದಿದೆ. ಇದರಿಂದ ಕರ್ನಾಟಕ ವಿಧಾನ ಪರಿಷತ್‌ನ (Karnataka Legislative Council) ಒಟ್ಟಾರೆ ಸಂಖ್ಯಾಬಲ ಕುಸಿದಿದೆ! ಈ ವಾರದ ಆರಂಭದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ರಾಜೀನಾಮೆಯೊಂದಿಗೆ, 75 ಸದಸ್ಯ ಬಲದ ಮೇಲ್ಮನೆಯನ್ನು ತೊರೆದವರ ಸಂಖ್ಯೆ ಅರ್ಧ ಡಜನ್‌ಗೆ ತಲುಪಿದೆ. ಮೇ 10 ರಂದು ಅಸೆಂಬ್ಲಿಗೆ ನಡೆಯಲಿರುವ ಚುನಾವಣೆಗೆ (Karnataka Assembly Elections 2023) ಪೂರ್ವಭಾವಿಯಾಗಿ ಬಿಜೆಪಿಯ ಸಿ ಪುಟ್ಟಣ್ಣ, ಆರ್. ಶಂಕರ್, ಲಕ್ಷ್ಮಣ ಸವದಿ ಮತ್ತು ಬಾಬುರಾವ್ ಚಿಂಚನಸೂರ್ ಅವರು ರಾಜೀನಾಮೆ ನೀಡಿದ್ದರೆ, ಕಾಂಗ್ರೆಸ್‌ನ ಸಿಎಂ ಇಬ್ರಾಹಿಂ ಕಳೆದ ವರ್ಷ ರಾಜೀನಾಮೆ ನೀಡಿ ಜೆಡಿಎಸ್‌ಗೆ ಸೇರಿದ್ದರು. ಅವರನ್ನು ಪ್ರಾದೇಶಿಕ ಸಂಘಟನೆಯ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ಹೆಚ್ ವಿಶ್ವನಾಥ್ ಅವರು ರಾಜೀನಾಮೆ ನೀಡುವುದಾಗಿ ಹೇಳಿದ್ದರೂ ಅಧಿಕೃತವಾಗಿ ರಾಜೀನಾಮೆ (Resignation) ನೀಡುವುದಕ್ಕೆ ತೊಡಕುಂಟಾಗಿದೆ. ಈ ಮಧ್ಯೆ ಇತರೆ ಪಕ್ಷಗಳ ಕೆಲ ಮೇಲ್ಮನೆ ಸದಸ್ಯರೂ ಸಹ ಈ ಬಾರಿ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರಲ್ಲಿ ಕೆಲವರು ಚುನಾವಣೆ ಗೆದ್ದರೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಇದು ಅಭೂತಪೂರ್ವವಾದುದು ನಿಜ, ಆದರೆ ಅಚ್ಚರಿಯ ಸಂಗತಿಯೆಂದರೆ ಹೆಚ್ಚಿನ ಸದಸ್ಯರು ಒಂದೇ ಪಕ್ಷಕ್ಕೆ ಸೇರಿದರಾಗಿದ್ದಾರೆ. “ಹೊರಟ್ಟಿ ಅವರೇ ಜೆಡಿಎಸ್ ತೊರೆದು ಕಳೆದ ವರ್ಷ ಮೇ ತಿಂಗಳಲ್ಲಿ ಬಿಜೆಪಿ ಸೇರಿದ್ದರು. ಪರಿಸ್ಥಿತಿ ತುಂಬಾ ನಿರಾಶಾದಾಯಕವಾಗಿದೆ. ಹಾಗೆ ನೋಡಿದರೆ ಚುನಾವಣೆಗಳಲ್ಲಿ ಸೋತವರಿಗೆ ಅವಕಾಶ ಕಲ್ಪಿಸುವ ಮನೆಯಾಗಿ ವಿಧಾನ ಪರಿಷತ್‌ ಮಾರ್ಪಟ್ಟಿದೆ. ರಾಜಕೀಯ ಪಕ್ಷಗಳ ನಾಯಕರಿಗೆ ಪುನರ್ವಸತಿ ಕೇಂದ್ರದಂತೆ ಕಾಣುತ್ತಿದೆ.

ವಾಸ್ತವವಾಗಿ ಮೇಲ್ಮನೆ ಅಂದರೆ ಅಕ್ಷರಶಃ ಅದು ಮೇಲ್​ಸ್ತರದ ಮನೆಯೇ ಸರಿ. ಅದು ಚಿಂತಕರ ಚಾವಡಿ ಎಂಬ ಹೆಸರು ಗಳಿಸಿದ ಮನೆ. ಹಾಗಾಗಿ, ರಾಜಕೀಯ ಪಕ್ಷಗಳು ಇನ್ನಾದರೂ ಮೇಲ್ಮನೆಯ ಗೌರವ, ಗುಣಮಟ್ಟವನ್ನು ಕಾಪಾಡುವ ಜರೂರತ್ತು ಬಹಳಷ್ಟಿದೆ. ಆದರೆ ಈಗಿನ ರಾಜಕೀಯ ಸಮೀಕರಣಗಳು ಸತತವಾಗಿ ಬದಲಾಗುತ್ತಿರುವಾಗ ಇದು ಸಾಧ್ಯವಾದೀತಾ?

ಕರ್ನಾಟಕದ ಮೇಲ್ಮನೆಗೆ 115 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಆದರೆ ಕೆಳಮನೆಗೆ ನಡೆಯುವ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸಲು ಇಷ್ಟು ದೊಡ್ಡ ಸಂಖ್ಯೆಯ ಶಾಸಕರು ರಾಜೀನಾಮೆ ನೀಡುವುದನ್ನು ನೋಡಿಲ್ಲ. ಸಾಮಾನ್ಯವಾಗಿ, ಸದಸ್ಯರು ಪರಿಷತ್ತಿಗೆ ಸೇರಲು ವಿಧಾನಸಭೆಗೆ ರಾಜೀನಾಮೆ ನೀಡುತ್ತಾರೆ! ಅಂತಹಯ ಉದಾತ್ತ ಸಂಪ್ರದಾಯವಿದೆ ಕರ್ನಾಟಕ ಮೇಲ್ಮನೆಗೆ. ಆದರೆ ಈಗ ಎಲ್ಲವೂ ಉಲ್ಟಾ ಆಗುತ್ತಿದೆ!

ಮೇಲ್ಮನೆಯಲ್ಲಿ ಉಳಿದಿರುವ 69 ಸದಸ್ಯರ ಪೈಕಿ ಇನ್ನೂ ಮೂವರ ಅವಧಿ ಮೇ -ಜೂನ್ ಮಧ್ಯೆ ಅಂತ್ಯವಾಗಲಿದೆ. ಮೋಹನ್ ಕುಮಾರ್ ಕೊಂಡಜ್ಜಿ ಮತ್ತು ಪಿ.ಆರ್. ರಮೇಶ್ ಅವರ ಅಧಿಕಾರಾವಧಿ ಮೇ ಮಧ್ಯದಲ್ಲಿ ಮುಕ್ತಾಯವಾಗಲಿದ್ದು, ಜೂನ್ ಆರಂಭದಲ್ಲಿ ಸಿಎಂ ಲಿಂಗಪ್ಪ ಅವರ ಅಧಿಕಾರಾವಧಿ ಮುಗಿಯಲಿದೆ. ಮೂವರೂ ಕಾಂಗ್ರೆಸ್ ನವರು. ಇದರಿಂದ ಒಟ್ಟು ಎಂಎಲ್‌ಸಿಗಳ ಸಂಖ್ಯೆ 66ಕ್ಕೆ ಕುಸಿಯಲಿದೆ. ಸುಮಾರು 42 ವರ್ಷಗಳ ನನ್ನ ಅನುಭವದಲ್ಲಿ ಪರಿಷತ್ತಿನ ಸದಸ್ಯರಾಗಿ ಅನೇಕ ಒಳ್ಳೆಯ ವ್ಯಕ್ತಿಗಳನ್ನು ಕಂಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಚರ್ಚೆಯ ಗುಣಮಟ್ಟ ಕುಸಿತ ಕಂಡಿಲ್ಲ. ಸರಕಾರ ಹಾಗೂ ರಾಜಕೀಯ ಪಕ್ಷಗಳು ಈ ಹಿಂದೆ ಕಲೆ, ಸಂಸ್ಕೃತಿ, ಸಂಗೀತ ಹೀಗೆ ನಾನಾ ಕ್ಷೇತ್ರಗಳಲ್ಲಿ ಪರಿಣತರಾದ ಬುದ್ಧಿಜೀವಿಗಳು, ಪರಿಣತರನ್ನು ಪರಿಷತ್ತಿಗೆ ಕರೆತರುತ್ತಿದ್ದವು, ಆದರೆ ಈಗಿಲ್ಲ ಎಂದು ಹೊರಟ್ಟಿ ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Sat, 22 April 23