ಪವನ್ ಕಲ್ಯಾಣ್ ಬಾಡಿಗಾರ್ಡ್ ಮನೆ ಮೇಲೆ ದಾಳಿ, ಹಲ್ಲೆ

|

Updated on: May 19, 2024 | 3:44 PM

ಜನಸೇನಾ ಪಕ್ಷ ಸಂಸ್ಥಾಪಕ, ನಟ ಪವನ್ ಕಲ್ಯಾಣ್ ರ ಭದ್ರತಾ ಸಿಬ್ಬಂದಿಯಲ್ಲಿ ಒಬ್ಬರಾದ ವೆಂಕಟ್ ಎಂಬುವರ ಮನೆಯ ಮೇಲೆ ದಾಳಿ ಮಾಡಲಾಗಿದ್ದು, ಹಲ್ಲೆ ಮಾಡಲಾಗಿದೆ.

ಪವನ್ ಕಲ್ಯಾಣ್ ಬಾಡಿಗಾರ್ಡ್ ಮನೆ ಮೇಲೆ ದಾಳಿ, ಹಲ್ಲೆ
Follow us on

ಆಂಧ್ರ ಪ್ರದೇಶದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಬಲು ಜೋರಾಗಿ ನಡೆದಿದೆ. ಮತದಾನ ಮುಗಿದಿದ್ದರೂ ಸಹ ಚುನಾವಣಾ ಕಾವು ಇನ್ನೂ ಇಳಿದಿಲ್ಲ. ಆಂಧ್ರದಲ್ಲಿ ಚುನಾವಣೆ ಎಂದರೆ ಹೊಡಿ-ಬಡಿ ಮಾಮೂಲಿ ಎಂಬಂತಾಗಿಬಿಟ್ಟಿದೆ. ಸಿಎಂ ಜಗನ್​ಗೆ ಅಲ್ಲಿ ಕಲ್ಲು ಬಿದ್ದಿದೆ. ಇದೀಗ ಜಗನ್ ಎದುರಾಳಿ ಪವನ್ ಕಲ್ಯಾಣ್​ರ (Pawan Kalyan) ಬಾಡಿಗಾರ್ಡ್​ ಒಬ್ಬರ ಮನೆ ಮೇಲೆ ದಾಳಿ ನಡೆದಿದ್ದು, ಗುಂಪೊಂದು ಮನೆ ಮೇಲೆ ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಪವನ್​ರ ಬಾಡಿಗಾರ್ಡ್​ ಸಹ ವಿಡಿಯೋ ಮಾಡಿ ತಮ್ಮ ಮೇಲಾದ ಹಲ್ಲೆ ಬಗ್ಗೆ ಮಾತನಾಡಿದ್ದಾರೆ.

ಪವನ್ ಕಲ್ಯಾಣ್​ರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ವೆಂಕಟ್ ಹೆಸರಿನ ವ್ಯಕ್ತಿಯ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ. ಕತ್ತಿ, ದೊಣ್ಣೆ, ಕಲ್ಲುಗಳನ್ನು ಹಿಡಿದುಕೊಂಡು ವೆಂಕಟ್ ಮನೆಯ ಮೇಲೆ ದಾಳಿ ಮಾಡಲಾಗಿದ್ದು ಮನೆಯ ಮುಂದಿದ್ದ ವಾಹನ, ಮನೆಯ ಒಳಗಿನ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದೆ. ಈ ದಾಳಿಗೆ ಪಕ್ಷ ವಿರೋಧವೇ ಕಾರಣ ಎನ್ನಲಾಗಿತ್ತು. ಆದರೆ ಪವನ್​ರ ಬಾಡಿಗಾರ್ಡ್ ವೆಂಕಟ್ ವಿಡಿಯೋ ಒಂದರಲ್ಲಿ ಮಾತನಾಡಿದ್ದು, ಈ ಜಗಳಕ್ಕೆ ಕುಟುಂಬ ಕಲಹ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಕಳ್ಳದೊರೆಗಳ ಲೆಕ್ಕ ಸರಿ ಮಾಡಲು ಬಂದ ಪವನ್ ಕಲ್ಯಾಣ್; ಚುನಾವಣೆ ಹೊಸ್ತಿಲಲ್ಲಿ ಪವರ್​ಫುಲ್ ಟೀಸರ್

ಪವನ್​ರ ಬಾಡಿಗಾರ್ಡ್​ ವೆಂಕಟ್ ಪುತ್ರಿಗೆ ಯಾರೋ ಒಬ್ಬ ಯುವಕ ಅಸಹ್ಯಕರವಾಗಿ ಸಂಜ್ಞೆಗಳನ್ನು ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಆ ಯುವಕನ ಮನೆಯವರು ಬಂದು ವೆಂಕಟ್ ಮನೆ ಮೇಲೆ ದಾಲಿ ಮಾಡಿದ್ದಾರೆ. ವೆಂಕಟ್​ರ ವಾಹನ ಬೀಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದಿದ್ದಾರೆ. ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ವೆಂಕಟ್ ಹೇಳುವಂತೆ ಪೊಲೀಸರು ಬಂದಿದ್ದಕ್ಕಷ್ಟೆ ತಾವು ಜೀವ ಸಹಿತ ಇರುವುದಾಗಿ ಹೇಳಿದ್ದಾರೆ.

ವೆಂಕಟ್ ಹಲವು ವರ್ಷಗಳಿಂದಲೂ ಪವನ್ ಕಲ್ಯಾಣ್ ಬಳಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಊರಿನಲ್ಲಿ ಜನಸೇನಾ ಪಕ್ಷದ ಕಾರ್ಯಕ್ರಮಗಳನ್ನು ಸಹ ಮಾಡುತ್ತಿದ್ದು, ಇದರಿಂದಾಗಿ ಸ್ಥಳೀಯ ಕೆಲವು ರಾಜಕೀಯ ಮುಖಂಡರ ವೈರಕ್ಕೂ ಗುರಿಯಾಗಿದ್ದಾರೆ. ವೆಂಕಟ್ ಮನೆ ಮೇಲೆ ದಾಳಿ ಮಾಡಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಜನಸೇನಾ ಪಕ್ಷದ ಕಾರ್ಯಕರ್ತರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ