‘ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ವೈಯಕ್ತಿಕ ದ್ವೇಷಕ್ಕೆ ಆರ್ಯನ್​ ಅರೆಸ್ಟ್​’: ಕಿಶೋರ್​ ತಿವಾರಿ ಆರೋಪ

| Updated By: ಮದನ್​ ಕುಮಾರ್​

Updated on: Oct 19, 2021 | 1:58 PM

ಶಿವಸೇನಾ ಮುಖಂಡ ಕಿಶೋರ್​ ತಿವಾರಿ ಅವರು ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಆರೋಪ ಹೊರಿಸಿದ್ದಾರೆ. ಆರ್ಯನ್​ ಖಾನ್​ ಮುಂತಾದ ಸೆಲೆಬ್ರಿಟಿಗಳ ಮೇಲೆ ಪದೇಪದೇ ದಾಳಿ ನಡೆಯಲು ಸಮೀರ್ ವಾಂಖೆಡೆಯ ವೈಯಕ್ತಿಕ ದ್ವೇಷವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

‘ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ವೈಯಕ್ತಿಕ ದ್ವೇಷಕ್ಕೆ ಆರ್ಯನ್​ ಅರೆಸ್ಟ್​’: ಕಿಶೋರ್​ ತಿವಾರಿ ಆರೋಪ
ಆರ್ಯನ್ ಖಾನ್​, ಸಮೀರ್​ ವಾಂಖೆಡೆ
Follow us on

ಡ್ರಗ್ಸ್​ ಪಾರ್ಟಿ ಮಾಡಿದ ಆರೋಪದ ಮೇಲೆ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಕೆಲವರು ಎನ್​ಸಿಬಿ ಅಧಿಕಾರಿಗಳ ಪರ ಮಾತನಾಡುತ್ತಿದ್ದರೆ, ಇನ್ನೂ ಕೆಲವರು ಆರ್ಯನ್​ ಖಾನ್​ಗೆ ಬೆಂಬಲ ಸೂಚಿಸುತ್ತಿದ್ದಾರೆ. ಸ್ಟಾರ್​ ಪುತ್ರನನ್ನು ಬಂಧಿಸಿದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಮೇಲೆ ಕೆಲವರು ಆರೋಪ ಹೊರಿಸುತ್ತಿದ್ದಾರೆ. ತಮ್ಮ ವೈಯಕ್ತಿಕ ದ್ವೇಷಕ್ಕಾಗಿ ಅವರು ಬಾಲಿವುಡ್​ ಸೆಲೆಬ್ರಿಟಿಗಳನ್ನು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಶಿವಸೇನಾ ಮುಂಖಡ ಕಿಶೋರ್​ ತಿವಾರಿ ಆರೋಪಿಸಿದ್ದಾರೆ.

ಆರ್ಯನ್​ ಖಾನ್​ ಬಂಧನಕ್ಕೆ ಸಂಬಂಧಿಸಿದಂತೆ ಎನ್​ಸಿಬಿ ಅಧಿಕಾರಿಗಳ ಕಾರ್ಯದಲ್ಲಿ ಸುಪ್ರೀಂ ಕೋರ್ಟ್​ ಮಧ್ಯ ಪ್ರವೇಶಿಸಬೇಕು ಎಂದು ಕಿಶೋರ್​ ತಿವಾರಿ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ಒತ್ತಡದಿಂದ ಎನ್​ಸಿಬಿ ಅಧಿಕಾರಿಗಳು ಆರ್ಯನ್​ ಖಾನ್​ ಅವರನ್ನು ಬಂಧಿಸಿದ್ದಾರೆ ಎಂದು ಶಿವಸೇನಾ ಮತ್ತು ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ ಆರೋಪಿಸುತ್ತಿದೆ.

ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕಿಶೋರ್​ ತಿವಾರಿ ಅವರು ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಕೆಲವು ಆರೋಪಗಳನ್ನು ಹೊರಿಸಿದ್ದಾರೆ. ಸಮೀರ್​ ವಾಂಖೆಡೆ ಪತ್ನಿ ಕ್ರಾಂತಿ ಕೇದ್ಕರ್​ ಅವರು ಬಾಲಿವುಡ್​ನಲ್ಲಿ ಮಿಂಚಬೇಕು ಎಂದುಕೊಂಡಿದ್ದರು. ಆದರೆ ಯಶಸ್ವಿ ಆಗಲಿಲ್ಲ. ಆ ಸೇಡಿಗಾಗಿ ಅವರು ಬಾಲಿವುಡ್​ ಸೆಲೆಬ್ರಿಟಿಗಳ ಮೇಲೆ ಪದೇಪದೇ ದಾಳಿ ಮಾಡುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ನಡೆದ ಡ್ರಗ್ಸ್​ ದಾಳಿಗೆ ಈ ದ್ವೇಷವೇ ಕಾರಣ ಎಂಬುದು ಕಿಶೋರ್​ ತಿವಾರಿ ಆರೋಪ.

ಈ ಹಿಂದೆ ಗಾಯಕ ವಿಶಾಲ್​ ದದ್ಲಾನಿ ಅವರು ಕೂಡ ಎನ್​ಸಿಬಿ ಅಧಿಕಾರಿಗಳ ವಿರುದ್ಧ ಮಾತನಾಡಿದ್ದರು. ‘ಅದಾನಿ ಬಂದರಿನಲ್ಲಿ ಸಿಕ್ಕ 3 ಸಾವಿರ ಕೆಜಿ ತಾಲಿಬಾನಿ ಡ್ರಗ್ಸ್​ ಮತ್ತು ಬಿಜೆಪಿ ಶಾಸಕನ ಮಗ ಮಾಡಿದ ರೈತರ ಕೊಲೆ ಪ್ರಕರಣವನ್ನು ಮರೆಮಾಚಲು ಶಾರುಖ್​ ಖಾನ್​ ಮತ್ತು ಅವರ ಕುಟುಂಬವನ್ನು ಟಾರ್ಗೆಟ್​ ಮಾಡಲಾಗಿದೆ’ ಎಂದು ವಿಶಾಲ್​ ದದ್ಲಾನಿ ನೇರವಾಗಿ ಆರೋಪ ಮಾಡಿದ್ದರು. ಶಾರುಖ್​ ಖಾನ್​ ಜೊತೆ ಕೆಲಸ ಮಾಡಿದ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳು ಈಗ ಅವರ ಪರ ನಿಂತಿದ್ದಾರೆ. ಫರ್ಹಾ ಖಾನ್​, ಶೇಖರ್​ ಸುಮನ್​, ಹೃತಿಕ್​ ರೋಷನ್​ ಸೇರಿದಂತೆ ಅನೇಕರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್​ ಖಾನ್​; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್​ ಮಗನ ವರ್ತನೆ

‘ಇನ್ಮೇಲೆ ಒಳ್ಳೇ ಮನುಷ್ಯ ಆಗ್ತೀನಿ’; ಎನ್​ಸಿಬಿ ಅಧಿಕಾರಿಗಳಿಗೆ ಭರವಸೆ ನೀಡಿದ ಶಾರುಖ್​ ಪುತ್ರ ಆರ್ಯನ್​ ಖಾನ್​