
ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಪುತ್ರ ಜುನೈದ್ ಖಾನ್ ನಟನೆಯ ಎರಡನೇ ಸಿನಿಮಾ ‘ಏಕ್ ದಿನ್’ (Ek Din) ಇತ್ತೀಚೆಗೆ ಬಿಡುಗಡೆ ಆಯಿತು. ಈ ಸಿನಿಮಾ ಮೇಲೆ ಅವರಿಗೆ ಬಹಳ ನಿರೀಕ್ಷೆ ಇತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಮಕಾಡೆ ಮಲಗಿದೆ. ‘ಏಕ್ ದಿನ್’ ಚಿತ್ರದ ಸೋಲು ಸ್ವತಃ ಜುನೈದ್ ಖಾನ್ ಅವರಿಗಿಂತಲೂ ಅಮೀರ್ ಖಾನ್ ಅವರನ್ನೇ ಹೆಚ್ಚು ಕಾಡುತ್ತಿದೆ ಎಂಬ ವಿಷಯ ಈಗ ಹೊರಬಿದ್ದಿದೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜುನೈದ್ ಖಾನ್ (Junaid Khan) ಅವರು ಚಿತ್ರದ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ.
‘ಏಕ್ ದಿನ’ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಹಾಗೂ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಮೇ 1ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನ ಕೇವಲ 1 ಕೋಟಿ ರೂಪಾಯಿ ಗಳಿಸಿತು. ನಂತರದ ದಿನಗಳಲ್ಲಿ ಗಳಿಕೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿತು. ವರದಿಗಳ ಪ್ರಕಾರ, 11 ದಿನಗಳಲ್ಲಿ ಈ ಚಿತ್ರವು ವಿಶ್ವದಾದ್ಯಂತ ಕೇವಲ 5.44 ಕೋಟಿ ರೂಪಾಯಿ ಮತ್ತು ಭಾರತದಲ್ಲಿ 4.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಸಿನಿಮಾವನ್ನು ನಿರ್ಮಾಣ ಮಾಡಿದ್ದ ಆಮಿರ್ ಖಾನ್ ಅವರಿಗೆ ಚಿತ್ರದ ಮೇಲೆ ಅಪಾರ ನಂಬಿಕೆ ಇತ್ತು. ಆದರೆ ಸಿನಿಮಾ ಸೋತಾಗ ಅವರು ತುಂಬಾ ಭಾವುಕರಾಗಿದ್ದಾರೆ ಎಂದು ಜುನೈದ್ ಹೇಳಿದ್ದಾರೆ. ಇದು ಸಾಯಿ ಪಲ್ಲವಿ ಅವರು ಬಾಲಿವುಡ್ನಲ್ಲಿ ನಟಿಸಿದ ಮೊದಲ ಸಿನಿಮಾ ಆಗಿದ್ದರೂ ಕೂಡ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲ ಆಯಿತು. ಬಾಕ್ಸ್ ಆಫೀಸ್ನಲ್ಲಿ ಹೀನಾಯ ಕಲೆಕ್ಷನ್ ಆಯಿತು.
‘ನನ್ನ ತಂದೆ ಇನ್ನೂ ಆ ಸೋಲಿನ ನೋವಿನಲ್ಲಿದ್ದಾರೆ. ಇಷ್ಟು ವರ್ಷಗಳ ಅನುಭವದ ನಂತರವೂ ಚಿತ್ರದ ವೈಫಲ್ಯ ಅವರನ್ನು ತುಂಬಾ ಕಾಡುತ್ತದೆ. ಅವರು ಸಿನಿಮಾವನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ಆ ಸಿನಿಮಾ ಅವರಿಗೆ ಇಷ್ಟವಾಗಿದ್ದರೆ ಅದರ ಸೋಲು ಅವರಿಗೆ ಅತಿಯಾಗಿ ನೋವು ನೀಡುತ್ತದೆ’ ಎಂದು ಜುನೈದ್ ವಿವರಿಸಿದ್ದಾರೆ.
ಇದನ್ನೂ ಓದಿ: ಮಗನ ಸಿನಿಮಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಆಮಿರ್ ಖಾನ್; ವಿಡಿಯೋ ವೈರಲ್
ಜುನೈದ್ ಖಾನ್ ಅವರ ಮೊದಲ ಚಿತ್ರ ‘ಮಹಾರಾಜ್’ ಒಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಆದರೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅವರ ‘ಲವ್ಯಪ’ ಮತ್ತು ‘ಏಕ್ ದಿನ್’ ಸಿನಿಮಾಗಳು ಸತತವಾಗಿ ಸೋಲು ಕಂಡಿವೆ. ಮುಂದಿನ ದಿನಗಳಲ್ಲಿ ಜುನೈದ್ ‘ರಾಗಿಣಿ MMS 3’ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.