ಐವರು ಮುಸ್ಲಿಂ ಶಾಸಕರಿಗೆ ಮಂತ್ರಿ ಹಾಗೂ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ

|

Updated on: May 14, 2023 | 4:25 PM

ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಬಹುಮತ ಬಂದ ಹಿನ್ನೆಲೆ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಈ ನಡುವೆ ಮುಸ್ಲಿಂ ಶಾಸಕರಿಗೆ ಮಂತ್ರಿಗಿರಿ ಹಾಗೂ ಡಿಸಿಎಂ ಸ್ಥಾನ ನೀಡಬೇಕೆಂದು ವಕ್ಫ್ ಬೋರ್ಡ್ ಅಧ್ಯಕ್ಷ ಒತ್ತಾಯಿಸಿದ್ದಾರೆ.

ಐವರು ಮುಸ್ಲಿಂ ಶಾಸಕರಿಗೆ ಮಂತ್ರಿ ಹಾಗೂ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ
ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಶಾಫಿ ಸಅದಿ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ (Karnataka Assembly Elections 2023) ಬಹುಮತ ಬಂದ ಹಿನ್ನೆಲೆ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಈ ನಡುವೆ ಮುಸ್ಲಿಂ ಶಾಸಕರಿಗೆ ಮಂತ್ರಿಗಿರಿ ಹಾಗೂ ಡಿಸಿಎಂ ಸ್ಥಾನ ನೀಡಬೇಕೆಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ (Shafi Saadi) ಬೇಡಿಕೆ ಮುಂದಿಟ್ಟಿದ್ದಾರೆ. ರಾಜ್ಯದಲ್ಲಿ ಶೇ 90 ರಷ್ಟು ಮುಸ್ಲಿಮರಿದ್ದಾರೆ. ಅದರಲ್ಲಿ ಶೇ 88 ರಷ್ಟು ಮುಸ್ಲಿಮರು ಕಾಂಗ್ರೆಸ್ (Congress) ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಹೇಳಿದರು.

224 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಮುಸ್ಲಿಮರು ಎಲೆಕ್ಷನ್​ಗೆ ನಿಂತಿದ್ದರು. ಅದರಲ್ಲಿ 9 ಜನರು ಗೆದ್ದಿದ್ದಾರೆ. ಮಾತ್ರವಲ್ಲದೆ, ರಾಜ್ಯದಲ್ಲಿ 73 ಶಾಸಕರು ಗೆಲ್ಲಲು ಮುಸ್ಲಿಮರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಿದ ಶಾಫೀ ಸಅದಿ, ನಾವು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಲು ಎಲ್ಲಾ ಮಸೀದಿಗಳಲ್ಲಿ ಅಭಿಯಾನ, ಜಾಗೃತಿ ಮಾಡಿದ್ದೆವು ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ಬಹುಮತ; ಭಟ್ಕಳದಲ್ಲಿ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿದ ಮುಸ್ಲಿಂ ಯುವಕರು

ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದಿಂದ ಆಯ್ಕೆಯಾದ ಐದು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹಾಗಾಗಿ ಈ ಬಾರಿಯ ಸರ್ಕಾರದಲ್ಲೂ ಐವರಿಗೆ ಸಚಿವ ಸ್ಥಾನ ಮತ್ತು ಒಂದು ಡಿಸಿಎಂ ಹುದ್ದೆ ನೀಡಬೇಕು. ನಾವು ಮುಖ್ಯಮಂತ್ರಿ ಸ್ಥಾನ ಕೇಳುತ್ತಿಲ್ಲ, ಕರ್ನಾಟಕ ಇತಿಹಾಸದಲ್ಲಿ ಮುಸ್ಲಿಂ ಮುಖ್ಯಮಂತ್ರಿ ಆಗಿಲ್ಲ ಎಂದರು.

ನಮ್ಮಲ್ಲಿ ಒಂಬತ್ತು ಜನ ಮುಸ್ಲಿಂ ಶಾಸಕರಿದ್ದಾರೆ ಅದರಲ್ಲಿ ಯಾರು ಸೂಕ್ತ ಎಂದು ನೋಡಿಕೊಂಡು ಕಾಂಗ್ರೆಸ್ ಪಾರ್ಟಿ ಡಿಸಿಎಂ ಸ್ಥಾನ ನೀಡಲಿ. ಒಂಬತ್ತು ಜನರಲ್ಲಿ ಯಾರಿಗಾದರೂ ಕೊಡಲಿ ಎಂದು ಆಗ್ರಹ ಮಾಡುತ್ತೇವೆ. ಹಳೆ ಮೈಸೂರು ಭಾಗದಲ್ಲಿ ಎಲ್ಲಾ ಮುಸ್ಲಿಂ ಮುಖಂಡರು ಜೆಡಿಎಸ್​ ಪಕ್ಷಕ್ಕೆ ಹೋಗಿದ್ದರು. ಆದರೂ ಮುಸ್ಲಿಮರು ಶೇ 88 ರಷ್ಟು ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿದ್ದಾರೆ ಎಂದರು. ಹಿಜಾಬ್ ಮತ್ತು ಸಾಕಷ್ಟು ವಿಚಾರದಲ್ಲಿ ಮುಸ್ಲಿಮರು ಭಯಬೀತರಾಗಿದ್ದರು. ಆ ಹಿನ್ನೆಲೆಯಲ್ಲಿ ಎಲ್ಲಾ ಮುಸ್ಲಿಮರು ಕಾಂಗ್ರೆಸ್ ಪಾರ್ಟಿಗೆ ಮತ ನೀಡಿ ಗೆಲ್ಲಿಸಿದ್ದಾರೆ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ