ಬೈಕ್​ ಮಾರಾಟ ಮಾಡಿ ಬಡವರಿಗಾಗಿ ಆಕ್ಸಿಜನ್​ ಖರೀದಿಸುತ್ತಿರುವ ನಟ ಹರ್ಷವರ್ಧನ್​ ರಾಣೆ

ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಹರ್ಷವರ್ಧನ್​ ರಾಣೆ ಅವರು ಈಗ ಬಡವರಿಗಾಗಿ ಆಕ್ಸಿಜನ್​ ಸಿಲಿಂಡರ್​ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ತಮ್ಮ ನೆಚ್ಚಿನ ಬೈಕ್​ ಮಾರಾಟ ಮಾಡುತ್ತಿದ್ದಾರೆ.

ಬೈಕ್​ ಮಾರಾಟ ಮಾಡಿ ಬಡವರಿಗಾಗಿ ಆಕ್ಸಿಜನ್​ ಖರೀದಿಸುತ್ತಿರುವ ನಟ ಹರ್ಷವರ್ಧನ್​ ರಾಣೆ
ಹರ್ಷವರ್ಧನ್ ರಾಣೆ

Updated on: May 03, 2021 | 10:22 AM

ಕೊರೊನಾ ವೈರಸ್​ ಎರಡನೇ ಅಲೆಗೆ ಜನರು ಕಂಗಾಲಾಗಿದ್ದಾರೆ. ದಿನದಿಂದ ದಿನಕ್ಕೆ ವಾತಾವರಣ ಬಿಗಿಯಾಗುತ್ತಿದೆ. ಸೂಕ್ತ ಸಮಯಕ್ಕೆ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಅದರಲ್ಲೂ ಆಕ್ಸಿಜನ್​ ಮತ್ತು ವೆಂಟಿಲೇಟರ್​ಗಾಗಿ ಸೋಂಕಿತರು ಪರದಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್​ ಕೂಡ ಸಿಗದವರ ಕಷ್ಟ ಹೇಳತೀರದು. ಇಂಥ ಸಮಯದಲ್ಲಿ ಕೆಲವು ಸೆಲೆಬ್ರಿಟಿಗಳು ಜನರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಅಂಥವರ ಸಾಲಿನಲ್ಲಿ ನಟ ಹರ್ಷವರ್ಧನ್​ ರಾಣೆ ಕೂಡ ಸೇರಿಕೊಂಡಿದ್ದಾರೆ.

ದೊಡ್ಡದಿರಲಿ ಚಿಕ್ಕದಿರಲಿ, ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಮಾಡುವ ಸಹಾಯ ಕೂಡ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಸೆಲೆಬ್ರಿಟಿಗಳು ಮಾದರಿ ಆಗಬೇಕು. ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಹರ್ಷವರ್ಧನ್​ ರಾಣೆ ಅವರು ಈಗ ಬಡವರಿಗಾಗಿ ಆಕ್ಸಿಜನ್​ ಸಿಲಿಂಡರ್​ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ತಮ್ಮ ನೆಚ್ಚಿನ ಬೈಕ್​ ಮಾರಾಟ ಮಾಡುತ್ತಿದ್ದಾರೆ.

ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ನನ್ನ ಮೋಟರ್​ ಸೈಕಲ್​ ಮಾರುತ್ತಿದ್ದೇನೆ. ಅದರಿಂದ ಬಂದ ಹಣದಲ್ಲಿ ಆಕ್ಸಿಜನ್​ ಖರೀದಿಸಿ ತುಂಬ ಅವಶ್ಯಕತೆ ಇರುವವರಿಗೆ ನೀಡುತ್ತೇನೆ. ಹೈದರಾಬಾದ್​ನಲ್ಲಿ ಉತ್ತಮ ಆಕ್ಸಿಜನ್​ ಸಾಂದ್ರಕಗಳನ್ನು ಖರೀದಿಸಲು ನನಗೆ ಸಹಾಯ ಮಾಡಿ’ ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ರಾಯಲ್​ ಎನ್​ಫೀಲ್ಡ್​ ಬೈಕ್​ ಫೋಟೋವನ್ನು ಅವರು ಇದರ ಜೊತೆ ಹಂಚಿಕೊಂಡಿದ್ದಾರೆ.

ಹರ್ಷವರ್ಧನ್​ ರಾಣೆ ಮಾತ್ರವಲ್ಲದೆ, ಇನ್ನೂ ಅನೇಕ ಸೆಲೆಬ್ರಿಟಿಗಳು ಇಂಥ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನಟ ಸುನೀಲ್​ ಶೆಟ್ಟಿ ಅವರು ಬೆಂಗಳೂರು ಮತ್ತು ಮುಂಬೈನಲ್ಲಿರುವ ಕೊವಿಡ್​ ಸೋಂಕಿತರಿಗೆ ಆಕ್ಸಿಜನ್​ ದೊರಕಿಸಲು ಪ್ರಯತ್ನಿಸುತ್ತಿದ್ದಾರೆ. ದೆಹಲಿಯ ಆಸ್ಪತ್ರೆಯೊಂದಕ್ಕೆ ಆಕ್ಸಿಜನ್​ ಸಿಲಿಂಡರ್​ ಕಳಿಸಿಕೊಡಲು ನಟಿ ಸುಷ್ಮಿತಾ ಸೇನ್​ ಕಷ್ಟಪಟ್ಟಿದ್ದರು. ನಟ ಜಗ್ಗೇಶ್​ ಕೂಡ ಬೆಂಗಳೂರಿನಲ್ಲಿರುವ ಸೋಂಕಿತರಿಗೆ ಆಕ್ಸಿಜನ್​ ವ್ಯವಸ್ಥೆ ಮಾಡಿದ್ದಾರೆ.

ಇನ್ನು, ಕನ್ನಡದ ನಟ ಅರ್ಜುನ್​ ಗೌಡ ಅವರು ಈ ಕಷ್ಟದ ಸಂದರ್ಭದಲ್ಲಿ ಆ್ಯಂಬುಲೆನ್ಸ್​ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ಜನರು ಅನುಭವಿಸುತ್ತಿರುವ ಯಾತನೆಯನ್ನು ನೋಡಲಾಗದೇ ಅವರು ಈ ಸೇವೆ ಮಾಡುತ್ತಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್​ ಪೊನ್ನಣ್ಣ ಕೂಡ ಹೆಲ್ಪ್​ಲೈನ್​ ಆರಂಭಿಸಿ, ಆ ಮೂಲಕ ಬಡವರ ಸಹಾಯಕ್ಕೆ ನಿಂತಿದ್ದಾರೆ. ಈ ಎಲ್ಲ ಸೆಲೆಬ್ರಿಟಿಗಳು ಜನರಿಗೆ ಮಾದರಿ ಆಗಿದ್ದಾರೆ.

ಇದನ್ನೂ ಓದಿ:

Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್​ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್​​ ಗೌಡ

ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us