‘ಹೇರಾ ಫೇರಿ 3’ ಚಿತ್ರ ಸೆಟ್ಟೇರೋದೇ ಡೌಟ್; ಅಕ್ಷಯ್ ಜೊತೆ ಬೇರೆ ಸಿನಿಮಾ ಶುರು

'ಹೇರಾ ಫೇರಿ 3' ಸಿನಿಮಾ ಕಾನೂನು ತೊಡಕುಗಳು ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದು, ನಿರ್ದೇಶಕ ಪ್ರಿಯದರ್ಶನ್ ಚಿತ್ರದಿಂದ ಹೊರನಡೆದಿದ್ದಾರೆ. ಈ ನಿರಾಶೆಯ ಮಧ್ಯೆಯೂ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಸಿಕ್ಕಿದ್ದು, ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಜೋಡಿ ತಮ್ಮ 9ನೇ ಹೊಸ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

‘ಹೇರಾ ಫೇರಿ 3’ ಚಿತ್ರ ಸೆಟ್ಟೇರೋದೇ ಡೌಟ್; ಅಕ್ಷಯ್ ಜೊತೆ ಬೇರೆ ಸಿನಿಮಾ ಶುರು
ಪ್ರಿಯದರ್ಶನ್- ಹೇರಾ ಫೇರಿ

Updated on: Jul 02, 2026 | 6:43 AM

ಮುಖ್ಯಾಂಶಗಳು

  • ನೆನೆಗುದಿಗೆ ಬಿದ್ದ 'ಹೇರಾ ಫೇರಿ 3': ಪ್ರಿಯದರ್ಶನ್ ಎಕ್ಸಿಟ್ ಬೆನ್ನಲ್ಲೇ ಮೂಲೆಗುಂಪಾಯಿತೇ ಐಕಾನಿಕ್ ಕಾಮಿಡಿ ಸೀಕ್ವೆಲ್?
  • ಕಾನೂನು ಸಮರ ಮತ್ತು ಪರೇಶ್ ರಾವಲ್ ನಿರ್ಧಾರ: ಸಿನಿಮಾ ಬಿಟ್ಟು ಹೊರನಡೆಯಲು ಅಸಲಿ ಕಾರಣಗಳೇನು?
  • ಮತ್ತೆ ಒಂದಾದ ಸೂಪರ್ ಹಿಟ್ ಜೋಡಿ: ಅಕ್ಷಯ್ ಕುಮಾರ್-ಪ್ರಿಯದರ್ಶನ್ 9ನೇ ಸಿನಿಮಾಗೆ ಭರ್ಜರಿ ಚಾಲನೆ

‘ಹೇರಾ ಫೇರಿ 3’ ಸಿನಿಮಾ (Hera Pheri 3) ಕುರಿತು ಕಾಯುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಈಗ ಭಾರಿ ನಿರಾಶೆಯಾಗಿದೆ. ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ನಿಂದ ಹೊರನಡೆದಿದ್ದಾರೆ. ಈ ವಿಷಯವನ್ನು ಅವರೇ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಇದರಿಂದಾಗಿ ಇಡೀ ಸಿನಿಮಾದ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ಈ ಸಿನಿಮಾ ನಿಲ್ಲೋದು ಬಹುತೇಕ ಖಚಿತವಾಗಿದೆ. ಮತ್ತೊಂದು ಖುಷಿಯ ವಿಷಯ ಎಂದರೆ ಅಕ್ಷಯ್ ಕುಮಾರ್ ಜೊತೆ ಪ್ರಿಯದರ್ಶನ್ ಹೊಸ ಸಿನಿಮಾ ಘೋಷಿಸಿದ್ದಾರೆ. ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿರುವ 9ನೇ ಸಿನಿಮಾ ಇದಾಗಿದೆ.

ಬಾಲಿವುಡ್‌ನ ಸಾರ್ವಕಾಲಿಕ ಅತ್ಯುತ್ತಮ ಕಾಮಿಡಿ ಚಿತ್ರಗಳಲ್ಲಿ ‘ಹೇರಾ ಫೇರಿ’ ಮುಂಚೂಣಿಯಲ್ಲಿದೆ. ರಾಜು, ಶ್ಯಾಮ್ ಮತ್ತು ಬಾಬುರಾವ್ ಪಾತ್ರಗಳು ಇಂದಿಗೂ ಮನೆಮಾತಾಗಿವೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಜೋಡಿಯನ್ನು ಮತ್ತೊಮ್ಮೆ ಒಟ್ಟಿಗೆ ನೋಡಲು ಪ್ರೇಕ್ಷಕರು ಕಾಯುತ್ತಿದ್ದರು. ಆದರೆ ಪ್ರಿಯದರ್ಶನ್ ಅವರ ಎಕ್ಸಿಟ್ ಇಡೀ ಚಿತ್ರತಂಡಕ್ಕೆ ದೊಡ್ಡ ಹಿನ್ನಡೆ ತಂದಿದೆ.

ಚಿತ್ರರಂಗದಲ್ಲಿ ಹಲವು ದಿನಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ಈಗ ಅಧಿಕೃತ ಮುದ್ರೆ ಬಿದ್ದಿದೆ. ಪ್ರಿಯದರ್ಶನ್ ಈ ಪ್ರಾಜೆಕ್ಟ್‌ನಿಂದ ಸಂಪೂರ್ಣವಾಗಿ ಹೊರ ನಡೆದಿದ್ದಾರೆ. ತಾವು ಸದ್ಯಕ್ಕೆ ‘ಹೇರಾ ಫೇರಿ 3’ ಚಿತ್ರದ ಜೊತೆ ಗುರುತಿಸಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ. ಚಿತ್ರದ ನಿರ್ಮಾಪಕ ಫಿರೋಜ್ ನೀಡಿರುವ ಹೇಳಿಕೆ ಸತ್ಯ ಎಂದು ಅವರು ಒಪ್ಪಿಕೊಂಡಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಕಾನೂನು ತೊಂದರೆಗಳು ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ. ಈ ಕಾರಣಗಳಿಂದಾಗಿ ಸಿನಿಮಾ ಎಂದಿಗೂ ತೆರೆಗೆ ಬರುವುದು ಸಾಧ್ಯವಿಲ್ಲ ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾದ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದಾಗಲೇ ನಟ ಪರೇಶ್ ರಾವಲ್ ದಿಢೀರನೆ ಚಿತ್ರದಿಂದ ಹೊರನಡೆದಿದ್ದರು. ಈ ನಿರ್ಧಾರ ದೊಡ್ಡ ಕಾನೂನು ಹೋರಾಟಕ್ಕೆ ದಾರಿ ಮಾಡಿಕೊಟ್ಟಿತ್ತು. ತಮಗೆ ನಟಿಸಲು ಆಸಕ್ತಿ ಇಲ್ಲ ಎಂಬ ಕಾರಣ ನೀಡಿ ಪರೇಶ್ ರಾವಲ್ ಚಿತ್ರದಿಂದ ಹೊರ ನಡೆದಿದ್ದರು. ಇದಕ್ಕಾಗಿ ತಮಗೆ ಸಿಕ್ಕಿದ್ದ 11 ಲಕ್ಷ ರೂಪಾಯಿ ಅಡ್ವಾನ್ಸ್ ಹಣವನ್ನು 15 ಪ್ರತಿಶತ ಬಡ್ಡಿಯೊಂದಿಗೆ ವಾಪಸ್ ಮಾಡಿದ್ದಾರೆ.

ಇದನ್ನೂ ಓದಿ: ‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ಹೊರ ನಡೆದ ವಿಚಾರ; ಅಚ್ಚರಿಯ ಹೇಳಿಕೆ ನೀಡಿದ ನಿರ್ದೇಶಕ

ಪ್ರಿಯದರ್ಶನ್ ಅವರ ವಿಶಿಷ್ಟ ಮೇಕಿಂಗ್ ಶೈಲಿ ಈ ಚಿತ್ರದ ಜೀವಾಳವಾಗಿತ್ತು. ಈಗ ಅವರು ಇಲ್ಲದೆ ಸಿನಿಮಾ ಮೂಡಿಬಂದರೂ ಹಳೆಯ ಮ್ಯಾಜಿಕ್ ಮರುಕಳಿಸುವುದು ಕಷ್ಟ ಎನ್ನಲಾಗುತ್ತಿದೆ. ಸದ್ಯಕ್ಕಂತೂ ಕಾನೂನು ಹೋರಾಟ ಮತ್ತು ಒಳಜಗಳಗಳ ಮಧ್ಯೆ ಒಂದು ಅದ್ಭುತ ಕಾಮಿಡಿ ಸೀಕ್ವೆಲ್ ನೆನೆಗುದಿಗೆ ಬಿದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Follow Us