INDIA bloc meet: ನಾವು ಚುನಾವಣೆಯಲ್ಲಿ ಒಗ್ಗಟ್ಟಾಗಿ ಹೋರಾಡಿದ್ದೇವೆ: ಇಂಡಿಯಾ ಬಣ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ

|

Updated on: Jun 05, 2024 | 7:54 PM

ಇಂಡಿಯಾ ಒಕ್ಕೂಟವು ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಅದರ ಅನೇಕ ನಿಬಂಧನೆಗಳಿಗೆ ತನ್ನ ಮೂಲಭೂತ ಬದ್ಧತೆಯನ್ನು ಹಂಚಿಕೊಳ್ಳುವ ಎಲ್ಲಾ ಪಕ್ಷಗಳನ್ನು ಸ್ವಾಗತಿಸುತ್ತದೆ ಎಂದು ಸಭೆಯ ಆರಂಭದಲ್ಲಿ ಮಾತನಾಡಿದ ಖರ್ಗೆ ಹೇಳಿದ್ದಾರೆ.

INDIA bloc meet: ನಾವು ಚುನಾವಣೆಯಲ್ಲಿ  ಒಗ್ಗಟ್ಟಾಗಿ ಹೋರಾಡಿದ್ದೇವೆ: ಇಂಡಿಯಾ ಬಣ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ
ಇಂಡಿಯಾ ಬಣ ಸಭೆ
Follow us on

ದೆಹಲಿ ಜೂನ್ 5: ಸರ್ಕಾರ ರಚನೆಯ ಸಾಧ್ಯತೆಗಳು, ಮೈತ್ರಿಕೂಟದ ಭವಿಷ್ಯದ ಕಾರ್ಯತಂತ್ರ ಮತ್ತು ಮಾಜಿ ಮಿತ್ರರಾದ ನಿತೀಶ್ ಕುಮಾರ್ ಮತ್ತು ಎನ್ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಬೇಕೇ ಎಂಬುದರ ಕುರಿತು ಚರ್ಚಿಸಲು ಪ್ರತಿಪಕ್ಷ ಇಂಡಿಯಾ ಬಣದ (INDIA Bloc)  ನಾಯಕರು ಬುಧವಾರ ಸಭೆ ಸೇರಿದ್ದಾರೆ. ಲೋಕಸಭೆ ಚುನಾವಣೆ (Lok sabha Elections) ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರ ನಿವಾಸದಲ್ಲಿ ನಾಯಕರು ಸಭೆ ನಡೆಸಿದ್ದಾರೆ. ಬಿಜೆಪಿ 240 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ 99 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಇತ್ತ ಎನ್‌ಡಿಎ 293 ಸ್ಥಾನಗಳೊಂದಿಗೆ ಬಹುಮತವನ್ನು ಹೊಂದಿದ್ದು, ವಿಪಕ್ಷ ಮೈತ್ರಿಕೂಟ 234 ಸ್ಥಾನಗಳನ್ನು ಹೊಂದಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಮತ್ತು ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲವನ್ನು ಒಟ್ಟುಗೂಡಿಸಲು ಜನತಾ ದಳ (ಯುನೈಟೆಡ್) ಮತ್ತು ತೆಲುಗು ದೇಶಂ ಪಕ್ಷವನ್ನು ತರಬೇಕೇ  ಎಂಬುದರ ಕುರಿತು ವಿರೋಧ ಪಕ್ಷದ ನಾಯಕರು ಚರ್ಚಿಸುವ ಸಾಧ್ಯತೆಯಿದೆ. ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ಉನ್ನತ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಇಂಡಿಯಾ ಬಣದ ಸಭೆ

ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್  ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು (ಎನ್‌ಸಿಪಿ) ಪ್ರತಿನಿಧಿಸಿದರೆ, ಎಂ.ಕೆ. ಸ್ಟಾಲಿನ್ ಮತ್ತು ಟಿ.ಆರ್.ಬಾಲು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ಯಿಂದ  ಭಾಗವಹಿಸಿದ್ದರು. ಸಮಾಜವಾದಿ ಪಕ್ಷದಿಂದ (SP) ಅಖಿಲೇಶ್ ಯಾದವ್ ಮತ್ತು ರಾಮಗೋಪಾಲ್ ಯಾದವ್, ಶಿವಸೇನಾ (UBT) ನಿಂದ ಅರವಿಂದ್ ಸಾವಂತ್, ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC) ಯಿಂದ ಅಭಿಷೇಕ್ ಬ್ಯಾನರ್ಜಿ ಭಾಗಿಯಾಗಿದ್ದಾರೆ.ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) (ಸಿಪಿಐ(ಎಂ)), ಆಮ್ ಆದ್ಮಿ ಪಾರ್ಟಿ (ಎಎಪಿ), ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಂತಹ ಇತರ ಪಕ್ಷಗಳ ಪ್ರತಿನಿಧಿಗಳೂ ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿಗೆ ಸ್ವಂತವಾಗಿ ಬಹುಮತದ ಕೊರತೆ ಎದುರಾದರೂ, ಅದು ತನ್ನ ಮಿತ್ರಪಕ್ಷಗಳ ಸಹಾಯದಿಂದ ಸರ್ಕಾರ ರಚಿಸಬಹುದು. ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿ ಕ್ರಮವಾಗಿ 16 ಮತ್ತು 12 ಸ್ಥಾನಗಳನ್ನು ಗೆದ್ದಿರುವ ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಇತರ ಮೈತ್ರಿ ಪಾಲುದಾರರ ಬೆಂಬಲದೊಂದಿಗೆ ಎನ್‌ಡಿಎ ಅರ್ಧದಾರಿಯ ಗಡಿಯನ್ನು ದಾಟಿದೆ.

ಟಿಡಿಪಿ ಮತ್ತು ಜೆಡಿಯು ಈಗಾಗಲೇ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಪಕ್ಷಾಂತರದ ಸಲಹೆಗಳನ್ನು ತಳ್ಳಿಹಾಕಿದ್ದು, ಎನ್‌ಡಿಎಯಲ್ಲೇ ಉಳಿಯುವುದಾಗಿ ಸ್ಪಷ್ಟವಾಗಿ ಹೇಳಿವೆ. ಆದಾಗ್ಯೂ, ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷದ ನಾಯಕರು ಈಗಾಗಲೇ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು, ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಆರಂಭಿಕ ಭಾಷಣ ಮಾಡಿದ ಖರ್ಗೆ ಹೇಳಿದ್ದೇನು?


ಇಂಡಿಯಾ ಬಣದ  ಸಭೆಯಲ್ಲಿ ನಾನು ಆಡಿದ ಆರಂಭಿಕ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.

1. ನಾನು ಇಂಡಿಯಾ ಬಣದ ಎಲ್ಲ ಪಾಲುದಾರರನ್ನು ಸ್ವಾಗತಿಸುತ್ತೇನೆ. ನಾವು ಚೆನ್ನಾಗಿ ಹೋರಾಡಿದೆವು, ಒಗ್ಗಟ್ಟಿನಿಂದ ಹೋರಾಡಿದೆವು, ದೃಢವಾಗಿ ಹೋರಾಡಿದೆವು.

2. ಜನಾದೇಶವು ನಿರ್ಣಾಯಕವಾಗಿ ಮೋದಿಯವರ ವಿರುದ್ಧ, ಅವರ ರಾಜಕೀಯದ ವಿಷಯ ಮತ್ತು ಶೈಲಿಯ ವಿರುದ್ಧವಾಗಿದೆ. ಇದು ಸ್ಪಷ್ಟ ನೈತಿಕ ಸೋಲಿನ ಹೊರತಾಗಿ ವೈಯಕ್ತಿಕವಾಗಿ ಅವರಿಗೆ ರಾಜಕೀಯವಾಗಿ ದೊಡ್ಡ ನಷ್ಟವಾಗಿದೆ.

3. ಆದಾಗ್ಯೂ, ಅವರು ಜನರ ಇಚ್ಛೆಯನ್ನು ಬುಡಮೇಲು ಮಾಡಲು ನಿರ್ಧರಿಸಿದ್ದಾರೆ.

4. ಇಂಡಿಯಾ ಒಕ್ಕೂಟವು ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಅದರ ಅನೇಕ ನಿಬಂಧನೆಗಳಿಗೆ ತನ್ನ ಮೂಲಭೂತ ಬದ್ಧತೆಯನ್ನು ಹಂಚಿಕೊಳ್ಳುವ ಎಲ್ಲಾ ಪಕ್ಷಗಳನ್ನು ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ನೇತೃತ್ವದ ಎನ್‌ಡಿಎ ಸಭೆ ಮುಕ್ತಾಯ; ಮೋದಿಯನ್ನೇ ನಾಯಕರಾಗಿ ಆಯ್ಕೆ ಮಾಡಿದ ಮೈತ್ರಿಕೂಟ

ನಾಯಕರು ಏನಂದ್ರು?

ಚುನಾವಣೆಯ ನಂತರ ಇಂಡಿಯಾ ಬ್ಲಾಕ್‌ನ ಮೊದಲ ಸಭೆ ಇದಾಗಿದೆ. ಇಂಡಿಯಾ ಬಣವು ನಿತೀಶ್ ಕುಮಾರ್ ಮತ್ತು ಎನ್ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಬೇಕೇ ಎಂಬುದನ್ನು  ಸಭೆಯಲ್ಲಿ ಚರ್ಚಿಸಲಾಗುವುದು. ಸಂಖ್ಯಾಬಲ ಇಲ್ಲದ ಕಾರಣ ನಾವು ಸರ್ಕಾರ ರಚಿಸಬಹುದು ಎಂದು ನನಗೆ ಅನಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಹೇಳಿದ್ದಾರೆ.

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:42 pm, Wed, 5 June 24