
ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅವರು ತಮ್ಮ ವೈಯಕ್ತಿಕ ಜೀವನ ಹಾಗೂ ಇತ್ತೀಚಿನ ಬ್ರೇಕಪ್ (Breakup) ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಧನ್ಯಾ ವರ್ಮಾ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಾವು ಪ್ರೀತಿಸಿದ ವ್ಯಕ್ತಿ ನಿಯಂತ್ರಣ ಸಾಧಿಸುವ ಸ್ವಭಾವದವನಾಗಿದ್ದ ಹಾಗೂ ಅತಿಯಾದ ಆತ್ಮರತಿ ಗುಣ ಹೊಂದಿದ್ದ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೇವಲ ಮೂರೇ ತಿಂಗಳಲ್ಲಿ ನಿಶ್ಚಿತಾರ್ಥಕ್ಕೆ (Engagement) ಮುಂದಾಗಿದ್ದ ಆತನ ಪ್ರಸ್ತಾಪವನ್ನು ತಾವು ಮುಂದೂಡದೇ ಹೋಗಿದ್ದರೆ, ತಮ್ಮ ಜೀವನ ವಿಚ್ಛೇದನದಲ್ಲಿ ಅಂತ್ಯವಾಗುತ್ತಿತ್ತು ಎಂದು ಅನುಪಮಾ ನೋವು ಹಂಚಿಕೊಂಡಿದ್ದಾರೆ.
ತಮ್ಮ ಕಹಿ ಅನುಭವವನ್ನು ನೆನಪಿಸಿಕೊಂಡ ಅನುಪಮಾ, ‘ನಾವು ಪ್ರೀತಿ ಮಾಡಲು ಆರಂಭಿಸಿದ ಮೂರೇ ತಿಂಗಳಿಗೆ ಆತ ನಿಶ್ಚಿತಾರ್ಥದ ಮಾತು ಎತ್ತಿದ್ದ. ಮನೆಯವರನ್ನು ಭೇಟಿ ಮಾಡಿಸಿ, ಯಾವ ಜಾಗದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಬೇಕು ಎಂದು ಚರ್ಚಿಸಲು ಶುರು ಮಾಡಿದ್ದ. ಸಂಬಂಧ ಆರಂಭವಾದ ಮೂರೇ ತಿಂಗಳಿಗೆ ಇಷ್ಟೊಂದು ಆತುರ ಸರಿಯಲ್ಲ ಅನಿಸಿತು. ನನ್ನನ್ನು ಸಂಪೂರ್ಣವಾಗಿ ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಹಾಗೂ ನಟನೆಯಿಂದ ದೂರ ತಳ್ಳಲು ಈ ರೀತಿ ಆತುರಪಡುತ್ತಿದ್ದ’ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ ನಟಿ, ‘ನನ್ನನ್ನು ಗೋಲ್ಡ್ ಡಿಗ್ಗರ್ (ಹಣಕ್ಕಾಗಿ ಪ್ರೀತಿಸುವವಳು) ಎಂದು ಕಾಗೆಗಳಂತೆ ಕೂಗಾಡಿದವರಿಗೆ ಒಂದೇ ಮಾತು ಹೇಳಲು ಬಯಸುತ್ತೇನೆ. ಒಂದು ವೇಳೆ ನಾನು ಆ ನಿಶ್ಚಿತಾರ್ಥವನ್ನು ಮುಂದೂಡದೇ ಹೋಗಿದ್ದರೆ, ಇಂದು ನಮ್ಮ ಮದುವೆ ವಿಚ್ಛೇದನದಲ್ಲಿ ಮುಕ್ತಾಯವಾಗುತ್ತಿತ್ತು. ಅದು ಪ್ರೀತಿಯಾಗಿರಲಿಲ್ಲ, ಬದಲಿಗೆ ನನ್ನನ್ನು ನಿಯಂತ್ರಿಸುವ ಹತಾಶೆಯಾಗಿತ್ತು. ಈ ಮದುವೆ ಸರಿಯಲ್ಲ ಎಂಬ ಬಲವಾದ ಭಾವನೆ ನನಗಿತ್ತು’ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಬಂಧದಲ್ಲಿದ್ದಾಗ ತಮಗೆ ನೆಮ್ಮದಿ ಸಿಗಲೇ ಇಲ್ಲ ಎಂದು ಹೇಳಿದ ಅನುಪಮಾ, ‘ಆ ಸಂಬಂಧದಲ್ಲಿದ್ದಷ್ಟು ದಿನ ನನಗೆ ಶಾಂತಿ ಸಿಗಲಿಲ್ಲ. ಬದಲಿಗೆ ಯಾವಾಗಲೂ ಆತಂಕವೇ ಕಾಡುತ್ತಿತ್ತು. ನಮಗೆ ಇನ್ನೂ ವಯಸ್ಸಿದೆ, ಸ್ವಲ್ಪ ಸಮಯ ತಗೊಳ್ಳೋಣ ಅಂತ ನಾನು ಸದಾ ನಿಶ್ಚಿತಾರ್ಥವನ್ನು ಮುಂದೂಡುತ್ತಿದ್ದೆ’ ಎಂದಿದ್ದಾರೆ. ಈ ಸಂದರ್ಶನದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಇದನ್ನೂ ಓದಿ: ಟಾಕ್ಸಿಕ್ ಸಂಬಂಧದ ಕಷ್ಟ ತೆರೆದಿಟ್ಟ ನಟಿ ಅನುಪಮಾ ಪರಮೇಶ್ವರನ್
ಅನುಪಮಾ ಪರಮೇಶ್ವರನ್ ಅವರು ಸಂದರ್ಶನದಲ್ಲಿ ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ. ಕಳೆದ ಜುಲೈ ತಿಂಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ತಾವು ಕಂಟ್ರೋಲಿಂಗ್ ರಿಲೇಶನ್ಶಿಪ್ನಿಂದ ಹೊರಬಂದು ಚೇತರಿಸಿಕೊಳ್ಳುತ್ತಿರುವ ಬಗ್ಗೆ ಪೋಸ್ಟ್ ಮಾಡುತ್ತಿದ್ದರು. ಈ ಮೊದಲು ನಟ ಧ್ರುವ್ ವಿಕ್ರಮ್ ಜೊತೆ ಅವರು ಆಪ್ತವಾಗಿದ್ದರು ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.