
ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಶನ್ನ ಬಹುನಿರೀಕ್ಷಿತ ಹಾರರ್-ಕಾಮಿಡಿ ಚಿತ್ರ ‘ಭೂತ್ ಬಂಗ್ಲ’ (Bhooth Bangla) ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಹಿಂದೆ ಘೋಷಿಸಿದಂತೆ ಏಪ್ರಿಲ್ 10ರಂದು ತೆರೆಗೆ ಬರಬೇಕಿದ್ದ ಈ ಚಿತ್ರ, ಈಗ ಏಪ್ರಿಲ್ 17ಕ್ಕೆ ಮುಂದೂಡಲ್ಪಟ್ಟಿದೆ ಎಂಬ ಮಾಹಿತಿ ಕೇಳಿಬಂದಿದೆ. ಅಂದಹಾಗೆ, ಈ ಬದಲಾವಣೆಗೆ ಕಾರಣ ಆಗಿರುವುದು ‘ಧುರಂಧರ್ 2’ (Dhurandhar 2) ಸಿನಿಮಾದ ಅಬ್ಬರ. ಈ ಸಿನಿಮಾದ ಆರ್ಭಟಕ್ಕೆ ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ಹೀರೋ ಕೂಡ ಸೈಲೆಂಟ್ ಆಗಬೇಕಾಗಿದೆ.
ಬಾಕ್ಸ್ ಆಫೀಸ್ನಲ್ಲಿ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ಸುನಾಮಿ ಎಬ್ಬಿಸಿದೆ. ಚಿತ್ರಮಂದಿರಗಳಲ್ಲಿ ಬಹುತೇಕ ಸ್ಕ್ರೀನ್ಗಳನ್ನು ಈ ಚಿತ್ರವೇ ಆಕ್ರಮಿಸಿಕೊಂಡಿದೆ. ಆದ್ದರಿಂದ, ಹೊಸ ಸಿನಿಮಾಗಳಿಗೆ ಜಾಗ ಸಿಗುವುದು ಕಷ್ಟವಾಗಿದೆ. ಹಾಲಿವುಡ್ ಸ್ಟಾರ್ ಹೀರೋ ರಿಯಾನ್ ಗೋಸ್ಲಿಂಗ್ ಅವರ ‘ಪ್ರಾಜೆಕ್ಟ್ ಹೇಲ್ ಮೇರಿ’ ಚಿತ್ರ ಕೂಡ ಈ ಕಾರಣದಿಂದ ಪ್ರದರ್ಶನ ಕಾಣಲು ಪರದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದ ‘ಭೂತ್ ಬಂಗ್ಲ’ ತಂಡ, ಬಿಡುಗಡೆಯನ್ನು ಒಂದು ವಾರ ಮುಂದಕ್ಕೆ ಹಾಕಿದೆ.
ಇದು ಅತ್ಯಂತ ಬುದ್ಧಿವಂತಿಕೆಯ ನಿರ್ಧಾರ ಎಂಬ ಅಭಿಪ್ರಾಯ ಕೇಳಿಬಂದಿದೆ. ದೊಡ್ಡ ಚಿತ್ರಗಳ ನಡುವೆ ಪೈಪೋಟಿಗಿಂತ ಲಾಭ ಮುಖ್ಯ. ಈ ಹಿಂದೆ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಕೂಡ ‘ಧುರಂಧರ್ 2’ ಜೊತೆಗಿನ ಸಂಘರ್ಷವನ್ನು ತಪ್ಪಿಸಿತ್ತು. ಈಗ ‘ಭೂತ್ ಬಂಗ್ಲ’ ಮುಂದಕ್ಕೆ ಹೋಗುತ್ತಿರುವುದಕ್ಕೆ ಈ ಸಿನಿಮಾದ ನಿರ್ಮಾಪಕರು ಕೂಡ ಸಮ್ಮತಿಸಿದ್ದಾರೆ ಎಂದು ವರದಿ ಆಗಿದೆ.
ವಿಶೇಷವೆಂದರೆ, ಏಪ್ರಿಲ್ 17ರಂದು ಈ ಹಿಂದೆ ಸಲ್ಮಾನ್ ಖಾನ್ ಅಭಿನಯದ ‘ಮಾತೃಭೂಮಿ’ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ ಆ ಚಿತ್ರದ ಕೆಲಸಗಳು ವಿಳಂಬವಾಗಿ ಮುಂದೂಡಲ್ಪಟ್ಟಿದೆ. ಈಗ ಆ ದಿನಾಂಕವನ್ನು ‘ಭೂತ್ ಬಂಗ್ಲಾ’ ಆಕ್ರಮಸಿಕೊಳ್ಳುತ್ತಿದೆ. ಸದ್ಯಕ್ಕಂತೂ ಎಲ್ಲ ಚಿತ್ರಮಂದಿರಗಳಲ್ಲಿ ‘ಧುರಂಧರ್ 2’ ಸಿನಿಮಾದ ಹವಾ ಜೋರಾಗಿದೆ. ಹಾಗಾಗಿ ಹೊಸ ಸಿನಿಮಾಗಳ ಬಿಡುಗಡೆಗೆ ಹಿಂದೇಟು ಹಾಕುವಂತಾಗಿದೆ.
ಇದನ್ನೂ ಓದಿ: ‘ಧುರಂಧರ್ 2’ ಅಬ್ಬರ: ಭಾರತದಲ್ಲಿ 10 ದಿನಕ್ಕೆ 700 ಕೋಟಿ ರೂಪಾಯಿ ದಾಟಿದ ಕಲೆಕ್ಷನ್
‘ಭೂತ್ ಬಂಗ್ಲ’ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದ್ದರಿಂದ ಟ್ರೇಲರ್ ಬಿಡುಗಡೆಯಲ್ಲೂ ಬದಲಾವಣೆಯಾಗಿದೆ. ಈ ಮೊದಲು ಮಾರ್ಚ್ 30ರಂದು ಟ್ರೇಲರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಅದರ ಬದಲು ಏಪ್ರಿಲ್ ಮೊದಲ ವಾರದಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಆಲೋಚಿಸಿದೆ ಎನ್ನಲಾಗಿದೆ. ಈಗಾಗಲೇ ಟೀಸರ್ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.