ಮಣಿಪುರ ವಿಧಾನಸಭೆ ಚುನಾವಣೆಗೆ ಇನ್ನೊಂದೇ ದಿನ ಬಾಕಿ; ಜೆಡಿಯು ಅಭ್ಯರ್ಥಿ ಮೇಲೆ ಗುಂಡಿನ ದಾಳಿ

ಅಭ್ಯರ್ಥಿ ಸಿಂಗ್ ತನ್ನ ನಿವಾಸದಿಂದ ಸುಮಾರು 3 ಕಿಮೀ ದೂರದಲ್ಲಿರುವ ನಹರೂಪ್ ಮಖಾಪತ್‌ನಲ್ಲಿ ತನ್ನ ಕೆಲವು ಬೆಂಬಲಿಗರನ್ನು ಭೇಟಿಯಾಗುತ್ತಿದ್ದಾಗ ರಾತ್ರಿ 11.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು...

ಮಣಿಪುರ ವಿಧಾನಸಭೆ ಚುನಾವಣೆಗೆ ಇನ್ನೊಂದೇ ದಿನ ಬಾಕಿ; ಜೆಡಿಯು ಅಭ್ಯರ್ಥಿ ಮೇಲೆ ಗುಂಡಿನ ದಾಳಿ
ಪ್ರಾತಿನಿಧಿಕ ಚಿತ್ರ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Feb 27, 2022 | 4:51 PM

ದೆಹಲಿ: ಇಂಫಾಲ್ ಪೂರ್ವ ಜಿಲ್ಲೆಯ ಕ್ಷೇತ್ರಗಾವ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜನತಾ ದಳ-ಯುನೈಟೆಡ್ (JDU) ಅಭ್ಯರ್ಥಿ ವಾಂಗ್ಲೆಂಬಮ್ ರೋಹಿತ್ ಸಿಂಗ್ (Wanglembam Rohit Singh) ಅವರ ಮೇಲೆ ಶನಿವಾರ ತಡರಾತ್ರಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಣಿಪುರ ವಿಧಾನಸಭೆ  ಚುನಾವಣೆಯಲ್ಲಿ ಫೆಬ್ರವರಿ 28 ರಂದು ಮೊದಲ ಹಂತದಲ್ಲಿ ಕ್ಷೇತ್ರಗಾವ್ (Kshetrigao) ಸೇರಿದಂತೆ 37 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅಭ್ಯರ್ಥಿ ಸಿಂಗ್ ತನ್ನ ನಿವಾಸದಿಂದ ಸುಮಾರು 3 ಕಿಮೀ ದೂರದಲ್ಲಿರುವ ನಹರೂಪ್ ಮಖಾಪತ್‌ನಲ್ಲಿ ತನ್ನ ಕೆಲವು ಬೆಂಬಲಿಗರನ್ನು ಭೇಟಿಯಾಗುತ್ತಿದ್ದಾಗ ರಾತ್ರಿ 11.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಸ್ಕೂಟರ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬರು ರೋಹಿತ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಭ್ಯರ್ಥಿಯ ಚಾಲಕ ಸಪಂ ರೊನಾಲ್ಡೊ ಹೇಳಿದ್ದಾರೆ. ಬೆಂಗಾವಲು ತಂಡದ ಬೆನ್ನಟ್ಟಿದ್ದರೂ ಪ್ರದೇಶದ ಕಿರಿದಾದ ಮಾರ್ಗಗಳ ಕಾರಣದಿಂದಾಗಿ ಬಂದೂಕುಧಾರಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಸಪಂ ಹೇಳಿದ್ದಾರೆ.  42 ವರ್ಷದ ಸಿಂಗ್ ಅವರ ಎದೆಗೆ ಗುಂಡು ತಗುಲಿದ್ದು, ಅವರನ್ನು ಇಂಫಾಲ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಜೆಡಿ-ಯು ಮಣಿಪುರದ ಕಾರ್ಯದರ್ಶಿ ಬ್ರೋಜೆಂದ್ರೋ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಕ್ಷೇತ್ರಗಾವ್ ಕ್ಷೇತ್ರದ ಚುನಾವಣೆಯನ್ನು ಮುಂದೂಡುವಂತೆ ಪಕ್ಷವು ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಇಮೇಲ್ ಕಳುಹಿಸಿರುವುದಾಗಿ ಹೇಳಿದ್ದಾರೆ.

ಆತನನ್ನು ಕೊಲ್ಲಲು ಯತ್ನಿಸಿದವರು ಯಾರೆಂದು ನಮಗೆ ತಿಳಿದಿಲ್ಲ ಆದರೆ ಅವರನ್ನು ಹಿಡಿಯಬೇಕು. ಅವರು ರಾಜಕೀಯ ದ್ವೇಷಕ್ಕೆ  ಗುರಿಯಾಗಿದ್ದರು ಎಂದು ಸಿಂಗ್ ಅವರ ಅಮ್ಮ  ವಹೆಂಗ್ಬಾಮ್ ಸುರ್ಬಾಲಾ ದೇವಿ ಹೇಳಿದ್ದಾರೆ.

ಇದನ್ನೂ ಓದಿ: ಮಣಿಪುರ ವಿಧಾನಸಭೆ ಚುನಾವಣೆಗೆ ಇನ್ನೊಂದೇ ದಿನ ಬಾಕಿ; ಮನೆಯೊಂದರಲ್ಲಿ ಸ್ಫೋಟ, ಇಬ್ಬರು ದುರ್ಮರಣ