ಎನ್​ಸಿಬಿ ವಿಚಾರಣೆಯಿಂದ ತಪ್ಪಿಸಿಕೊಂಡ ಆರ್ಯನ್​ ಖಾನ್​; ಶಾರುಖ್​ ಮಗ ಕೊಟ್ಟ ಕಾರಣ ಏನು?

| Updated By: ರಾಜೇಶ್ ದುಗ್ಗುಮನೆ

Updated on: Nov 07, 2021 | 9:44 PM

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರನ್ನು ಬಂಧಿಸಿದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಮೇಲೆ ಅನೇಕ ಆರೋಪಗಳು ಕೇಳಿಬಂದಿವೆ. ಈ ಬೆನ್ನಲ್ಲೇ, ಪ್ರಕರಣದ ತನಿಖೆಯಿಂದ ಸಮೀರ್​ ವಾಂಖೆಡೆಯನ್ನು ಹೊರಗಿಡಲಾಗಿದೆ.

ಎನ್​ಸಿಬಿ ವಿಚಾರಣೆಯಿಂದ ತಪ್ಪಿಸಿಕೊಂಡ ಆರ್ಯನ್​ ಖಾನ್​; ಶಾರುಖ್​ ಮಗ ಕೊಟ್ಟ ಕಾರಣ ಏನು?
ಆರ್ಯನ್ ಖಾನ್
Follow us on

ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದ ಆರ್ಯನ್​ ಖಾನ್​ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ, ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತ್ತು. ಆದರೆ, ಈಗ ಆರ್ಯನ್​ ಖಾನ್​ ಇಂದು (ನವೆಂಬರ್​​ 7) ವಿಚಾರಣೆಗೆ ಹಾಜರಾಗಿಲ್ಲ. ತಾವು ವಿಚಾರಣೆಗೆ ಏಕೆ ಹಾಜರಾಗುತ್ತಿಲ್ಲ ಎಂಬುದಕ್ಕೆ ಆರ್ಯನ್​ ಖಾನ್​ ಎನ್​ಸಿಬಿ ಅಧಿಕಾರಿಗಳಿಗೆ ಕಾರಣವನ್ನೂ ನೀಡಿದ್ದಾರೆ.

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರನ್ನು ಬಂಧಿಸಿದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಮೇಲೆ ಅನೇಕ ಆರೋಪಗಳು ಕೇಳಿಬಂದಿವೆ. ಈ ಬೆನ್ನಲ್ಲೇ, ಪ್ರಕರಣದ ತನಿಖೆಯಿಂದ ಸಮೀರ್​ ವಾಂಖೆಡೆಯನ್ನು ಹೊರಗಿಡಲಾಗಿದೆ. ಈ ಪ್ರಕರಣದ ಬಗ್ಗೆ ಕೇಂದ್ರದ ಉನ್ನತ ತಂಡ ತನಿಖೆ ನಡೆಸಲು ಆರಂಭಿಸಿದೆ. ಡಿಡಿಜಿ ಎನ್​ಸಿಬಿ ಸಂಜಯ್​ ಸಿಂಗ್​ ಅವರು ಆರ್ಯನ್​ ಖಾನ್​ಗೆ ಬುಲಾವ್​ ನೀಡಿದ್ದರು. ಆದರೆ, ಆರ್ಯನ್​ಗೆ ಕೊವಿಡ್​ ಲಕ್ಷಣ ಕಾಣಿಸಿಕೊಂಡಿದೆ. ಈ ಕಾರಣಕ್ಕೆ ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಕೊವಿಡ್​ ಲಕ್ಷಣ ಕಾಣಿಸಿಕೊಂಡಿದ್ದರಿಂದ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ, ವಿಚಾರಣೆಗೆ ಬೇರೊಂದು ದಿನಾಂಕ ನೀಡುವಂತೆ ಅವರು ಕೋರಿದ್ದಾರೆ. ಇದಕ್ಕೆ ಎನ್​ಸಿಬಿ ಅಧಿಕಾರಿಗಳು ಸಮ್ಮತಿ ನೀಡಿದ್ದಾರೆ. ಅವರ ಪರಿಸ್ಥಿತಿ ನೋಡಿಕೊಂಡು ಮುಂದಿನ ವಿಚಾರಣೆ ದಿನಾಂಕ ನಿಗದಿ  ಮಾಡಲು ನಿರ್ಧರಿಸಲಾಗಿದೆ.

ಆರ್ಯನ್​ ಖಾನ್​ ಭಾಗಿಯಾಗಿದ್ದರು ಎನ್ನಲಾದ ರೇವ್​ ಪಾರ್ಟಿ ಮೇಲೆ ದಾಳಿ ನಡೆದ ದಿನ ಎನ್​ಸಿಬಿ ಅಧಿಕಾರಿಗಳ ಜೊತೆ ಖಾಸಗಿ ಡಿಟೆಕ್ಟೀವ್​ ಕಿರಣ್​ ಗೋಸಾವಿ ಮತ್ತು ಅವರ ಬಾಡಿಗಾರ್ಡ್​ ಪ್ರಭಾಕರ್​ ಸೈಲ್​ ಕೂಡ ಹಾಜರಿದ್ದರು. ಇವರಿಬ್ಬರು ಪ್ರಮುಖ ಸಾಕ್ಷಿಗಳಾಗಿದ್ದಾರೆ. ಆದರೆ ದಾಳಿ ಬಳಿಕ ಕಿರಣ್​ ಗೋಸಾವಿ ನಾಪತ್ತೆ ಆಗಿದ್ದರು. ಈಗ ಅವರು ಪುಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಎನ್​ಸಿಬಿ ಅಧಿಕಾರಿಗಳು ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡರು ಮತ್ತು ಬಹುಕೋಟಿ ಡೀಲ್​ ಬಗ್ಗೆ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ ಎಂದು ಪ್ರಭಾಕರ್​ ಸೈಲ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದರ ಜೊತೆ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ ಮುಖಂಡ ನವಾಬ್​ ಮಲಿಕ್​ ಕೂಡ ಸಮೀರ್​ ವಾಂಖೆಡೆ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ಇವುಗಳ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರವು ತನಿಖೆ ನಡೆಸಲು ವಿಶೇಷ ತಂಡ ರಚಿಸಿದೆ. ಇತ್ತೀಚೆಗೆ ತನಿಖಾ ನೇತೃತ್ವವೂ ಸಮೀರ್​ ಅವರ ಕೈತಪ್ಪಿತ್ತು.

ಇದನ್ನೂ ಓದಿ: ವಿದೇಶಿ ಮಾಧ್ಯಮಗಳಿಂದ ಬಿಗ್​ ಪ್ಲ್ಯಾನ್​: ಮಗನ ಡ್ರಗ್ಸ್​ ಕೇಸ್​ ಹಿಂದಿನ ರಹಸ್ಯ ಬಿಚ್ಚಿಡ್ತಾರಾ ಶಾರುಖ್​?

Published On - 9:38 pm, Sun, 7 November 21