ಕಾಣದ ಅಭಿವೃದ್ಧಿ: ಕೆಲವೆಡೆ ಮತದಾನಕ್ಕೆ ಬಹಿಷ್ಕಾರ; ಯಾವೆಲ್ಲ ಗ್ರಾಮಗಳಲ್ಲಿ ಗೊತ್ತಾ?

ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಅಭಿವೃದ್ಧಿ ಮಾಡದ ಹಿನ್ನೆಲೆ ವಿವಿಧ ಕ್ಷೇತ್ರಗಳ 6 ಕ್ಕೂ ಹೆಚ್ಚು ಗ್ರಾಮಗಳ ನಿವಾಸಿಗಳು ತಮ್ಮ ಮತದಾನದ ಬಹಿಷ್ಕಾರ ಹಾಕಿದ್ದಾರೆ. ಎಲ್ಲೆಲ್ಲಿ ಬಹಿಷ್ಕಾರ ಹಾಕಿದ್ದಾರೆ ಎಂಬುದು ಇಲ್ಲಿದೆ ಮಾಹಿತಿ.

ಕಾಣದ ಅಭಿವೃದ್ಧಿ: ಕೆಲವೆಡೆ ಮತದಾನಕ್ಕೆ ಬಹಿಷ್ಕಾರ; ಯಾವೆಲ್ಲ ಗ್ರಾಮಗಳಲ್ಲಿ ಗೊತ್ತಾ?
ಕರ್ನಾಟಕದ ವಿವಿಧ ಗ್ರಾಮಗಳಲ್ಲಿ ಮತದಾನಕ್ಕೆ ಬಹಿಷ್ಕಾರ
Rakesh Nayak Manchi

Updated on: May 10, 2023 | 4:16 PM

ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಮತದಾನ (Voting) ಪ್ರಕ್ರಿಯೆ ನಡೆಯುತ್ತಿದೆ. ಹೆಚ್ಚಿನವರು ತಮ್ಮ ಅಮೂಲ್ಯ ಮತವನ್ನು ಚಲಾಯಿಸುತ್ತಿದ್ದಾರೆ. ಆದರೆ, ರಾಜ್ಯದ ಕೆಲವೆಡೆ ಮತದಾನ ಬಹಿಷ್ಕರಿಸಲಾಗಿದೆ. ಇದಕ್ಕೆ ಕಾರಣ ಕಾಣದ ಅಭಿವೃದ್ಧಿ. ತಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ ಎಂದು ಆರೋಪಿಸಿ ಇಂದು ಕೆಲವು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ (Election Boycott) ಹಾಕಿರುವುದನ್ನು ತಿಳಿದ ಚುನಾವಣಾ ಆಯೋಗದ ಅಧಿಕಾರಿಗಳು ಗ್ರಾಮಕ್ಕೆ ಲಗ್ಗೆ ಇಟ್ಟಿದ್ದಾರೆ. ಹಾಗಾದರೆ ಯಾವೆಲ್ಲಾ ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಹಾಕಲಾಗಿದೆ? ಇಲ್ಲಿದೆ ಮಾಹಿತಿ.

ಚಾಮರಾಜನಗರದ ಚಿಕ್ಕಲಚೆಟ್ಟಿ ಗ್ರಾಮದ ನಿವಾಸಿಗಳು ತಮ್ಮ ಮನೆಗಳ ಸುತ್ತ ಸರಿಯಾದ ರಸ್ತೆ ಇಲ್ಲ ಎಂದು ಆರೋಪಿಸಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ. ಈ ಗ್ರಾಮದಲ್ಲಿ 101 ಮತದಾರರಿದ್ದು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಚಾಮರಾಜನಗರ ಡಿಸಿ ಡಿ.ಎಸ್.ರಮೇಶ್ ಗ್ರಾಮಕ್ಕೆ ಭೇಟಿ ನೀಡಿ, ಮತದಾನದ ನಂತರ ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿ ಮತಚಲಾಯಿಸುವಂತೆ ಮನವೋಲಿಸಿದರು.

ಇದನ್ನೂ ಓದಿ: Haveri: ಹೋರಿ ಸೂರ್ಯಪುತ್ರ ಹಠಾತ್ ನಿಧನ, ಮತದಾನ ಮಾಡದೆ ಕಣ್ಣೀರಿಡುತ್ತಿರುವ ಗ್ರಾಮಸ್ಥರು

ಅದೇ ರೀತಿ ಹಾಸನದ ದೊಣೆಹಳ್ಳಿ ಗ್ರಾಮ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮದ ನಿವಾಸಿಗಳು ಮೂಲ ಸೌಕರ್ಯ ಕೋರಿ ಚುನಾವಣೆ ಬಹಿಷ್ಕರಿಸಿದರು. ದೊಣೆಹಳ್ಳಿ ಗ್ರಾಮದಲ್ಲಿ 121 ಮತದಾರರಿದ್ದಾರೆ. ಅಲ್ಲದೆ, ರಾಯಚೂರು ಜಿಲ್ಲೆಯ ಕುರ್ಡಿ ಗ್ರಾಮದಲ್ಲಿಯೂ ಕಡಿಮೆ ಮತದಾನವಾಗಿದೆ. ರಸ್ತೆ ಹದಗೆಟ್ಟ ಕಾರಣ ಒಂದಷ್ಟು ಜನರು ಮತದಾನ ಮಾಡಲು ನಿರಾಕರಿಸಿದ್ದಾರೆ. ಈ ಹಿಂದೆ ಸುರಿದ ಮಳೆಯಿಂದಾಗಿ ಹದಗೆಟ್ಟ ರಸ್ತೆಗಳು ಸರಿಪಡಿಸಿದ ಹಿನ್ನೆಲೆ ಮತದಾನವನ್ನು ಬಹಿಷ್ಕರಿಸಿದ್ದಾರೆ.

ತುಮಕೂರು ಜಿಲ್ಲೆಯ ರಾಯಸಂದ್ರ ಕೊಪ್ಪದ ನಿವಾಸಿಗಳೂ ಮತದಾನ ಮಾಡದಂತೆ ಪ್ರತಿಭಟನೆ ನಡೆಸಿದ್ದು, ಮಾಹಿತಿ ತಿಳಿದ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅವರು ಗ್ರಾಮಕ್ಕೆ ಭೇಟಿ ನೀಡಿ ಮತದಾನ ಮಾಡುವಂತೆ ಮನವಿ ಮಾಡಿದರು. ದೊಡ್ಡೂರು ತಾಂಡಾದ ನಿವಾಸಿಗಳು ತಮ್ಮ ಗ್ರಾಮದಲ್ಲಿ ಮತಗಟ್ಟೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ದೊಡ್ಡೂರು ಗ್ರಾಮಕ್ಕೆ ಮತ ಹಾಕಲು 7 ಕಿ.ಮೀ ಸಂಚರಿಸಬೇಕಾಗಿದೆ ಎಂದು ಜನರು ಆರೋಪಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ರಾಜಕೀಯ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳ ಅಗ್ನಿಪರೀಕ್ಷೆಯ ಫಲಿತಾಂಶ ಮೇ 13ರಂದು ಪ್ರಕಟವಾಗಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us